ಐಎಎಸ್ ಅಧಿಕಾರಿ ಬೆಂಬಲಕ್ಕೆ ನಿಂತ ಮಹಾತ್ಮ ಗಾಂಧಿ ಮೊಮ್ಮಗ
ಮುಂಬೈ, ಜೂನ್ 4: ಮಹಾತ್ಮ ಗಾಂಧಿ ಅವರ ಕುರಿತು ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಆಕ್ರೋಶಕ್ಕೆ ತುತ್ತಾಗಿರುವ ಮುಂಬೈ ಮೂಲದ ಐಎಎಸ್ ಅಧಿಕಾರಿ ನಿಧಿ ಚೌಧರಿ ಅವರಿಗೆ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿಧಿ ಚೌಧರಿ ಕುರಿತು ಭುಗಿಲೆದ್ದಿರುವ ಆಕ್ರೋಶವು ಗಾಂಧೀಜಿ ಅವರ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
'ಗಾಂಧಿ ಅವರ ಬಗ್ಗೆ ನಿಧಿ ಅವರ ಟ್ವೀಟ್ ಕುರಿತಾದ ವಿವಾದ ಅನಗತ್ಯವಾಗಿತ್ತು. ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವುದನ್ನು ನೋಡಿದ್ದೇನೆ. ಇದು ಗಾಂಧಿ ತತ್ವ ಹಾಗೂ ಸಿದ್ಧಾಂತಕ್ಕೆ ವಿರುದ್ಧ. ತಮಗನ್ನಿಸಿದ್ದನ್ನು ಹೇಳುವ ಹಕ್ಕು ಜನರಿಗೆ ಇದೆ' ಎಂದು ತುಷಾರ್ ಗಾಂಧಿ ಹೇಳಿದ್ದಾರೆ.
ಮಹಾತ್ಮ ಗಾಂಧಿಯ 'ನನ್ನ ಸತ್ಯಾನ್ವೇಷಣೆ' ಪುಸ್ತಕ ಸಾರ್ವಕಾಲಿಕವಾಗಿ ಮೆಚ್ಚಿನದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಮ್ಮ ಹಳೆಯ ವಿವಾದಾತ್ಮಕ ಟ್ವೀಟ್ ಅಳಿಸಿ ಹಾಕಿ ನಿಧಿ ಚೌಧರಿ ಸ್ಪಷ್ಟೀಕರಣ ನೀಡಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ
'ನಮ್ಮ ಸಂವಿಧಾನವು ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇದು ಪ್ರಜಾಪ್ರಭುತ್ವದ ಅಗತ್ಯಕೂಡ. ಒಬ್ಬರ ಅಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೌದ್ಧಿಕ ಚರ್ಚೆ ನಡೆಸಬಹುದು
'ಅವರ ಟ್ವೀಟ್ ಕುರಿತು ನನಗೆ ಯಾವ ಸಮಸ್ಯೆಯೂ ಇಲ್ಲ. ಗಾಂಧಿ ಅವರ ಮೇಲೆ ತಮಗೆ ನಂಬಿಕೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಒಂದು ವೇಳೆ ಅವರು ದ್ವೇಷದಿಂದ ಪ್ರಚೋದಿತರಾಗಿದ್ದರೂ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅವರ ಹಕ್ಕು. ಅವರ ಟ್ವೀಟ್ ಯಾವುದೇ ರೀತಿಯಲ್ಲಿ ಅವಹೇಳನಾಕಾರಿಯಾಗಿದ್ದರೆ, ಅದನ್ನು ಬೌದ್ಧಿಕ ರೀತಿಯಲ್ಲಿ ಚರ್ಚೆಗೆ ಒಳಪಡಿಸಬಹುದು' ಎಂದು ಹೇಳಿದ್ದಾರೆ.

ನಾಥೂರಾಂ ಗೋಡ್ಸೆಗೆ ಧನ್ಯವಾದ
ಜಗತ್ತಿನಾದ್ಯಂತ ಇರುವ ಮಹಾತ್ಮ ಗಾಂಧಿ ಪ್ರತಿಮೆಗಳನ್ನು ತೆಗೆಯಬೇಕು. ಅಷ್ಟೇ ಅಲ್ಲ, ಭಾರತದ ನೋಟುಗಳಲ್ಲಿರುವ ಅವರ ಭಾವಚಿತ್ರವನ್ನೂ ತೆಗೆದುಹಾಕಬೇಕು ಯಾವ ರಸ್ತೆ, ಸಂಸ್ಥೆಗಳಿಗೆ ಮಹಾತ್ಮ ಗಾಂಧಿ ಹೆಸರಿದೆಯೋ ಅದನ್ನೂ ಬದಲಿಸಬೇಕು ಎಂದು ಟ್ವೀಟ್ ಮಾಡಿದ್ದ ಮುಂಬೈ ಮೂಲದ ಐಎಎಸ್ ಅಧಿಕಾರಿ ನಿಧಿ ಚೌಧರಿ, ಗಾಂಧಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಗೆ 'ಧನ್ಯವಾದ' ಹೇಳಿದ್ದರು.

ವ್ಯಂಗ್ಯ ಅರ್ಥಮಾಡಿಕೊಳ್ಳಲಿಲ್ಲ
ನಾನು ಎಂದಿಗೂ ಗಾಂಧೀಜಿಯನ್ನು ಅವಮಾನ ಮಾಡಲು ಸಾಧ್ಯವಿಲ್ಲ. ಅವರು ನಮ್ಮ ರಾಷ್ಟ್ರಪಿತ. ಈ ವರ್ಷ ನಮ್ಮ ದೇಶದ ಒಳಿತಿಗಾಗಿ ಕೈಲಾದ ಸಣ್ಣ ಕೆಲಸವಾದರೂ ಮಾಡಬೇಕು. ನನ್ನ ಟ್ವೀಟ್ ನಲ್ಲಿ ಇದ್ದ ವ್ಯಂಗ್ಯವನ್ನು ಟೀಕಾಕಾರರು ಅರ್ಥ ಮಾಡಿಕೊಳ್ಳುತ್ತಾರೆ ಅಂದುಕೊಳ್ಳುತ್ತೇನೆ ಎಂದು ಅವರು ಬಳಿಕ ಸ್ಪಷ್ಟೀಕರಣದ ಟ್ವೀಟ್ ಮಾಡಿದ್ದರು.












Click it and Unblock the Notifications