Breaking: ಮಹಾರಾಷ್ಟ್ರಕ್ಕೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್ ಡಿಸಿಎಂ?
ಮುಂಬೈ, ನವೆಂಬರ್ 11: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಕೊನೆಗೂ ಅಂತ್ಯಕಾಣುವ ಸೂಚನೆ ನೀಡಿದೆ. ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆಡಳಿತಾರೂಢ ಬಿಜೆಪಿ ಈ ಬಾರಿ ವಿರೋಧಪಕ್ಷದ ಸ್ಥಾನದಲ್ಲಿ ಕೂರಲಿದ್ದು, ಇದೇ ಮೊದಲಬಾರಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಶಿವಸೇನಾ ಜತೆ ಎನ್ಸಿಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಲಿವೆ.
ಶರದ್ ಪವಾರ್ ನೇತೃತ್ವದ ಎನ್ಸಿಪಿ, ಶಿವಸೇನಾಗೆ ಸರ್ಕಾರ ರಚನೆಗೆ ನೇರ ಬೆಂಬಲ ನೀಡಲಿದ್ದು, ಸರ್ಕಾರದ ಆಡಳಿತದಲ್ಲಿ ಪಾಲ್ಗೊಳ್ಳಲಿದೆ. ಆದರೆ ಚುನಾವಣೆಗೂ ಮುನ್ನ ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ನೇರವಾಗಿ ಸರ್ಕಾರದ ಭಾಗವಾಗಿರದೆ, ಈ ಸಮ್ಮಿಶ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ. ಅಲ್ಲದೆ, ಆರು ಮಂದಿ ಪಕ್ಷೇತರ ಶಾಸಕರು ಕೂಡ ಶಿವಸೇನಾಗೆ ಬೆಂಬಲ ನೀಡುವುದಾಗಿ ಹೇಳಿದೆ. ಇದರಿಂದ ಸುದೀರ್ಘ ಕಾಲದ ಮಹಾರಾಷ್ಟ್ರದ ಸರ್ಕಾರ ರಚನೆಯ ಕಸರತ್ತು ಅಂತ್ಯಕಾಣುತ್ತಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಆದರೆ ಸೈದ್ಧಾಂತಿಕವಾಗಿ ಕಡು ವೈರಿಗಳು ಸೇರಿ ರಚಿಸಿರುವ ಸರ್ಕಾರ ಯಾವುದೇ ರಾಜಕೀಯ ತಿಕ್ಕಾಟಗಳಿಲ್ಲದೆ ಯಾವ ರೀತಿ ಆಡಳಿತ ನಡೆಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಗಡುವು ನೀಡಿದ್ದ ರಾಜ್ಯಪಾಲರು
ತಮ್ಮ ಮತ್ತು ಎನ್ಸಿಪಿಯ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಮಾಹಿತಿ ನೀಡಿದ ಕೂಡಲೇ ಶಿವಸೇನಾ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿತು. ಅವರೊಂದಿಗೆ ಎನ್ಸಿಪಿಯ ಕೆಲವು ನಾಯಕರು ಕೂಡ ರಾಜ್ಯಪಾಲರನ್ನು ಭೇಟಿ ಮಾಡಿದರು. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ 7.30ರ ವರೆಗೆ ರಾಜ್ಯಪಾಲರು ಗಡುವು ನೀಡಿದ್ದರು.

ಸಿಎಂ ಗಾದಿಗೆ ಉದ್ಧವ್ ಠಾಕ್ರೆ?
ಠಾಕ್ರೆ ಕುಟುಂಬದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಬದಲಾದ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಅದನ್ನು ನಿಭಾಯಿಸಲು ಹೆಚ್ಚು ಪರಿಣತಿಯ ಅಗತ್ಯವಿದೆ. ಹೀಗಾಗಿ ಉದ್ಧವ್ ಠಾಕ್ರೆ ಅವರೇ ಸರ್ಕಾರದ ನೇತೃತ್ವ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಉದ್ಧವ್ ಮುಖ್ಯಮಂತ್ರಿ ಗಾದಿಯಲ್ಲಿ ಕೂರುವ ಸಾಧ್ಯತೆ ಹೆಚ್ಚಾಗಿದೆ.

ಬಾಳ ಠಾಕ್ರೆ ಪುಣ್ಯಸ್ಮರಣೆಯಂದು ಪ್ರಮಾಣವಚನ
ಸರ್ಕಾರ ರಚನೆಯ ಹಕ್ಕು ಮಂಡಿಸಲು 24 ಗಂಟೆಗಳವರೆಗೂ ಸಮಯಾವಕಾಶ ನೀಡುವಂತೆ ಉದ್ಧವ್ ಠಾಕ್ರೆ ಅವರು ರಾಜ್ಯಪಾಲರನ್ನು ಕೋರಿದ್ದಾರೆ. ನವೆಂಬರ್ 17 ಶಿವ ಸೇನಾ ಸಂಸ್ಥಾಪಕ ಬಾಳ ಸಾಹೇಬ್ ಠಾಕ್ರೆ ಅವರ ಏಳನೇ ಪುಣ್ಯಸ್ಮರಣೆಯ ದಿನವಾಗಿದ್ದು, ಅಂದೇ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭವು ಶಿವಾಜಿ ಪಾರ್ಕ್ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಜಿತ್ ಪವಾರ್ ಡಿಸಿಎಂ
ಮೈತ್ರಿ ಕಾರಣಕ್ಕೆ ಎನ್ಸಿಪಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾ ಬಿಟ್ಟುಕೊಡಬೇಕಾಗಿದ್ದು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್ ಚವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೂಡ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು.

ಬೆಂಬಲ ಇಲ್ಲ ಎಂದ ಓವೈಸಿ
ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ತನ್ನ ಬೆಂಬಲ ಇಲ್ಲ ಎಂದು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಓವೈಸಿ ಪಕ್ಷ ಇಬ್ಬರು ಶಾಸಕರನ್ನು ಹೊಂದಿದೆ. ಈ ಹೊಸ ಸರ್ಕಾರಕ್ಕೆ ತಾವು ಬೆಂಬಲ ನೀಡುವುದಿಲ್ಲ ಎಂದು ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸುವುದಾಗಿ ಓವೈಸಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications