ಮುಂಬೈ ಸೇತುವೆ ಕುಸಿತ ನೈಸರ್ಗಿಕ ಅವಘಡ ಎಂದ ಬಿಜೆಪಿ ನಾಯಕಿ!
ಮುಂಬೈ, ಮಾರ್ಚ್ 15: ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದ ಹೊರಭಾಗದ ಪಾದಚಾರಿ ಸೇತುವೆ ಕುಸಿದುಬಿದ್ದ ಘಟನೆ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ. ಘಟನೆಗೆ ಆಡಳಿತಾರೂಡ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಕಾರಣ ಎಂದು ವಿರೋಧಪಕ್ಷಗಳು ಆರೋಪಿಸಿವೆ.
ಆದರೆ, ಬಿಜೆಪಿಯ ನಾಯಕಿಯೊಬ್ಬರು ಸೇತುವೆ ಕುಸಿತ ನೈಸರ್ಗಿಕ ಅವಘಡ ಎಂದು ಕರೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಮುಂಬೈ ಬಿಜೆಪಿಯ ವಕ್ತಾರರಲ್ಲಿ ಒಬ್ಬರಾದ ಸಂಜು ವರ್ಮಾ ಎಂಬುವವರು ಸುದ್ದಿ ವಾಹಿನಿಯೊಂದರ ಪ್ಯಾನಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಸಂಜು ವರ್ಮಾ, ಈ ಘಟನೆಗೆ ಪಾದಚಾರಿಗಳನ್ನೇ ಹೊಣೆಗಾರರು ಎಂದೂ ಹೇಳಿದ್ದಾರೆ.

ಈ ಘಟನೆಗೆ ಸರ್ಕಾರ ಹೊಣೆಗಾರವಲ್ಲ. ಇದು ನೈಸರ್ಗಿಕ ಅವಘಡ ಎಂದು ಸಂಜು ವರ್ಮಾ ಹೇಳಿಕೆ ನೀಡುವ ಮೂಲಕ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸಂಜು ವರ್ಮಾ ಈ ಹೇಳಿಕೆ ನೀಡಿದಾಗ ಸುದ್ದಿ ವಾಹಿನಿ ನಿರೂಪಕಿ ಅವರಿಂದ ಕಾರಣ ಹೊರತೆಗೆಯಲು ಪ್ರಯತ್ನಿಸಿದರು. ಆದರೆ, ಅವರು ತಮ್ಮ ನಿಲುವು ಬದಲಿಸಲಿಲ್ಲ.
ಆ ಪಾದಚಾರಿ ಮಾರ್ಗದಲ್ಲಿ ಮಿತಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಪಾದಚಾರಿಗಳು ಸಾಗಿದ್ದೇ ಸೇತುವೆ ಕುಸಿಯಲು ಕಾರಣ ಎಂದು ಕೂಡ ಆರೋಪಿಸಿದ್ದಾರೆ.
ಸಂಜು ವರ್ಮಾ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದು ಅಹಂಕಾರದ ಪರಮಾವಧಿ. ಜನರು ಸತ್ತ ದುಃಖದ ಸಂದರ್ಭದಲ್ಲಿಯೂ ಬಿಜೆಪಿ ಅದು ಜನರದ್ದೇ ತಪ್ಪು ಎಂದು ಹೇಳುತ್ತಿದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications