ಮಹಾರಾಷ್ಟ್ರ ತ್ರಿಪಕ್ಷ ಮೈತ್ರಿ ಸರ್ಕಾರಕ್ಕೆ ಶನಿವಾರ ಬಹುಮತದ ಅಗ್ನಿಪರೀಕ್ಷೆ
ಮುಂಬೈ, ನವೆಂಬರ್ 29: ಎನ್ಸಿಪಿ-ಶಿವಸೇನಾ-ಕಾಂಗ್ರೆಸ್ ನ ತ್ರಿಮೈತ್ರಿ ಸರ್ಕಾರಕ್ಕೆ ನಾಳೆ ಶನಿವಾರ ಬಹುಮತ ಸಾಬೀತಿನ ಅಗ್ನಿಪರೀಕ್ಷೆ ಇದ್ದು, ಮೈತ್ರಿ ಸರ್ಕಾರವು ವಿಶ್ವಾಸದಲ್ಲಿದೆ.
ನಿನ್ನೆಯಷ್ಟೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ತಮಗೆ 162 ಶಾಸಕರ ಬೆಂಬಲ ಇರುವುದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದ ಮೈತ್ರಿ ಪಕ್ಷಗಳು, ನಾಳಿನ ವಿಶ್ವಾಸಮತವನ್ನು ಸುಲಭವಾಗಿ ಜಯಿಸುವ ವಿಶ್ವಾಸದಲ್ಲಿವೆ.

ಎನ್ಸಿಪಿ ಶಾಸಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಆಗಿದ್ದು, ನಾಳಿನ ವಿಶ್ವಾಸಮತ ಯಾಚನೆ ಕಾರ್ಯವನ್ನು ನಡೆಸಿಕೊಡಲಿದ್ದಾರೆ.
ಡಿಸೆಂಬರ್ 3 ರ ಒಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲ ಬಿ.ಎಸ್.ಕೊಶ್ಯಾರಿ ಸೂಚಿಸಿದ್ದರು. ಹಾಗಾಗಿ ನಾಳೆಯೇ ವಿಶ್ವಾಮತ ಯಾಚನೆ ಮಾಡಲು ಮೈತ್ರಿ ಸರ್ಕಾರ ಸಜ್ಜಾಗಿದೆ.
ನಾಳೆ ಮಧ್ಯಾಹ್ನ 2 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆ ಇದೆಯೆಂದು ವಿಧಾನಭವನ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಲವು ನಾಟಕೀಯ ತಿರುವುಗಳ ನಂತರ ನಿನ್ನೆ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಎನ್ಸಿಪಿ, ಶಿವಸೇನಾ, ಕಾಂಗ್ರೆಸ್ನ ಆರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.












Click it and Unblock the Notifications