ಮುಂಬೈನಲ್ಲಿ ಆಗಸ್ಟ್ 15ರಿಂದ ಸ್ಥಳೀಯ ರೈಲುಗಳ ಸಂಚಾರ ಆರಂಭ, ಆದರೆ...
ಮುಂಬೈ, ಆಗಸ್ಟ್ 09: ಮುಂಬೈನಲ್ಲಿ ಆಗಸ್ಟ್ 15ರಿಂದ ಸ್ಥಳೀಯ ರೈಲುಗಳ ಸಂಚಾರ ಆರಂಭಗೊಳ್ಳಲಿದ್ದು ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಕೊರೊನಾ ನಿಯಮವನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ, ಪ್ರಯಾಣಿಕರು ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿರಬೇಕು, ಎರಡನೇ ಡೋಸ್ ಪಡೆದ ಕನಿಷ್ಠ 14 ದಿನಗಳು ಕಳೆದಿರಬೇಕು ಎಂದು ಹೇಳಿದ್ದಾರೆ.
ಮುಂಬೈ: 3 ಗಂಟೆಗಳಲ್ಲಿ 36 ಮಿ.ಮೀ ಮಳೆ, ರೈಲುಗಳ ಸಂಚಾರದಲ್ಲಿ ವ್ಯತ್ಯಯ
''ನಾವು ಕೆಲವು ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದೇವೆ, ಆದರೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತೆ ಲಾಕ್ಡೌನ್ ಮಾಡುತ್ತೇವೆ, ಮೂರನೇ ಅಲೆಯನ್ನು ಆಹ್ವಾನಿಸದಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ'' ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಲೋಕಲ್ ರೈಲುಗಳ ಸಂಚಾರ ಆಗಸ್ಟ್ 15 ರಿಂದ ಆರಂಭಗೊಳ್ಳುತ್ತದೆ, ಜನರು ಎರಡೂ ಡೋಸ್ಗಳನ್ನು ತೆಗೆದುಕೊಂಡಿದ್ದರೆ ಮತ್ತು ಎರಡನೇ ಡೋಸ್ ತೆಗೆದುಕೊಂಡಾಗ ಅಪ್ಡೇಟ್ ಮಾಡಬಹುದಾದ ಅಪ್ಲಿಕೇಷನ್ ಒಂದನ್ನು ನಾವು ಆರಂಭಿಸುತ್ತೇವೆ.
ಜನರು ಅಪ್ಲಿಕೇಷನ್ನಿಂದ ಅಥವಾ ಕಚೇರಿಗಳಿಂದ ಪಾಸ್ಗಳನ್ನು ತೆಗೆದುಕೊಳ್ಳಬಹುದಾಗಿದೆ. ಸ್ಮಾರ್ಟ್ಫೋನ್ ಇಲ್ಲದ ಪ್ರಯಾಣಿಕರು ನಗರದ ಮುನ್ಸಿಪಲ್ ವಾರ್ಡ್ ಕಚೇರಿಗಳು ಹಾಗೂ ಉಪನಗರ ರೈಲ್ವೆ ನಿಲ್ದಾಣಗಳಿಂದ ಫೋಟೊಪಾಸ್ ತೆಗೆದುಕೊಳ್ಳಬಹುದು.
ಈ ಪಾಸ್ಗಳು ಕ್ಯೂಆರ್ ಕೋಡ್ ಹೊಂದಿರುವ ಕಾರಣ ಆಡಳಿತವು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಯಾರೊಬ್ಬರಿಗೂ ಅಕ್ರಮವಾಗಿ ಪಾಸ್ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಸಂಪೂರ್ಣ ಲಸಿಕೆ ಪಡೆಯಿರಿ ನೆಮ್ಮದಿಯಿಂದ ಪ್ರಯಾಣಿಸಿ.
ಮಹಾರಾಷ್ಟ್ರದಲ್ಲಿ ಭಾನುವಾರ 5508 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 151 ಮಂದಿ ಮೃತಪಟ್ಟಿದ್ದಾರೆ.
ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಕೊರೊನಾ 3 ನೇ ಅಲೆ ಆತಂಕ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ 3ನೇ ಡೋಸ್ ಲಸಿಕೆ ನೀಡುವತ್ತ ಆರೋಗ್ಯ ಇಲಾಖೆ ಯೋಚಿಸಿದೆ.
ಸೋಂಕಿತರನ್ನು ನಿಭಾಯಿಸುವಲ್ಲಿ, ಅವರಿಗೆ ಚಿಕಿತ್ಸೆ ನೀಡುವಲ್ಲಿ ಹೆಲ್ತ್ ವಾರಿಯರ್ಸ್ ಅತ್ಯಂತ ಪ್ರಮುಖ ಪಾತ್ರ ವಹಿಸುವುದರಿಂದ ಅವರನ್ನು ಸೋಂಕಿನಿಂದ ಬಚಾವು ಮಾಡಲು ಈ ಸಂಬಂಧ ಚರ್ಚೆ ಶುರುವಾಗಿದೆ.
