ಮುಂಬೈ, ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆ
ಮುಂಬೈ, ಡಿಸೆಂಬರ್ 28; ಮುಂಬೈ ಮತ್ತು ನವದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮುಂಬೈನಲ್ಲಿ ಶೇ 70 ಮತ್ತು ದೆಹಲಿಯಲ್ಲಿ ಶೇ 50ರಷ್ಟು ಏರಿಕೆ ದಾಖಲಾಗಿದೆ.
ಕಳೆದ 24 ಗಂಟೆಯಲ್ಲಿ ವಾಣಿಜ್ಯ ನಗರ ಮುಂಬೈನಲ್ಲಿ 1,377 ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 496 ಹೊಸ ಪ್ರಕರಣ ದಾಖಲಾಗಿದೆ. ಎರಡೂ ನಗರದಲ್ಲಿ ಮೃತಪಟ್ಟವರ ಸಂಖ್ಯೆ ತಲಾ 1.
ದೆಹಲಿ ಮೆಟ್ರೋದಲ್ಲಿ 50 ಪ್ರತಿಶತ ಜನರು ಮಾತ್ರ ಪ್ರಯಾಣಿಸಲು ಅವಕಾಶ
ಮುಂಬೈನಲ್ಲಿ ಸೋಮವಾರ 809 ಹೊಸ ಪ್ರಕರಣಗಳು ದಾಖಲಾಗಿದ್ದವು. ಭಾನುವಾರ 809 ಪ್ರಕರಣ ದಾಖಲಾಗಿತ್ತು. ಭಾನುವಾರ 3 ಜನರು ಮೃತಪಟ್ಟಿದ್ದರು. ಡಿಸೆಂಬರ್ 8ರ ಬಳಿಕ ನಗರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ.
ದೆಹಲಿ ಕರ್ಫ್ಯೂ: ಶೇ.50 ಕಛೇರಿ ಮಿತಿ, ಮದುವೆಗಳಲ್ಲಿ 20 ಜನರಿಗೆ ಅವಕಾಶ
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಈ ಕುರಿತು ಮಾತನಾಡಿದ್ದಾರೆ, "ರಾಜ್ಯದಲ್ಲಿನ ಆಕ್ಸಿಜನ್ ಬೇಡಿಕೆ 800 ಮೆಟ್ರಿಕ್ ಟನ್ಗೆ ತಲುಪಿದರೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
ಓಮಿಕ್ರಾನ್ ಆತಂಕ: ದೆಹಲಿ ಜೊತೆ ಯಾವ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ?
ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕಣಗಳ ಸಂಖ್ಯೆ ಶೇ 50ರಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜೂನ್ 2ರ ಬಳಿಕ ದೆಹಲಿಯಲ್ಲಿ ಮೊದಲ ಬಾರಿಗೆ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಪಾಸಿಟಿವಿಟಿ ದರ 0.89 ಆಗಿದೆ. ಇದು ಮೇ 31ರ ಬಳಿಕ ಹೆಚ್ಚಿನ ಪಾಸಿಟಿವಿಟಿ ದರವಾಗಿದೆ.
"ಮಾಲ್, ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡ ಬರುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೀಗೆಯೇ ಮುಂದುವರೆದರೆ ನಾವು ಮಾಲ್, ಮಾರುಕಟ್ಟೆ ಬಂದ್ ಮಾಡಬೇಕಾಗುತ್ತದೆ ಎಂದು" ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮಂಗಳವಾರ ದೆಹಲಿ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ಸಿನಿಮಾ ಹಾಲ್, ಜಿಮ್ಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಮಾಲ್ ಮತ್ತು ಅಂಗಡಿಗಳನ್ನು ಸಮ, ಬೆಸ ಮಾದರಿಯಲ್ಲಿ ತೆರೆಯಲು ಅವಕಾಶ ನೀಡಲಾಗಿದೆ.
ದೆಹಲಿಯಲ್ಲಿ ನೈಟ್ ಕರ್ಫ್ಯೂವನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ಜಾರಿಗೊಳಿಸಲಾಗಿದೆ. ಮೆಟ್ರೋದಲ್ಲಿ ಶೇ 50ರಷ್ಟು ಪ್ರಯಾಣಿಕರು ಮಾತ್ರ ಸಂಚಾರ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಎಲ್ಲ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ, ಮನೋರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮದುವೆಗಳಲ್ಲಿ ಕೇವಲ 20 ಜನರು ಭಾಗವಹಿಸಲು ಅವಕಾಶ ನೀಡಲಾಗಿದೆ. ಧಾರ್ಮಿಕ ಸ್ಥಳಗಳಿಗೆ ಭಕ್ತರ ಭೇಟಿಗೆ ನಿಷೇಧ ಹೇರಲಾಗಿದೆ.
ಕ್ರೀಡಾಂಗಣಗಳು, ಸ್ವಿಮ್ಮಿಂಗ್ ಪೂಲ್ಗಳನ್ನು ಮುಚ್ಚಲು ಸರ್ಕಾರ ಸೂಚನೆ ನೀಡಿದೆ. ಆದರೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿದ್ದರೆ ನಡೆಸಲು ಅವಕಾಶ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಪಾರ್ಟಿ ಹಾಲ್, ಬ್ಯಾಂಕ್ವೆಟ್ ಮುಚ್ಚಲು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ. "ಕೊರೊನಾದ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ಜಗತ್ತಿನ ಹಲವು ದೇಶಗಳಲ್ಲಿ ಹರಡುತ್ತಿದೆ. ಭಾರತದಲ್ಲಿ ಕೂಡಾ ಹಲವು ಜನರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ನೀವು ಭಯಭೀತರಾಗಬಾರದು, ಆದರೆ ಜಾಗ್ರತೆಯಿಂದಿರಬೇಕು ಮತ್ತು ಎಚ್ಚರದಿಂದಿರಬೇಕು ಎಂದು ನಾನು ಮನವಿ ಮಾಡುತ್ತೇನೆ" ಎಂದು ಹೇಳಿದ್ದರು.
"ನಾವು ಮುಖಗವಸುಗಳನ್ನು ಧರಿಸಲು ಮತ್ತು ನಿಯಮಿತವಾಗಿ ನಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಲು ಮರೆಯಬಾರದು"ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದರು.
Recommended Video