ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಆತಂಕ; ಎಚ್ಚರಿಕೆ ರವಾನಿಸಿದ ಸಿಎಂ
ಮುಂಬೈ, ಜೂನ್ 24: ದೇಶದಲ್ಲಿ ಹೊಸದಾಗಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜ್ಯದ ಆರೋಗ್ಯ ಇಲಾಖೆಗೆ ಸಂಭವನೀಯ ಮೂರನೇ ಅಲೆ ನಿರ್ವಹಣೆ ಕುರಿತು ಯೋಜನೆ ರೂಪಿಸಬೇಕೆಂದು ನಿರ್ದೇಶನ ನೀಡಿದ್ದಾರೆ.
ರಾಯಗಢ, ರತ್ನಗಿರಿ, ಸಿಂಧುದುರ್ಗ, ಸತಾರ, ಸಾಂಗ್ಲಿ, ಕೊಲ್ಲಾಪುರ, ಹಿಂಗೋಜಿ ಜಿಲ್ಲೆಗಳ ಕಲೆಕ್ಟರ್ಗಳೊಂದಿಗೆ ಸಭೆ ನಡೆಸಿದ್ದಾರೆ.
ಮಧ್ಯಪ್ರದೇಶ: ಮೊದಲ 'ಡೆಲ್ಟಾ ಪ್ಲಸ್' ಸೋಂಕಿತೆ ಸಾವು
ದೇಶದಲ್ಲಿ ಈಚೆಗೆ ಗುರುತಿಸಲಾಗಿರುವ ಡೆಲ್ಟಾ ಪ್ಲಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ಹೆಚ್ಚು ಪತ್ತೆಯಾಗಿವೆ. ದೇಶದಲ್ಲಿ ಒಟ್ಟಾರೆ 42 ಡೆಲ್ಟಾ ಪ್ಲಸ್ ಪ್ರಕರಣಗಳಿದ್ದು, ಆ ಪೈಕಿ 21 ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ಇವೆ. ಮಹಾರಾಷ್ಟ್ರದ ಏಳು ಜಿಲ್ಲೆಗಳಲ್ಲಿ ಈ ಪ್ರಕರಣಗಳು ಪತ್ತೆಯಾಗಿರುವುದಾಗಿ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪ್ ಮಾಹಿತಿ ನೀಡಿದ್ದಾರೆ.
"ಪ್ರತಿ ರೋಗಿಯನ್ನೂ ಪ್ರತ್ಯೇಕವಾಗಿರಿಸಿದ್ದೇವೆ. ಅವರ ಪ್ರತಿ ವಿವರವನ್ನು ಕಲೆ ಹಾಕುತ್ತಿದ್ದೇವೆ. ಈ ಸೋಂಕಿನ ಜೆನೋಮ್ ಅಧ್ಯಯನಕ್ಕೆ ಮಾದರಿ ಕಳುಹಿಸುತ್ತೇವೆ. ಈ ರೂಪಾಂತರದಿಂದ ಸಾವು ಸಂಭವಿಸಿರುವ ವರದಿಯಾಗಿಲ್ಲ. ಈ ರೂಪಾಂತರದ ಲಕ್ಷಣಗಳು ಹಾಗೂ ಚಿಕಿತ್ಸೆ ಒಂದೇ ರೀತಿ ಇವೆ. ಮಕ್ಕಳಲ್ಲಿ ಈ ರೂಪಾಂತರ ಪತ್ತೆಯಾಗಿಲ್ಲ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಡೆಲ್ಟಾ ರೂಪಾಂತರದಿಂದ ಸೃಷ್ಟಿಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಈ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ, ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ತಿಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3 ಪ್ರಕರಣಗಳು, ತಮಿಳುನಾಡಿನಲ್ಲಿ ಮೂರು ಪ್ರಕರಣಗಳು, ಕರ್ನಾಟಕದಲ್ಲಿ 2 ಪ್ರಕರಣಗಳು, ಪಂಜಾಬ್, ಆಂಧ್ರಪ್ರದೇಶ ಹಾಗೂ ಜಮ್ಮುವಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಮಧ್ಯಪ್ರದೇಶದಲ್ಲಿ ಒಬ್ಬರು ಈ ರೂಪಾಂತರದಿಂದ ಸಾವನ್ನಪ್ಪಿದ್ದಾರೆ.
ದೇಶದ ಮೂರು ರಾಜ್ಯಗಳಲ್ಲಿ ಇದುವರೆಗೆ ಪತ್ತೆಯಾದ ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕಾಳಜಿಯ ರೂಪಾಂತರವೆಂದು ವರ್ಗೀಕರಿಸಿದೆ.