ಮುಂದಿನ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆ: ಸರ್ಕಾರದ ಮಹತ್ವದ ನಡೆ
ಮುಂಬೈ, ಫೆಬ್ರವರಿ 3: ವಿದ್ಯುನ್ಮಾನ ಮತ ಯಂತ್ರಗಳ ಬಳಕೆಯಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಇಲ್ಲಿ ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ ಎಂಬ ಆರೋಪಗಳ ನಡುವೆ, ಚುನಾವಣೆಯಲ್ಲಿ ಪಾರದರ್ಶಕತೆ ಉಳಿಸಲು ಹಿಂದಿನ ಕಾಲದ ಮತಪತ್ರಗಳ ಬಳಕೆಯ ವಿಧಾನಕ್ಕೆ ಹಿಂದಿರುವುದು ಸೂಕ್ತ ಎಂಬ ಅಭಿಪ್ರಾಯ ಹೆಚ್ಚಾಗುತ್ತಿದೆ. ಈ ಮಧ್ಯೆ ಚುನಾವಣೆಗಳನ್ನು ನಡೆಸಲು ಮತಪತ್ರಗಳ ಬಳಕೆಯನ್ನು ಮರಳಿ ಆರಂಭಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.
ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಕಾಗದ ಮತಪತ್ರಗಳನ್ನು ಉಪಯೋಗಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರವು ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಹೊಸ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಿನಿಂದ ಮಹಾರಾಷ್ಟ್ರ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದೆ.
''ಬಿಬಿಎಂಪಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಿ"
ಇವಿಎಂಗಳ ಜತೆಯಲ್ಲಿ ಮತಪತ್ರಗಳನ್ನು ಮರು ಪರಿಚಯಿಸುವ ಕರಡು ಮಸೂದೆಯನ್ನು ಸಿದ್ಧಪಡಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ವಿಧಾನಸಭೆ ಸ್ಪೀಕರ್ ನಾನಾ ಪಟೋಲೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. 'ಕರಡು ಸಿದ್ಧವಾದರೆ ಮಸೂದೆಯನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸಬಹುದು' ಎಂದು ನಾನಾ ಪಟೋಲೆ ತಿಳಿಸಿದ್ದಾರೆ. ಮುಂದೆ ಓದಿ.
ರಾಜ್ಯ ಚುನಾವಣೆಗಳಲ್ಲಿ ಅನ್ವಯ
ಈ ಮಸೂದೆಯು ಅನುಷ್ಠಾನಗೊಂಡರೆ ಅದು ರಾಜ್ಯ ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಾತ್ರ ಅನ್ವಯವಾಗಲಿದೆ. ಉದ್ಧವ್ ಠಾಕ್ರೆ ಸರ್ಕಾರವು ಈ ಮಸೂದೆಯನ್ನು ತನ್ನ ರಾಜಕೀಯ ನಡೆಯಾಗಿ ಆದ್ಯತೆಯೊಂದಿಗೆ ಮಂಡಿಸಿದರೆ, ಇವಿಎಂಗಳ ಜತೆಗೆ ಮತಪತ್ರಗಳನ್ನು ಕೂಡ ಚುನಾವಣೆಯಲ್ಲಿ ಬಳಸುವಂತಹ ಶಾಸನ ಜಾರಿಗೆ ತಂದ ಮೊದಲ ರಾಜ್ಯ ಎಂದೆನಿಸಿಕೊಳ್ಳಲಿದೆ.
ಅಧಿಕಾರಿಗಳ ಜತೆ ಸಭೆ
ಮತಪತ್ರಗಳನ್ನು ಪುನಃ ಪರಿಚಯಿಸುವ ಸಂಬಂಧ ಮಹಾ ವಿಕಾಸ್ ಅಘಾಡಿ ಸರ್ಕಾರದ ಎಲ್ಲ ಮೂರು ಪಕ್ಷಗಳಾದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ಸಿಪಿ ಒಂದೇ ರೀತಿಯ ಅಭಿಪ್ರಾಯ ಹೊಂದಿವೆ ಎನ್ನಲಾಗಿದೆ. ಈಗಾಗಲೇ ಚುನಾವಣಾ ಆಯೋಗದ ಅಧಿಕಾರಿಗಳು ಸೇರಿದಂತೆ ವಿವಿಧ ಸಂಬಂಧಿತ ಸಂಸ್ಥೆಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ.
ಬಿಹಾರ ಚುನಾವಣೆ: ಮತ್ತೆ ಇವಿಎಂ ಮೇಲೆ ದೋಷ ಹೇರಿದ ಕಾಂಗ್ರೆಸ್
ಸರ್ಕಾರಗಳಿಗೆ ಅಧಿಕಾರವಿದೆ
'ಸಂವಿಧಾನದ 328ನೇ ವಿಧಿಯು ಚುನಾವಣೆಗಳನ್ನು ನಡೆಸುವ ಸಂಬಂಧ ಕಾನೂನುಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದೆ. ಚುನಾವಣೆಗಳು ನ್ಯಾಯಸಮ್ಮತ, ತಟಸ್ಥ ಮತ್ತು ಪ್ರತಿ ಐದು ವರ್ಷಕ್ಕೆ ಒಮ್ಮೆ ಮಾತ್ರವೇ ನಡೆಯುವಂತೆ ಮಾಡುವುದು ಚುನಾವಣಾ ಆಯೋಗಕ್ಕೆ ರಾಜ್ಯಗಳು ನೀಡಬಹುದಾದ ಬದ್ಧತೆಯಾಗಿದೆ ಎಂದು ಪಟೋಲೆ ತಿಳಿಸಿದ್ದಾರೆ.
ಇವಿಎಂ: ಭಾರತೀಯರು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು
ಜನರಿಗೆ ಸಂತೋಷ
'ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿರುವ ಜನರು, ಮತಪತ್ರಗಳ ನ್ಯಾಯಸಮ್ಮತತೆ ಬಗ್ಗೆ ನಂಬಿಕೆ ಇರಿಸುವ ಜನರು ಈ ನಡೆಯಿಂದ ಸಂತೋಷಗೊಳ್ಳಲಿದ್ದಾರೆ. ಮುಂದೆ ಚುನಾವಣೆ ಇವಿಎಂ ಮೂಲಕ ನಡೆಯಬೇಕೇ ಅಥವಾ ಮತಪತ್ರಗಳ ಮೂಲಕ ನಡೆಯಬೇಕೇ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ' ಎಂದ ಅವರು ಹೇಳಿದ್ದಾರೆ.