ಗುಪ್ತಚರ ಸ್ಪೋಟಕ ವರದಿ: ವಾಣಿಜ್ಯ ನಗರಿ ಮುಂಬೈ ಹೈಅಲರ್ಟ್
ಮುಂಬೈ, ಡಿ 31 (ಎಎನ್ಐ): ಓಮ್ರಿಕಾನ್ ವೈರಸ್ ನಿಂದ ತತ್ತರಿಸಿರುವ ವಾಣಿಜ್ಯ ನಗರಿಗೆ ಇನ್ನೊಂದು ತಲೆನೋವು ಎದುರಾಗಿದೆ. ಖಲಿಸ್ಥಾನಿ ಉಗ್ರರ ಕಣ್ಣು ನಗರದ ಮೇಲೆ ಬಿದ್ದಿದ್ದು ಕಟ್ಟೆಚ್ಚರದಲ್ಲಿ ಇರುವಂತೆ ಗುಪ್ತಚರ ಇಲಾಖೆ, ಮಹಾರಾಷ್ಟ್ರ ಗೃಹ ಇಲಾಖೆಗೆ ತುರ್ತು ಎಚ್ಚರಿಕೆಯನ್ನು ರವಾನಿಸಿದೆ.
ಇತ್ತೀಚೆಗೆ ಲುಧಿಯಾನ ಕೋರ್ಟ್ ಆವರಣದಲ್ಲಿ ಐಇಡಿ ಸ್ಪೋಟ ನಡೆಸಿದ ಖಲಿಸ್ಥಾನಿ ಉಗ್ರರು ಮುಂಬೈ ಮಹಾನಗರದ ಮೇಲೆ ಕಣ್ಣಿಟ್ಟಿದ್ದು, ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲೇ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ.
ಗುಪ್ತಚರ ಇಲಾಖೆಯ ಎಚ್ಚರಿಕೆಯ ನಂತರ ಪೊಲೀಸ್ ಇಲಾಖೆ ಹೈಅಲರ್ಟ್ ಘೋಷಿಸಿದ್ದು, ಗಸ್ತು ತಿರುಗುವಿಕೆಯನ್ನು ತ್ವರಿತಗೊಳಿಸಿದ್ದಾರೆ. ಜೊತೆಗೆ, ರಜೆಯಲ್ಲಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಈ ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಇಂದು (ಡಿ 31) ಇಡೀ ನಗರವನ್ನು ಹದ್ದಿನ ಕಣ್ಣಿನಲ್ಲಿ ಕಾಯಲು ಪೊಲೀಸ್ ಇಲಾಖೆ ಸರ್ವಸಿದ್ದತೆಯನ್ನು ಮಾಡಿಕೊಂಡಿದೆ. ಆಯಕಟ್ಟಿನ ಪ್ರದೇಶಗಳಾದ ಛತ್ರಪತಿ ಶಿವಾಜಿ ಟರ್ಮಿನಲ್, ಬಾಂದ್ರಾ ಗೇಟ್, ಚರ್ಚಗೇಟ್, ತಾಜ್ ಹೋಟೆಲ್, ಕುರ್ಲಾ ಮುಂತಾದ ಕಡೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
"ಖಲಿಸ್ಥಾನಿ ಪರ ಹೋರಾಟಗಾರ, ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮುಂಬೈ ನಗರದ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸುವ ಸಂಚಿನ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಇವರಿಗೆ, ಪಾಕಿಸ್ತಾನದ ಇಂಟೆಲಿಜೆನ್ಸ್ ಬೆಂಬಲವಿದೆ" ಎಂದು ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಪಾಕಿಸ್ತಾನದ ಐಎಸ್ಐ, ಖಲಿಸ್ಥಾನ ಪರವಿರುವ ಇತರ ಸಂಘಟನೆಗಳಿಗೂ ನೆರವನ್ನು ನೀಡುತ್ತಿದೆ. ಮುಂಬೈನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಹಾಯ ಮಾಡುತ್ತಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ದಾಳಿ ನಡೆಸುವ ಹುನ್ನಾರ ನಡೆಸಿದೆ. ಹಾಗಾಗಿ, ಅಲರ್ಟ್ ಆಗಿರಲು ಗುಪ್ತಚರ ಇಲಾಖೆಯೂ ಸೂಚನೆಯನ್ನು ನೀಡಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.












Click it and Unblock the Notifications