ಮಸೂದೆ ವಿರೋಧಿಸಿ ರಾಜೀನಾಮೆ: ಆಗಸ್ಟ್ನಲ್ಲಿಯೇ ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದ ಅಧಿಕಾರಿ
ಮುಂಬೈ, ಡಿಸೆಂಬರ್ 12: ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡುವುದನ್ನು ವಿರೋಧಿಸಿ ಮಹಾರಾಷ್ಟ್ರ ಕೇಡರ್ನ ಐಪಿಎಸ್ ಅಧಿಕಾರಿ ಅಬ್ದುರ್ ರಹಮಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ವ್ಯಾಪಕ ಚರ್ಚೆಗೆ ಒಳಗಾಗಿದೆ. ಆದರೆ ರಹಮಾನ್ ಅವರು ಆಗಸ್ಟ್ನಲ್ಲಿಯೇ ವಿಆರ್ಎಸ್ಗೆ (ಸ್ವಯಂ ನಿವೃತ್ತಿ) ಅರ್ಜಿ ಸಲ್ಲಿಸಿದ್ದರು ಎಂಬ ಅಂಶ ಕೂಡ ಬಯಲಾಗಿದೆ.
"ಪೌರತ್ವ ತಿದ್ದುಪಡಿ ಮಸೂದೆ ಭಾರತದ ಜಾತ್ಯಾತೀತ ಹಾಗೂ ಬಹುಸಂಸ್ಕೃತಿಗೆ ಧಕ್ಕೆ ಉಂಟು ಮಾಡಲಿದ್ದು, ಸಂವಿಧಾನದ ವಿರೋಧಿಯಾಗಿದೆ. ಎಲ್ಲರೂ ಕಾನೂನು ಚೌಕಟ್ಟಿನಲ್ಲಿ ಇದರ ವಿರುದ್ಧ ಹೋರಾಟಬೇಕು" ಎಂದು ರೆಹಮಾನ್ ತಮ್ಮ ಸುದೀರ್ಘ ಪತ್ರದಲ್ಲಿ ಹೇಳಿದ್ದರು.
ರೆಹಮಾನ್ ಅವರು ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದರು. ಎರಡು ಪುಟಗಳ ಪತ್ರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಪತ್ರ ವೈರಲ್ ಆಗಿವೆ. ಈ ಪತ್ರವನ್ನು ಹಂಚಿಕೊಳ್ಳುವುದಕ್ಕೂ ಮುನ್ನ ರಹಮಾನ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ವಿಆರ್ಎಸ್ ಕೊಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಗೃಹ ಸಚಿವಾಲಯ ತಿರಸ್ಕರಿಸಿದೆ ಎಂದು ಮಹಾರಾಷ್ಟ್ರ ಗೃಹ ಇಲಾಖೆಗೆ ಬರೆದಿದ್ದ ಪತ್ರವನ್ನೂ ಪ್ರಕಟಿಸಿದ್ದರು. ಈ ಪತ್ರವನ್ನು ಮುಂದಿಟ್ಟುಕೊಂಡು ರಹಮಾನ್ ಹುದ್ದೆ ತ್ಯಜಿಸಲು ನೀಡಿರುವ ಕಾರಣ ಎಷ್ಟು ಸತ್ಯ ಎಂಬ ಚರ್ಚೆ ನಡೆಯುತ್ತಿದೆ.

ಯಾವುದೇ ಪ್ರಕರಣ ಬಾಕಿ ಇಲ್ಲ
ಡಿ. 11ರಂದು ಮಹಾರಾಷ್ಟ್ರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಬ್ದುರ್ ರಹಮಾನ್, 2019ರ ಆಗಸ್ಟ್ 1ರಂದು ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದ ಮಾಹಿತಿಯನ್ನು ತಿಳಿಸಲು ಬಯಸಿರುವುದಾಗಿ ಹೇಳಿದ್ದರು.
ಈ ಅರ್ಜಿಯನ್ನು ರಾಜ್ಯ ಸರ್ಕಾವು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿತ್ತು. ಆದರೆ ಈ ಅರ್ಜಿಯನ್ನು ಅಂಗೀಕರಿಸಲಾಗಿಲ್ಲ ಎಂದು ಅ.25ರಂದು ತಿಳಿಸಲಾಗಿತ್ತು. ನನ್ನ ವಿರುದ್ಧ ಯಾವುದೇ ಇಲಾಖಾ ತನಿಖೆ ಬಾಕಿ ಉಳಿದಿಲ್ಲ ಅಥವಾ ಆರೋಪ ಪಟ್ಟಿ ನಿಗದಿ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.

ನಿಯಮಾವಳಿಗೆ ವಿರುದ್ಧವಾಗಿದೆ
ಆದರೆ ಗೃಹ ಸಚಿವಾಲಯವು ಅವಸರದಲ್ಲಿ ಈ ನಿರ್ಧಾರ ತೆಗೆದುಕೊಂಡಿದೆಯೇ ಹೊರತು, ಅದರ ಬಗ್ಗೆ ಸೂಕ್ತ ಆಲೋಚನೆ ಮಾಡದೆ, ಸ್ಪಷ್ಟ ಪೂರ್ವಗ್ರಹಗಳಿಂದ, ನ್ಯಾಯಸಮ್ಮತವಲ್ಲದ ಮತ್ತು ಅಧಿಕಾರ ದುರ್ಬಳಕೆ ಹಾಗೂ ವಿವೇಚನಾರಹಿತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ನನ್ನ ವಿರುದ್ಧ ಯಾವುದೇ ಷೋಕಾಸ್ ನೋಟಿಸ್ ಕೂಡ ಬಾಕಿ ಉಳಿದಿಲ್ಲ. ಹೀಗಾಗಿ ಅರ್ಜಿ ತಿರಸ್ಕಾರವು ಕಾನೂನು ಮತ್ತು ಸೇವೆಗಳ ನಿಯಮಾವಳಿಗಳಗೆ ವಿರುದ್ಧವಾಗಿದೆ ಎಂದು ಬರೆದಿದ್ದರು.
ನ.6ರಂದು ಗೃಹ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ಮೂಲ ಅರ್ಜಿಯನ್ನು ಮುಂಬೈನಲ್ಲಿರುವ ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಸಲ್ಲಿಸಿದ್ದು, ಈ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಈ ಅರ್ಜಿಯೇ ರಾಜೀನಾಮೆ ಪತ್ರ
ನ್ಯಾಯಮಂಡಳಿಯು ನನ್ನ ಅರ್ಜಿಯಲ್ಲಿನ ವಾಸ್ತವ ಮತ್ತು ಸಂದರ್ಭಗಳನ್ನು ಒಪ್ಪಿಕೊಳ್ಳುವ ಮೂಲಕ ನನಗೆ ಸ್ವಯಂ ನಿವೃತ್ತಿ ನೀಡಲಿದೆ ಎಂಬುದನ್ನು ದೃಢವಾಗಿ ನಂಬಿದ್ದೇನೆ. ಸನ್ನಿವೇಶಗಳು ಮತ್ತು ನನ್ನ ವೈಯಕ್ತಿಕ ಕಾರಣಗಳಿಂದ ಡಿ.12ರಿಂದ ಕಚೇರಿಗೆ ಹಾಜರಾಗಲು ನನಗೆ ಸಾಧ್ಯವಾಗುತ್ತಿಲ್ಲ. ನ್ಯಾಯಾಲಯಗಳು ನನ್ನ ಅರ್ಜಿಯನ್ನು ತಿರಸ್ಕರಿಸಿದರೆ, ಈ ಅರ್ಜಿಯನ್ನೇ ಸೇವೆಯಿಂದ ನನ್ನ ರಾಜೀನಾಮೆ ಪತ್ರ ಎಂದು ಪರಿಗಣಿಸಬೇಕಾಗಿ ಕೋರುತ್ತೇನೆ ಎಂದು ಬರೆದಿದ್ದಾರೆ.

ಮಸೂದೆ ವಿರೋಧಿಸಿ ರಾಜೀನಾಮೆ
ಇದರ ಬಳಿಕ ಟ್ವಿಟ್ಟರ್ ಖಾತೆಯಲ್ಲಿ ಮತ್ತೊಂದು ಪತ್ರವನ್ನು ಪ್ರಕಟಿಸಿರುವ ಅವರು ಮಸೂದೆ ವಿರೋಧಿಸಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
"ಆರ್ಟಿಕಲ್ 14, 15 ಹಾಗೂ 25ರ ಪ್ರಕಾರ ಈ ಮಸೂದೆ ಸಂವಿಧಾನ ವಿರುದ್ಧವಾಗಿದ್ದು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡುತ್ತದೆ. ಮುಸ್ಲಿಂ ಸಮುದಾಯದಲ್ಲಿ ಮಸೂದೆ ಜಾರಿ ಭಯವನ್ನು ಉಂಟು ಮಾಡುತ್ತದೆ" ಎಂದು ಅಬ್ದುರ್ ರೆಹಮಾನ್ ಆತಂಕ ವ್ಯಕ್ತಪಡಿಸಿದ್ದಾರೆ.
"ಪೌರತ್ವ ತಿದ್ದುಪಡಿ ಮಸೂದೆ ಕೇವಲ ಮುಸ್ಲಿಮರು ಮಾತ್ರವಲ್ಲ ದಲಿತ, ಆದಿವಾಸಿ, ಬಡವರ ವಿರೋಧಿಯಾಗಿದ್ದು, ಈ ಕಾರಣಕ್ಕಾಗಿ ಇದನ್ನು ವಿರೋಧಿಸಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಪತ್ರದಲ್ಲಿ ಹೇಳಿದ್ದಾರೆ.

ಅಮಿತ್ ಶಾರಿಂದ ಸುಳ್ಳು ಮಾಹಿತಿ
ಮಸೂದೆ ಅಂಗೀಕಾರದ ವೇಳೆ ಸುಳ್ಳು ಸಂಗತಿಗಳನ್ನು, ದಾರಿತಪ್ಪಿಸುವ ಮಾಹಿತಿಗಳನ್ನು ಮತ್ತು ತಪ್ಪು ತರ್ಕಗಳನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. ಇತಿಹಾಸವನ್ನು ವಿರೂಪಗೊಳಿಸಲಾಗಿದೆ. ಈ ಮಸೂದೆ ಹಿಂದಿನ ಉದ್ದೇಶ ಮುಸ್ಲಿಮರಲ್ಲಿ ಭಯ ಹುಟ್ಟಿಸುವುದು ಮತ್ತು ದೇಶವನ್ನು ವಿಭಜಿಸುವುದಾಗಿದೆ ಎಂದು ರಹಮಾನ್ ಆರೋಪಿಸಿದ್ದಾರೆ.












Click it and Unblock the Notifications