ಮಹಾರಾಷ್ಟ್ರದ ಈ ಹಳ್ಳಿಗಳಲ್ಲಿ ಎಟಿಎಂ ಮನೆಗೇ ಬರುತ್ತದೆ!
ವಾರ್ಧಾ, ಫೆಬ್ರವರಿ 4: ನಗರ ಪ್ರದೇಶದಲ್ಲಿ ಇರುವವರು ತುರ್ತು ಹಣದ ಅಗತ್ಯಬಿದ್ದಾಗ ಎಟಿಎಂ ಮೊರೆ ಹೋಗುತ್ತಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನಗದು ಮತ್ತು ಡಿಜಿಟಲ್ ಪಾವತಿ ಎರಡೂ ಕೈಗೆಟುಕಿಲ್ಲ. ದೂರದ ಬ್ಯಾಂಕ್ಗಳಿಗೆ ಹೋಗಿ ಹಣ ಬಿಡಿಸಿಕೊಂಡು ಬರುವುದು ಸಹ ಜನರಿಗೆ ಕಷ್ಟ. ಅದರಲ್ಲಿಯೂ ವಯೋವೃದ್ಧರು, ಅಂಗವಿಕಲರ ಪಾಡು ಹೇಳತೀರದು.
ಸರ್ಕಾರದ ಯೋಜನೆಗಳ ಹಣ ಈಗ ಜನರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ. ಅದನ್ನು ಪಡೆದುಕೊಳ್ಳುವುದಕ್ಕೆ ಜನರು ಮತ್ತೆ ಬ್ಯಾಂಕ್ಗೆ ಅಲೆದಾಡುವುದು ತಪ್ಪಿದ್ದಲ್ಲ. ಆದರೆ, ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಳ್ಳಿಗಳಲ್ಲಿನ ವೃದ್ಧರಿಗೆ ಈ ಸಂಕಷ್ಟ ಅಷ್ಟಾಗಿ ಬಾಧಿಸುತ್ತಿಲ್ಲ. ಏಕೆಂದರೆ, ಸ್ವತಃ ಎಟಿಎಂ ಇವರ ಬಳಿಯೇ ಬರುತ್ತದೆ!
2019ರ ಮಾರ್ಚ್ ಹೊತ್ತಿಗೆ ದೇಶದ ಶೇ 50ರಷ್ಟು ಎಟಿಎಂಗಳು ಬಂದ್!
ರಾಜ್ಯ ಸರ್ಕಾರದ ಶ್ರವಣಬಾಲ್ ಯೋಜನಾ ಅಡಿ ಹಿರಿಯ ನಾಗರಿಕರಿಗೆ 600 ರೂ ಮಾಸಿಕ ಹಣ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ಈ ಹಣವನ್ನು ಪಡೆದುಕೊಳ್ಳಲು ಅವರು ಬ್ಯಾಂಕ್ಗೆ ಬರಬೇಕಾಗಿಲ್ಲ. ಬ್ಯಾಂಕಿಂಗ್ ಪ್ರತಿನಿಧಿಗಳೇ ಹಳ್ಳಿಗೆ ತೆರಳಿ ಎಟಿಎಂ ಮೂಲಕ ಅವರಿಗೆ ಹಣ ನೀಡುತ್ತಾರೆ.
ವಾರ್ಧಾ ಜಿಲ್ಲೆಯಲ್ಲಿ 'ನಮ್ಮ ಆಧಾರ್, ನಮ್ಮ ಬ್ಯಾಂಕ್' ಅಡಿಯಲ್ಲಿ 115 ಬ್ಯಾಂಕಿಂಗ್ ಪ್ರತಿನಿಧಿಗಳನ್ನು ನೇಮಿಸಲಾಗಿತ್ತು. ಹಳ್ಳಿಗಳನ್ನು ಆಧಾರ್ ಮತ್ತು ಬ್ಯಾಂಕ್ನೊಂದಿಗೆ ಸಂಪರ್ಕಿಸುವ ಈ ಯೋಜನೆಯಿಂದಾಗಿ ಜನರು ಬ್ಯಾಂಕ್ಗೆ ತೆರಳುವ ಕಷ್ಟಪಡಬೇಕಾಗಿಲ್ಲ.
