ಮುಂಬೈನ ಜಿಎಸ್ ಬಿ ಸಮಾಜದ 'ರಿಚ್' ಗಣೇಶ
ಮುಂಬೈ,ಆ.28: ಬೆಲೆಯೇರಿಕೆ, ಆರ್ಥಿಕ ಕುಸಿತದ ಬಿಸಿ ಗಣಪತಿಗೆ ಮಾತ್ರ ತಟ್ಟಿದಂತಿಲ್ಲ. ಇದಕ್ಕೆ ಪುರಾವೆಯೆಂಬಂತೆ ಈ ವರ್ಷ ಮುಂಬೈ ಕಿಂಗ್ ಸರ್ಕಲ್ಸ್ನ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸೇವಾ ಮಂಡಲದ ಗಣೇಶ ಚಿನ್ನ-ಬೆಳ್ಳಿಯಿಂದ ತಯಾರಿಸಿದ 96 ಲಕ್ಷ ರೂ. ಮೌಲ್ಯದ ಬೃಹತ್ ಹಾರದೊಂದಿಗೆ ಕಂಗೊಳಿಸಲಿದ್ದಾನೆ.
ವಿಶೇಷವೆಂದರೆ ಇದರ ತಯಾರಿ ಕೆಲಸ ಉಡುಪಿಯ ಸ್ವರ್ಣಾ ಜ್ಯುವೆಲ್ಲರಿಯಲ್ಲಿ ನಡೆಯಿತು.. ಸುಮಾರು 7.75 ಕೋಟಿ ರು ಪ್ರಾಯೋಜಕತ್ವ ಹಾಗೂ 259 ಕೋಟಿ ರು ವಿಮೆ ಮಾಡಿಸಿಕೊಂಡ ಈ ಮಂಡಲ ದಾಖಲೆ ಬರೆದಿದೆ.
2.5 ಕೆ.ಜಿ. ಚಿನ್ನ ಮತ್ತು 12 ಕೆ.ಜಿ. ಬೆಳ್ಳಿ ಬಳಸಿ ಹಾರ ನಿರ್ಮಿಸಲಾಗುತ್ತಿದೆ. ಚಿನ್ನಕ್ಕಾಗಿ 75 ಲಕ್ಷ ರೂ. ಮತ್ತು ಬೆಳ್ಳಿಗಾಗಿ 7 ಲಕ್ಷ ರೂ.ವೆಚ್ಚವಾಗಿದ್ದು ಹಾರದ ತಯಾರಿ ವೆಚ್ಚವೂ ಸೇರಿ 96 ಲಕ್ಷ ರೂ. ತನಕ ತಲುಪಲಿದೆ. ವೈಜಯಂತಿ ಮಾಲಾ ಎಂಬ ಹೆಸರಿನಲ್ಲಿ ಕರೆಯುವ ಹಾರ 14 ಅಡಿ ಉದ್ದವಿದೆ. ಈ ಹಾರದಲ್ಲಿ 16 ಸಣ್ಣಗಾತ್ರದ ಮತ್ತು 16 ದೊಡ್ಡ ಗಾತ್ರದ ಗಣಪತಿ ಪಡಿಯಚ್ಚುಗಳನ್ನು ಕೆತ್ತಲಾಗಿದೆ ಎಂದು ಜಿಎಸ್ ಬಿ ಸೇವಾ ಮಂಡಲದ ಪ್ರತಿನಿಧಿ ಸತೀಶ್ ನಾಯಕ್ ಹೇಳಿದ್ದಾರೆ. [ಬಣ್ಣದ ಗಣಪತಿಗೆ ಬೈ, ಮಣ್ಣಿನ ಗಣೇಶನಿಗೆ ಜೈ]
ಮುಂಬೈ ಜಿಎಸ್ಬಿ ಸೇವಾ ಮಂಡಲದ ಗಣಪತಿ ಜಗತ್ತಿನಲ್ಲೇ ಶ್ರೀಮಂತ ಎಂದು ಕೀರ್ತಿ ವಿಖ್ಯಾತನಾಗಿದ್ದು, ಸುಮಾರು 80 ಕೆ.ಜಿ.ಗೂ ಅಧಿಕ ಚಿನ್ನಾಭರಣಗಳಿಂದ ಗಣೇಶೋತ್ಸವ ಅವಧಿಯಲ್ಲಿ ಅಲಂಕೃತನಾಗಿ ಕಂಗೊಳಿಸುತ್ತಾನೆ.

ಆ.29ರಂದು ಪ್ರಾರಂಭವಾಗುವ ಗಣೇಶೋತ್ಸವ ಅವಧಿಯಲ್ಲಿ ಈ ಹಾರವನ್ನು ಗಣೇಶನಿಗೆ ಹಾಕಲಾಗುವುದು. ಪ್ರಸ್ತುತ ಉಡುಪಿಯ ಸ್ವರ್ಣಾ ಜ್ಯುವೆಲ್ಲರಿಯಲ್ಲಿ ಇದರ ಕೆಲಸ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲೇ ಮಂಡಲಕ್ಕೆ ಬರಲಿದೆ. ಈ ಆಭರಣವನ್ನು, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಭಕ್ತರೊಬ್ಬರು ಮಂಡಲದ ವಜ್ರ ಮಹೋತ್ಸವದಂಗವಾಗಿ ದೇಣಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭಕ್ತರಿಗೂ ವಿಮೆ: ಲಕ್ಷಾಂತರ ಭಕ್ತರು ಭೇಟಿ ನೀಡುವ ಜಿಎಸ್ಬಿ ಸೇವಾ ಮಂಡಲದ ಗಣೇಶೋತ್ಸವ 5 ದಿನಗಳ ಕಾಲ ನಡೆಯುತ್ತಿದೆ. ಈ ಅವಧಿಯಲ್ಲಿ 6-7 ಕೋಟಿರೂ.ಗಳಿಗೂ ಅಧಿಕ ಮೊತ್ತದ ನಗದು, ಚಿನ್ನ ಮತ್ತು ಬೆಳ್ಳಿ ಹರಕೆಯ ರೂಪದಲ್ಲಿ ಮಂಡಲಕ್ಕೆ ಬರುತ್ತದೆ. ಸುಮಾರು 100 ಸಿಸಿಟಿವಿ ಕೆಮರಾ, 600 ಕ್ಕೂ ಅಧಿಕ ಸೆಕ್ಯುರಿಟಿ ಗಾರ್ಡ್, 6,000 ಪೊಲೀಸ್ ಪಹರೆ ನಡುವೆ ಗಣಪತಿ ಬಪ್ಪನನ್ನು ಜನ ಕಣ್ತುಂಬಿಸಿಕೊಳ್ಳಲಿದ್ದಾರೆ. ಸುಮಾರು 1.5 ಕೋಟಿ ಜನ 10 ದಿನಗಳ ಗಣೇಶ ಉತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ.












Click it and Unblock the Notifications