ಕೊರೊನಾ ಕಂಟಕ ಪಾರು: ಭಾರತೀಯ ಸೇನಾ ದಿಗ್ಬಂಧನದಿಂದ 44 ಮಂದಿ ರಿಲೀಸ್
ಮುಂಬೈ, ಏಪ್ರಿಲ್.13: ಕೊರೊನಾ ವೈರಸ್ ಕೂಪದಿಂದ 44 ಮಂದಿ ಭಾರತೀಯರು ಪಾರಾಗಿದ್ದಾರೆ. ಇರಾನ್ ನಿಂದ ಆಗಮಿಸಿ ಒಂದು ತಿಂಗಳು ದಿಗ್ಬಂಧನದಲ್ಲಿದ್ದ ಕೊರೊನಾ ವೈರಸ್ ಶಂಕಿತರನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ.
ಕಳೆದ ಮಾರ್ಚ್.13ರಂದು ಇರಾನ್ ನಿಂದ 44 ಜನರನ್ನು ಕರೆ ತರಲಾಗಿದ್ದು ಮಹಾರಾಷ್ಟ್ರದ ಘಟಕೋಪರ್ ಪ್ರದೇಶದಲ್ಲಿ ಇರುವ ಭಾರತೀಯ ನೌಕಾಪಡೆಯ ದಿಗ್ಬಂಧನ ಶಿಬಿರದಲ್ಲಿ ಇರಿಸಿ ವೈದ್ಯಕೀಯ ನಿಗಾ ವಹಿಸಲಾಗಿತ್ತು.
ಮಾರ್ಚ್.28ರಂದೇ ಎಲ್ಲರಿಗೂ ಕೊರೊನಾ ವೈರಸ್ ನೆಗೆಟಿವ್ ಫಲಿತಾಂಶ ಬಂದಿತ್ತು. ಆದರೆ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲರನ್ನೂ ದಿಗ್ಬಂಧನದಲ್ಲಿ ಮುಂದುವರಿಸಲಾಗಿತ್ತು. ಹೀಗಾಗಿ ಶ್ರೀನಗರ ಹಾಗೂ ಲಡಾಖ್ ನಲ್ಲಿರುವ ತಮ್ಮ ಮನೆಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ.

C-130 ವಿಶೇಷ ವಿಮಾನದ ಮೂಲಕ ರವಾನೆ:
ಕೊರೊನಾ ವೈರಸ್ ಸೋಂಕು ನೆಗೆಟಿವ್ ಫಲಿತಾಂಶ ಬಂದ ನಂತರವೂ 44 ಜನರನ್ನು ದಿಗ್ಬಂಧನದಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಆದರೆ ಭಾನುವಾರ ಸಿ-130 ವಿಶೇಷ ವಿಮಾನದ ಮೂಲಕ ಎಲ್ಲರನ್ನೂ ಕಾಶ್ಮೀರದ ಶ್ರೀನಗರಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸಿ ಕೊಡಲಾಯಿತು ಎಂದು ತಿಳಿದು ಬಂದಿದೆ.
ಇನ್ನು, ಮಹಾರಾಷ್ಟ್ರದಲ್ಲಿ ಇದುವರೆಗೂ 1,985 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, 149ಕ್ಕೂ ಅಧಿಕ ಮಂದಿ ಮಾರಕ ರೋಗದಿಂದ ಪ್ರಾಣ ಬಿಟ್ಟಿದ್ದಾರೆ. 217 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.












Click it and Unblock the Notifications