ಹುತಾತ್ಮ ಮೇಜರ್ ಕೌಸ್ತುಭ್ ರಾಣೆಗೆ ಎಂಥ ಹೃದಯಸ್ಪರ್ಶಿ ವಿದಾಯ
ಥಾಣೆ (ಮುಂಬೈ), ಆಗಸ್ಟ್ 10 : ಅದು ಭಾವುಕ ಕ್ಷಣಗಳು. ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದ ಕೌಸ್ತುಭ್ ರಾಣೆಯನ್ನು ಗುರುವಾರ ರಾಷ್ಟ್ರಧ್ವಜದಲ್ಲಿ ಸುತ್ತಿದ ಶವಪೆಟ್ಟಿಗೆಯಲ್ಲಿ ಕರೆತರುವಾಗ ಅದೆಷ್ಟು ಮಂದಿ ಕಣ್ಣೀರಾದರೋ. ಗಡಿನಿಯಂತ್ರಣ ರೇಖೆ ಬಳಿ ಭಯೋತ್ಪಾದಕರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ನಾಲ್ವರ ಪೈಕಿ ಕೌಸ್ತುಭ್ ಕೂಡ ಒಬ್ಬರು.
ಜಮ್ಮು-ಕಾಶ್ಮೀರದ ಬಂಡಿಪೂರ್ ನ ಜಿಲ್ಲೆಯಲ್ಲಿ ಮಂಗಳವಾರ ಹುತಾತ್ಮರಾದ ಕೌಸ್ತುಭ್ ರ ಪಾರ್ಥಿವ ಶರೀರವನ್ನು ಗುರುವಾರ ಮುಂಬೈನ ಥಾಣೆಗೆ ತರಲಾಯಿತು. ರಾಣೆ ಅವರ ಕುಟುಂಬದವರು, ಸ್ನೇಹಿತರು, ನೆರೆಹೊರೆಯವರಿಂದ ಕಿಕ್ಕಿರಿದಿದ್ದ ಆ ಸ್ಥಳದಲ್ಲಿ ಮೇಜರ್ ಕೌಸ್ತುಭ್ ರಾಣೆ ಅಮರ್ ರಹೇ ಎಂಬ ಘೋಷಣೆ ಮೊಳಗುತ್ತಲೇ ಇತ್ತು. ಇನ್ನು ಹೂವಿನ ಮಳೆಗರೆಯಲಾಗಿತ್ತು.
Heartbroken for Kanika Rane. Here she is receiving the flag that draped her husband Major Kaustubh Rane today. He was just 29. They have a 2-year-old. Another day on the LoC, another family. pic.twitter.com/q7u3scwS3x
— Shiv Aroor (@ShivAroor) 9 August 2018
ರಾಷ್ಟ್ರಧ್ವಜ ಕೈಲಿ ಹಿಡಿದವರು, ಕೌಸ್ತುಭ್ ರಾಣೆ ಅವರ ಭಾವಚಿತ್ರ ಇದ್ದ ಪೋಸ್ಟರ್ ಹಿಡಿದಿದ್ದವರು ಹೀಗೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುತ್ತಿದ್ದರು. ರಾಣೆ ಅವರ ಮನೆಗೆ ಸಾಗುವ ಮೀರಾ ರಸ್ತೆಯ ಉದ್ದಕ್ಕೂ ಹಳದಿ ಬಣ್ಣದ ಹೂವಿನ ಎಸಳುಗಳು ತುಂಬಿಹೋಗಿದ್ದವು. ಮೇಜರ್ ರಾಣೆ ಕುಟುಂಬದ ವಾಸ್ತವ್ಯ ಶೀತಲ್ ನಗರದಲ್ಲಿ.
ಮುಂಬೈನ ಉತ್ತರಕ್ಕೆ ಕೇವಲ ಐದು ಕಿ.ಮೀ. ದೂರವಿರುವ ಈ ಸ್ಥಳದಲ್ಲೇ ಇಪ್ಪತ್ತೈದು ವರ್ಷದಿಂದ ಈ ಕುಟುಂಬ ವಾಸವಿದೆ. 'ಆತನಿಗೆ ಸಣ್ಣ ವಯಸ್ಸಿಂದ ಸೇನೆಗೆ ಸೇರುವ ಆಸೆಯಿತ್ತು' ಎಂದು ಅಕ್ಕಪಕ್ಕದ ಮನೆಯವರು ಮಾತನಾಡುತ್ತಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, 3 ಯೋಧರು ಹುತಾತ್ಮ
29 ವರ್ಷದ ರಾಣೆ 36 ರಾಷ್ಟ್ರೀಯ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೌಸ್ತುಭ್ ರಾಣೆಯವರ ಪತ್ನಿ ಕೃತ್ತಿಕಾ ಅವರ ಕಣ್ಣು ಕಳಾಹೀನವಾಗಿತ್ತು. ಆದರೆ ತನ್ನ ಪತಿ ಬಗ್ಗೆ ಹೆಮ್ಮೆ ಇತ್ತು. ರಾಣೆ ಅವರ ಎರಡೂವರೆ ವರ್ಷದ ಮಗನಿಗೆ ಮನೆಯಲ್ಲಿ ಎಲ್ಲರೂ ಯಾಕೆ ಅಳುತ್ತಿದ್ದಾರೆಂಬ ವಿಚಾರವೇ ಗೊತ್ತಿರಲಿಲ್ಲ.
ಇನ್ನು ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ರಾಣೆ ಪೋಷಕರು ಸಾವಿನ ಸುದ್ದಿ ಗೊತ್ತಾದ ಮೇಲಿಂದ ಮಾತೇ ಆಡುತ್ತಿರಲಿಲ್ಲ. ಮೇಜರ್ ರಾಣೆ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೀಡಿದ್ದ ಗ್ಯಾಲಂಟರಿ ಪದಕವನ್ನು ಅಲಂಕರಿಸಲಾಗಿತ್ತು. ಹುತಾತ್ಮ ವೀರ ಸೇನಾನಿಯ ಅಂತಿಮ ವಿದಾಯವನ್ನು ಸೇನೆಯ ಗೌರವದ ಮೂಲಕ ಹೇಳಲಾಯಿತು.