ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು; ಅಂಕಿ-ಸಂಖ್ಯೆಗಳ ಲೆಕ್ಕ
ಮುಂಬೈ, ನವೆಂಬರ್ 23 : ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನವೆಂಬರ್ 30ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದೆ.
ಸರ್ಕಾರ ರಚನೆ ಮಾಡಲು ಬೇಕಾದ ಅಗತ್ಯ ಸಂಖ್ಯಾಬಲ ನಮ್ಮ ಬಳಿ ಇದೆ ಎಂದು ಬಿಜೆಪಿ ಹೇಳಿದೆ. ಆದರೆ, ಎಲ್ಲಾ ಎನ್ಸಿಪಿ ಶಾಸಕರು ಅಜಿತ್ ಪವಾರ್ ಜೊತೆಗಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಬೆಂಬಲಿಸುವುದು ಅಜಿತ್ ಪವಾರ್ ವೈಯಕ್ತಿಕ ತೀರ್ಮಾನ ಎಂದು ಶರದ್ ಪವಾರ್ ಹೇಳಿದ್ದಾರೆ.
ಎನ್ಸಿಪಿಯ ಎಲ್ಲಾ 54 ಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತು ಮಾಡಲು ಎನ್ಸಿಪಿಯ 25 ಶಾಸಕರು ಬೆಂಬಲ ನೀಡಿದರೂ ಸಾಕು, ಪಕ್ಷೇತರರನ್ನು ಸೆಳೆಯಬುದು ಎಂಬುದು ಬಿಜೆಪಿ ಲೆಕ್ಕಾಚಾರ.
ಶರದ್ ಪವಾರ್ ಜೊತೆ ಎಷ್ಟು ಶಾಸಕರು ನಿಲ್ಲಲಿದ್ದಾರೆ? ಎಂಬುದು ಮಹಾರಾಷ್ಟ್ರ ರಾಜಕೀಯದ ಮುಂದಿನ ಲೆಕ್ಕಾಚಾರವನ್ನು ತೀರ್ಮಾನಿಸಲಿದೆ. 13 ಪಕ್ಷೇತರ ಶಾಸಕರು ಚುನಾವಣೆಯಲ್ಲಿ ಜಯಗಳಿಸಿದ್ದು, ಯಾರಿಗೆ ಬೆಂಬಲ ನೀಡುತ್ತಾರೆ?.

ಮಹಾರಾಷ್ಟ್ರ ವಿಧಾನಸಭೆ ಬಲಾಬಲ
ಮಹಾರಾಷ್ಟ್ರ ವಿಧಾನಸಭೆ ಬಲಾಬಲ 288 ಕ್ಷೇತ್ರ. ಬಹುಮತ ಸಾಬೀತು ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಚುನಾವಣೆಯಲ್ಲಿ ಬಿಜೆಪಿ 105, ಕಾಂಗ್ರೆಸ್ 44, ಎನ್ಸಿಪಿ 54, ಶಿವಸೇನೆ 56 ಮತ್ತು 13 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬಿಜೆಪಿ-ಎನ್ಸಿಪಿ ಮೈತ್ರಿ ಸರ್ಕಾರ
ನವೆಂಬರ್ 30ರಂದು ಎನ್ಸಿಪಿ-ಬಿಜೆಪಿ ಸರ್ಕಾರ ಬಹುಮತವನ್ನು ಸಾಬೀತು ಮಾಡಬೇಕು. ಬಿಜೆಪಿಯ 105 ಶಾಸಕರು ಇದ್ದಾರೆ, 13 ಪಕ್ಷೇತರ, ಇಬ್ಬರು ಚಿಕ್ಕಪಕ್ಷಗಳ ಶಾಸಕರು ಬಿಜೆಪಿ ಜೊತೆಗಿದ್ದಾರೆ. ಎನ್ಸಿಪಿಯ 54 ಶಾಸಕರಲ್ಲಿ ಎಷ್ಟು ಜನರು ಅಜಿತ್ ಪವಾರ್ ಜೊತೆಗೆ ಹೋಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಭೆ ಕರೆದ ಶರದ್ ಪವಾರ್
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಎಷ್ಟು ಶಾಸಕರು ಅವರ ಜೊತೆ ನಿಲ್ಲುತ್ತಾರೆ? ಎಂಬುದನ್ನು ಕಾದು ನೋಡಬೇಕು. ಒಂದು ವೇಳೆ 10ಕ್ಕಿಂತ ಹೆಚ್ಚು ಶಾಸಕರು ಅಜಿತ್ ಪವಾರ್ ಜೊತೆಗೆ ಹೋಗದಿದ್ದರೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ.

ಅಹ್ಮದ್ ಪಟೇಲ್ ಹೇಳಿದ್ದೇನು?
"ಇಂದು ಮೂರು ಪಕ್ಷಗಳ ಮುಖಂಡರು ಸಭೆ ನಡೆಸಲಿದ್ದೇವೆ. ಬೆಳಗ್ಗೆ ನಡೆದಿರುವ ಬೆಳವಣಿಗೆ ನಾಚಿಗೇಡು. ಆ ಬಗ್ಗೆ ಮಾತನಾಡಲು ಪದಗಳೇ ಇಲ್ಲ. ವಿಶ್ವಾಸಮತದ ಸಂದರ್ಭದಲ್ಲಿ ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ" ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹೇಳಿದರು.












Click it and Unblock the Notifications