ಸಂಜಯ್ ದತ್ಗೆ ಮತ್ತೆ ರಜೆ : ತನಿಖೆಗೆ ಮಹಾರಾಷ್ಟ್ರ ಆದೇಶ
ಮುಂಬಯಿ, ಡಿ. 26: ಮುನ್ನಾಭಾಯ್ ಖ್ಯಾತಿಯ ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಈ ಬಾರಿ ಕ್ರಿಸ್ಮಸ್ ಆಚರಣೆಗಾಗಿ 14 ದಿನಗಳ ಪೆರೋಲ್ ಸಿಕ್ಕಿದೆ.
ಇದು ಸಂಜಯ್ ದತ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿರಬಹುದು. ಆದರೆ, ಈ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸರ್ಕಾರ ತನಿಖೆ ನಡೆಸಲು ನಿಶ್ಚಯಿಸಿದೆ. [ಮಹಾರಾಷ್ಟ್ರಕ್ಕೆ ಮುನ್ನಾಭಾಯ್ ತಲೆನೋವು]
ಮಹಾರಾಷ್ಟ್ರ ಗೃಹ ಸಚಿವ ರಾಮ್ ಶಿಂಧೆ ಪ್ರತಿಕ್ರಿಯೆ ನೀಡಿ, "ಸಂಜಯ್ ದತ್ ಅವರಿಗೆ ಮೇಲಿಂದ ಮೇಲೆ ಪೆರೋಲ್ ಸಿಗುತ್ತಿದೆ. ಆದ್ದರಿಂದ ಜೈಲಿನಲ್ಲಿರುವ ಉಳಿದ ಕೈದಿಗಳಿಗೆ ಎಷ್ಟು ರಜೆ ಸಿಕ್ಕಿದೆ ಎಂಬುದರ ಕುರಿತು ವಿಚಾರಣೆ ನಡೆಸಲಿದ್ದೇವೆ. ಅವರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಈ ಕುರಿತು ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ" ಎಂದು ತಿಳಿಸಿದರು.
ಸಂಜಯ್ ದತ್ ಪೆರೋಲ್ಗೆ ಸಂಬಂಧಿಸಿದಂತೆ ಉತ್ತರ ನೀಡಿರುವ ಹೆಚ್ಚುವರಿ ಡಿಜಿಪಿ (ಜೈಲು) ಮೀರನ್ ಬೋರ್ವಾಂಕರ್, "ನಾವು ಸಂಜಯ್ ದತ್ ಅವರಿಗೆ 14 ದಿನಗಳ ತಾತ್ಕಾಲಿಕ ರಜೆ ನೀಡಿದ್ದೇವೆ. ಈ ಸೌಲಭ್ಯ ಪಡೆಯುವುದು ಪ್ರತಿ ಕೈದಿಯ ಹಕ್ಕು. ಆದರೆ, ಇದಕ್ಕಾಗಿ ಸಂಜಯ್ ದತ್ ನೀಡಿರುವ ಕಾರಣ ನನಗೆ ತಿಳಿದಿಲ್ಲ. ಅವರು ತಾತ್ಕಾಲಿಕ ರಜೆಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ಬಿಡುಗಡೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ. [ಹೆಂಡ್ತೀನ ನೋಡ್ಕೋಬೇಕು, ಪೆರೋಲ್ ಕೊಡಿ]
1 ವರ್ಷದಲ್ಲಿ 118ದಿನ ಹೊರಗೆ : 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಅಪರಾಧಕ್ಕಾಗಿ ಸಂಜಯ್ ದತ್ ಪ್ರಸ್ತುತ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಸಂಜಯ್ ದತ್ ಅವರು ಪ್ರಕರಣ ತನಿಖೆಯಲ್ಲಿದ್ದಾಗಲೇ ಒಂದೂವರೆ ವರ್ಷ ಜೈಲಿನಲ್ಲಿ ಕಳೆದಿರುವ ಕಾರಣ ಇನ್ನು ಮೂರುವರೆ ವರ್ಷವಷ್ಟೇ ಜೈಲಿನಲ್ಲಿರಬೇಕು. [ಸಂಜಯ್ ದತ್ ಗೆ 5 ವರ್ಷ ಜೈಲು]
ಆದರೆ, ಸಂಜಯ್ 2013ರ ಮೇ ತಿಂಗಳಿನಿಂದ 2014ರ ಮೇ ತಿಂಗಳಿನ ನಡುವೆ 118 ದಿನಗಳ ಕಾಲ ರಜೆ ಅಥವಾ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಕಳೆದಿದ್ದಾರೆ. ಅವರಿಗೆ ನೀಡುತ್ತಿರುವ ವಿನಾಯಿತಿಯನ್ನು ಇತರ ಕೈದಿಗಳಿಗೆ ನೀಡಿರುವುದು ಕಂಡುಬಂದಿಲ್ಲ ಎಂದು ಮುಂಬಯಿ ಹೈ ಕೋರ್ಟ್ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಆಗ ಕೇಂದ್ರ ಸರ್ಕಾರವೂ ಸಂಜಯ್ ದತ್ ಅವರಿಗೆ ಪದೇ ಪದೆ ರಜೆ ನೀಡುತ್ತಿರುವುದನ್ನು ಪ್ರಶ್ನಿಸಿತ್ತು. [ಟಾಡಾ ಕೋರ್ಟ್ ಗೆ ಸಂಜಯ್ ಶರಣು]
ತಾತ್ಕಾಲಿಕ ರಜೆ ಎಂದರೇನು? : ಕೈದಿಯೋರ್ವನಿಗೆ ತಾತ್ಕಾಲಿಕ ರಜೆಯನ್ನು ತನ್ನ ಕುಟುಂಬದ ಜೊತೆ ಕಳೆಯಲು, ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಮತ್ತು ಆರೋಗ್ಯ ಸಂಬಂಧಿ ಕಾರಣಗಳಿಗಾಗಿ ನೀಡಲಾಗುತ್ತದೆ.