ಪ್ರಸ್ತುತ 2 ಡೋಸ್ ಕೊರೊನಾ ಲಸಿಕೆ ಪಡೆದಿರುವವರಿಗೂ ಕೊರೊನಾ ಸೋಂಕು ದೃಢವಾಗುತ್ತಿದ್ದು, ಅಪಾಯವನ್ನು ತಡೆಯಲು 3ನೇ ಡೋಸ್ ಅನಿವಾರ್ಯ ಎನ್ನಲಾಗುತ್ತಿದೆ. ಹೀಗಾಗಿ ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಫನಾ ಹಾಗೂ ಸರ್ಕಾರದ ಹಂತದಲ್ಲಿ ಸಮಾಲೋಚನೆ ನಡೆಯುತ್ತಿದ್ದು, 3ನೇ ಡೋಸ್ ನೀಡುವುದಕ್ಕೆ ಐಸಿಎಂಆರ್ ಅನುಮತಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ.
ಕೊರೊನಾ ಮೂರನೇ ಅಲೆ ವಿರುದ್ಧ ಹೋರಾಡಲು ವೈದ್ಯರು ತಯಾರಿ ಆರಂಭಿಸಿದ್ದು ಅವರ ಆರೋಗ್ಯವನ್ನು ರಕ್ಷಿಸುವುದು ಬಹುಮುಖ್ಯವಾಗಿದೆ. ಮೂರನೇ ಅಲೆಯಿಂದ ಪಾರಾಗಲು ಎರಡು ಡೋಸ್ ಲಸಿಕೆ ಸಾಲದು, ಮೂರನೇ ಡೋಸ್ ಲಸಿಕೆಗೆ ನೀಡಬೇಕು ಎಂದು ಫ್ರಂಟ್ಲೈನ್ ವಾರಿಯರ್ಸ್ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ 1.99 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಎರಡು ಡೋಸ್ ವ್ಯಾಕ್ಸಿನ್ ನೀಡಲಾಗಿದೆಯಾದರೂ ಬಹುತೇಕರಿಗೆ ಪುನಃ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಗೆ ಪ್ರವೇಶ ನೀಡುವ ಮುನ್ನ ಮತ್ತೊಂದು ಸುತ್ತಿನ ಲಸಿಕೆಗೆ ನೀಡಲು ತಯಾರಿ ಆರಂಭವಾಗಿದೆ.
ಈಗಾಗಲೇ ICMR ನಿಂದಲೂ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಲಸಿಕೆ ನೀಡಲು ಚರ್ಚೆ ನಡೆದಿದೆ ಎನ್ನಲಾಗಿದ್ದು, ಐಸಿಎಂಆರ್ನ ಅಂತಿಮ ಸೂಚನೆಗೆ ಆರೋಗ್ಯ ಇಲಾಖೆ ಕಾಯುತ್ತಿದೆ. ಮೂರನೇ ಹಂತದ ಲಸಿಕೆ ಬೂಸ್ಟರ್ ಡೋಸ್ ಆಗಿ ಕಾರ್ಯ ನಿರ್ವಹಿಸಲಿದ್ದು, ಈ ಬಗ್ಗೆ ಬಿಬಿಎಂಪಿಯಿಂದಲೂ ಐಸಿಎಂಆರ್ಗೆ ಪ್ರಸ್ತಾವನೆ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಕೊರೊನಾ ಲಸಿಕೆ ನೀಡುವುದಕ್ಕೆ ಚರ್ಚೆಗಳು ಆರಂಭವಾಗಿವೆಯೇ ವಿನಃ ಸಾರ್ವಜನಿಕರಿಗೆ ನೀಡುವ ಕುರಿತು ಯಾವುದೇ ಮಾಹಿತಿ ಇಲ್ಲ.
Recommended Video
ಅಲ್ಲದೇ, ಸಾರ್ವಜನಿಕರಿಗೆ ಇನ್ನೂ 2ನೇ ಡೋಸ್ ಲಸಿಕೆ ಪಡೆಯುವುದೇ ಕಷ್ಟವಾಗಿರುವುದರಿಂದ ತಕ್ಷಣದಿಂದಲೇ ಆರೋಗ್ಯ ಕಾರ್ಯಕರ್ತರಿಗೆ 3ನೇ ಡೋಸ್ ನೀಡಲಾರಂಭಿಸಿದರೆ ಜನ ತಿರುಗಿ ಬೀಳುವ ಸಾಧ್ಯತೆ ಇದ್ದು, ಲಸಿಕೆ ಪೂರೈಕೆ ಹೆಚ್ಚಳವಾದ ನಂತರವಷ್ಟೇ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ನೀಡಲಾಗುವುದು ಎಂದು ತಿಳಿದುಬಂದಿದೆ.