ಅಜಿತ್ ಪವಾರ್ ರಾಜೀನಾಮೆ: ಬ್ರೇಕಿಂಗ್ ನ್ಯೂಸ್ ಅಲ್ಲ ಪೇಪರ್ ನ್ಯೂಸ್!
ಮುಂಬೈ, ನವೆಂಬರ್.26: ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪೊಲಿಟಿಕಲ್ ಡ್ರಾಮಾದ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಇದರ ನಡುವೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಮತ್ತೊಂದು ಶಾಕ್ ಹೊಡೆದಿದೆ.
ಕಾಂಗ್ರೆಸ್-ಶಿವಸೇನೆ-ಎನ್ ಸಿಪಿ ಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನೇ ಹೊರಡಿಸಿದೆ. 24 ಗಂಟೆಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ಕೋರ್ಟ್ ಕಟ್ಟಪ್ಪಣೆ ಹೊರಡಿಸಿದೆ. ಇದು ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದ ಎನ್ ಸಿಪಿ ಮುಖಂಡ ಹಾಗೂ ಡಿಸಿಎಂ ಅಜಿತ್ ಪವಾರ್ ಎದೆಯಲ್ಲಿ ನಡುಕ ಹುಟ್ಟಿಸಿದಂತೆ ಕಾಣುತ್ತಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ
ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಫುಲ್ ಶೇಕ್ ಆದ ಅಜಿತ್ ಪವಾರ್ ಇಂದು ನಡೆದ ದಿಢೀರ್ ಬೆಳವಣಿಗೆಯಲ್ಲಿ ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ತಮ್ಮ ತಂದೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಅವರ ಪುತ್ರ ನಿರಾಕರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಅಲ್ಲ ಪೇಪರ್ ನ್ಯೂಸ್!
ಇಂದು ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇ ಎಲ್ಲ ಸುದ್ದಿವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆದರೆ, ಅಸಲಿಗೆ ಅಜಿತ್ ಪವಾರ್ ರಾಜೀನಾಮೆ ವಿಚಾರ ಬ್ರೇಕಿಂಗ್ ನ್ಯೂಸೇ ಆಗಿರಲಿಲ್ಲ. ಏಕೆಂದರೆ, ಈ ವಿಚಾರ ಮೊದಲು ಪತ್ರಿಕೆಯೊಂದು ಪ್ರಕಟ ಮಾಡಿತ್ತು.
LIVE: ಸಿಎಂ ರಾಜೀನಾಮೆ, ಮೂರೇ ದಿನಕ್ಕೆ ಉರುಳಿದ ಮಹಾರಾಷ್ಟ್ರ ಸರ್ಕಾರ
ತ್ರಿಪಕ್ಷಗಳಿಗೆ ಮೊದಲೇ ಗೊತ್ತಿತ್ತಾ?
ಅಚ್ಚರಿ ಎನ್ನಿಸಿದರೂ ಇದು ಸತ್ಯ. ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆ ಅಜಿತ್ ಪವಾರ್ ರಾಜೀನಾಮೆ ಬಗ್ಗೆ ಮೊದಲು ಸುದ್ದಿ ಪ್ರಕಟ ಮಾಡಲಾಗಿತ್ತು ಎಂಬ ವಿಚಾರ ಇದೀಗ ಹೊರ ಬಿದ್ದಿದೆ. ಅಂದರೆ ಎನ್ ಸಿಪಿ ಮುಖಂಡ ಡಿಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದು ಮೊದಲೇ ಮಿತ್ರಪಕ್ಷಗಳು ಅಂದಾಜಿಸಿದ್ದವು ಎನ್ನಲಾಗಿದೆ.
ನಿನ್ನೆ ಹಾಗೆ, ಇಂದು ಹೀಗೆ: ಇದಪ್ಪಾ ರಾಜಕಾರಣ!
ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳೂ ಅಲ್ಲ. ಇಲ್ಲಿ ಯಾವಾಗಾ ಯಾರು, ಯಾರ ಪರವಾಗಿ ಮಾತನಾಡುತ್ತಾರೆ ಎಂಬುದೇ ಗೊತ್ತಾಗೋದಿಲ್ಲ. ಇಂದು ಮಹಾರಾಷ್ಟ್ರ ರಾಜಕಾರಣದಲ್ಲಿ ಆಗಿದ್ದೂ ಕೂಡಾ ಅದೇ. ನಿನ್ನೆಯವರೆಗೂ ಅಜಿತ್ ಪವಾರ್, ನಮ್ಮ ಪಕ್ಷದವರೇ ಅಲ್ಲ ಎಂದು ಎನ್ ಸಿಪಿ ದೂರುತ್ತಿತ್ತು. ಶಿವಸೇನೆ ಕೂಡಾ ವಾಗ್ದಾಳಿ ನಡೆಸುತ್ತಿತ್ತು. ಆದರೆ, ಇಂದು ಎಲ್ಲವೂ ಉಲ್ಟಾ ಹೊಡೆದಿದೆ.
ಉಳಿಯಲಿದೆಯೇ ಮಹಾರಾಷ್ಟ್ರ ಸರ್ಕಾರ? ಯಾರ ಬಳಿ ಎಷ್ಟು ಶಾಸಕರಿದ್ದಾರೆ?
ಉದ್ಧವ್ ಠಾಕ್ರೆಯವರೇ ಮುಂದಿನ ಮುಖ್ಯಮಂತ್ರಿ
ಅಜಿತ್ ಪವಾರ್ ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ಹೊರ ಬೀಳುತ್ತಿದ್ದಂತೆ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಎನ್ ಸಿಪಿ ಮುಖಂಡ ಅಜಿತ್ ಪವಾರ್ ಬಗ್ಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಸಾಫ್ಟ್ ಆಗಿ ಮಾತನಾಡಿದ್ದಾರೆ. ಅಜಿತ್ ಕೂಡಾ ನಮ್ಮ ಜೊತೆಗಿದ್ದಾರೆ. ಈಗಾಗಲೇ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಮ್ಮ ಜೊತೆಗೆ ಸೇರಿಕೊಂಡಿದ್ದಾರೆ. ನಮ್ಮ ನಿರ್ಧಾರದಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.