2017ರ ನವೆಂಬರ್ನಲ್ಲಿ ಈ ಯೋಜನೆ ಆರಂಭವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ವಾರ್ಧಾ ಜಿಲ್ಲೆಯಲ್ಲಿ 1,59,787 ವ್ಯವಹಾರಗಳನ್ನು ನಡೆಸಲಾಗಿದ್ದು, 42 ಕೋಟಿ ರೂಪಾಯಿಗೂ ಹೆಚ್ಚು ಹಣ ಈ ಮೈಕ್ರೋ ಎಟಿಎಂ ಮೂಲಕ ಸಂದಾಯವಾಗಿದೆ. 115 ಪ್ರತಿನಿಧಿಗಳ ಪೈಕಿ 11 ಮಂದಿ ತಲಾ ಒಂದು ಕೋಟಿ ರೂ. ವ್ಯವಹಾರ ಮಾಡಿದ್ದಾರೆ.
ಈ ಪ್ರತಿನಿಧಿಗಳಲ್ಲಿ ಹೆಚ್ಚಿನವರು ಸ್ಥಳೀಯರೇ ಆಗಿದ್ದಾರೆ. ಅವರಿಗೆ ಐಡಿಎಫ್ಸಿ ಬ್ಯಾಂಕ್ ಮೂಲಕ ಮೈಕ್ರೊ ಎಟಿಎಂ ಯಂತ್ರಗಳನ್ನು ಬಳಸಲು ಹಾಗೂ ವ್ಯವಹಾರಗಳನ್ನು ನಡೆಸಲು ತರಬೇತಿ ನೀಡಲಾಗಿದೆ. ಇದರಲ್ಲಿ ಹಣ ತೆಗೆಯುವುದು, ಜಮೆ ಮಾಡುವುದು, ಬಿಲ್ಗಳ ಪಾವತಿ, ಪೆನ್ಸನ್, ವಿದ್ಯಾರ್ಥಿವೇತನ ಮತ್ತು ಹೊಸ ಖಾತೆಗಳನ್ನು ತೆರೆಯುವುದು ಸಹ ಸೇರಿದೆ.
ಮಂಗಳೂರಿನಲ್ಲಿ ಮನೆ ಮಾತಾಯ್ತು ಸೆಕ್ಯೂರಿಟಿ ಗಾರ್ಡ್, ಕೋತಿಯ ಫ್ರೆಂಡ್ ಶಿಪ್
ಗ್ರಾಹಕರು ಆಧಾರ್ ಸಂಖ್ಯೆ ಸಮೇತ ಪ್ರತಿನಿಧಿಗಳನ್ನು ಭೇಟಿ ಮಾಡಬೇಕು. ವೃದ್ಧರಿದ್ದರೆ ಪ್ರತಿನಿಧಿಗಳೇ ಅವರ ಬಳಿ ತೆರಳುತ್ತಾರೆ. ಅವರ ಬಯೋಮೀಟರ್ ಸ್ಕ್ಯಾನ್ ಮಾಡಿ ಅವರ ಹಣ ವಿತ್ಡ್ರಾ ಅಥವಾ ಜಮೆ ಮಾಡಬಹುದು. ಯಂತ್ರದಿಂದ ವ್ಯವಹಾರಕ್ಕೆ ಸಂಬಂಧಿಸಿದ ರಸೀದಿ ಸಿಗುತ್ತದೆ ಮತ್ತು ಗ್ರಾಹಕರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.
ಪ್ರತಿನಿಧಿಗಳು ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆಯ ಮೂಲಕ ಮಾಸಿಕ ಗೌರವ ವೇತನ ಸೇರಿದಂತೆ ಅವರು ನಡೆಸುವ ವ್ಯವಹಾರಗಳಿಗೆ ಅನುಗುಣವಾಗಿ 5,000-7,000 ರೂ ವೇತನ ಪಡೆದುಕೊಳ್ಳುತ್ತಾರೆ.
ವಾರ್ಧಾದಲ್ಲಿ ನಮ್ಮ 128 ಶಾಖೆಗಳಿವೆ. ಪ್ರತಿಯೊಂದೂ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ 4-5 ಹಳ್ಳಿಗಳ ವ್ಯಾಪ್ತಿ ಒಳಗೊಂಡಿವೆ. ಆದರೆ, ಕುಗ್ರಾಮಗಳ ಜನರು ಬ್ಯಾಂಕ್ಗಳಿಗೆ ತೆರಳಲು ಶಕ್ತರಲ್ಲ. ಅವರಿಗೆ ಈ ಯೋಜನೆ ಅನುಕೂಲ ಕಲ್ಪಿಸಿದೆ ಎಂದು ಎಸ್ಬಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.