ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ: ಹೀಗೊಂದು ತೀರಾ ಅಪರೂಪದ ಫಲಿತಾಂಶ!
ಮುಂಬೈ, ಅ 25: ಮಹಾರಾಷ್ಟ್ರ ಅಸೆಂಬ್ಲಿಯ ಎಲ್ಲಾ 288 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಬಹುಮತ ಲಭಿಸಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರು, ನೋಟಾ ಪಡೆದಷ್ಟು ಮತವನ್ನೂ ಪಡೆಯಲಾಗದೇ, ಠೇವಣಿ ಕಳೆದುಕೊಂಡ ಲೇಖನವನ್ನು ಓದಿರುತ್ತೀರಿ.
ಇದೇ ರೀತಿಯ ಇನ್ನೊಂದು ಫಲಿತಾಂಶ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಹೊರಬಿದ್ದಿದೆ. ಆದರೆ, ಇಲ್ಲಿ ವಿಜೇತ ಅಭ್ಯರ್ಥಿ ಸೋಲಿಸಿದ್ದು ಯಾವ ಪಕ್ಷದ ಮುಖಂಡನನ್ನೂ ಅಲ್ಲ, ಬದಲಿಗೆ ನೋಟಾವನ್ನು.

ಹೌದು, ಲಾತೂರ್ ಗ್ರಾಮೀಣ ಅಸೆಂಬ್ಲಿ ಕ್ಷೇತ್ರದಲ್ಲಿ ನೋಟಾ ಎರಡನೇ ಸ್ಥಾನ ಪಡೆದಿದೆ. ಇದಾದ ನಂತರವಷ್ಟೇ, ಶಿವಸೇನೆಯ ಅಭ್ಯರ್ಥಿ. ಈ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಪುತ್ರ, ಧೀರಜ್ ವಿಲಾಸರಾವ್ ಈ ಕ್ಷೇತ್ರದಿಂದ ಜಯಶೀಲರಾಗಿದ್ದಾರೆ. ಇವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ನೋಟಾವನ್ನು 107,506 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಶಿವಸೇನೆಯ ಅಭ್ಯರ್ಥಿ ಶಶಿರವಿ ರಾಮರಾಜೇ ದೇಶಮುಖ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಪಡೆದ ಮತ 13,524. ಇದಾದ ನಂತರ ವಿಬಿಎ ಅಭ್ಯರ್ಥಿ ದೋನೆ ಬಲಿರಾಂ 12,966 ನಾಲ್ಕನೇ ಸ್ಥಾನದಲ್ಲಿದ್ದಾರೆ.












Click it and Unblock the Notifications