ಮಹಾರಾಷ್ಟ್ರದಲ್ಲಿ ರಂಗೇರಿದ ಕಣ: ನಾಲ್ವರು ಬಿಜೆಪಿ ನಾಯಕರ ಉಚ್ಚಾಟನೆ
ಮುಂಬೈ, ಅಕ್ಟೋಬರ್ 11: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆಯೇ ಚುನಾವಣಾ ಕಣ ರಂಗೇರುತ್ತಿದೆ. ಪಕ್ಷದ ವಿರುದ್ಧ ಬಂಡಾಯ ಎದ್ದ ಟಿಕೆಟ್ ವಂಚಿತರು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.
ತಮ್ಮ ನಾಯಕನಿಗೆ ಟಿಕೆಟ್ ಸಿಗದ ಕಾರಣಕ್ಕೆ ಶಿವಸೇನೆಯ 26 ಕಾರ್ಪೋರೇಟರ್ ಗಳು ಮತ್ತು ನೂರಾರು ಶಾಸಕರು ರಾಜೀನಾಮೆ ನೀಡಿದ ಎರಡು ದಿನಗಳಲ್ಲಿ ಬಿಜೆಪಿ ತನ್ನ ನಾಲ್ವರು ಬಂಡಾಯ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದೆ.
ಚರನ್ ವಾಗ್ಮರೆ, ಗೀತಾ ಜೈನ್, ಬಾಳಾಸಾಹೆಬ್ ಒಹ್ವಾಲ್, ದಿಲೀಪ್ ದೇಶ್ಮುಖ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಬಿಜೆಪಿ ಮತ್ತು ಶಿವಸೇನೆ ಮೈತ್ರಿಯ ನಂತರ ಉಭಯ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ಹೆಚ್ಚಾಗಿದೆ. ಶಿವಸೇನೆ ಸದಸ್ಯರು ನಿರೀಕ್ಷಿಸಿದ್ದ ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್ ನೀಡಿದ್ದು ಮತ್ತು ಬಿಜೆಪಿ ನಿರೀಕ್ಷಿಸಿದ ಕ್ಷೇತ್ರದಲ್ಲಿ ಶಿವಸೇನೆಗೆ ಟಿಕೆಟ್ ಸಿಕ್ಕಿದ್ದು ಟಿಕೆಟ್ ಆಕಾಂಕ್ಷಿಗಳಲ್ಲಿ ಭಾರೀ ನಿರಾಸೆ ಉಂಟು ಮಾಡಿದೆ. ಈ ಕಾರಣದಿಂದ ಪಕ್ಷದ ವಿರುದ್ಧ ಬಂಡಾಯ ಎದ್ದು, ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾದವರನ್ನು ಬಿಜೆಪಿ ಉಚ್ಚಾಟಿಸಿದೆ.
ಮಹಾರಾಷ್ಟ್ರದ ಕಲ್ಯಾಣ್ ಪೂರ್ವ ಕ್ಷೇತ್ರದಿಂದ ಶಿವಸೇನೆ ನಾಯಕ ಧನಂಜಯ್ ಬಾಡೊರೆ ಅವರಿಗೆ ಟಿಕೆಟ್ ನೀಡದೇ, ಬಿಜೆಪಿ ಅಭ್ಯರ್ಥಿಯಾಗಿ ಗಣಪತ್ ಕಲು ಗಾಯಕ್ವಾಡ್ ಅವರಿಗೆ ಟಿಕೆಟ್ ನೀಡಿದ್ದರಿಂದ ಬೇಸತ್ತು ಶಿವಸೇನೆಯ 26 ಕಾರ್ಪೋರೇಟರ್ ಗಳು ಮತ್ತು 300 ಕಾರ್ಯಕರ್ತರು ಎರಡು ದಿನಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications