ಮಹಾರಾಷ್ಟ್ರದಲ್ಲಿ 10 ಸಚಿವರು, 20 ಶಾಸಕರಿಗೆ ಕೊರೊನಾ ಸೋಂಕು
ಮುಂಬೈ, ಜನವರಿ 1: ಮಹಾರಾಷ್ಟ್ರ ಸರ್ಕಾರದ 10 ಮಂದಿ ಸಚಿವರು ಹಾಗೂ 20 ಶಾಸಕರಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಈ ಕುರಿತು ಶನಿವಾರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1431ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 454 ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ. ಕೊರೊನಾ ಪ್ರಕರಣಗಳ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿದೆ.
ಓಮಿಕ್ರಾನ್ ಇದೀಗ ದೇಶದ 23 ರಾಜ್ಯಗಳಿಗೆ ಹರಡಿದೆ. ದೆಹಲಿಯಲ್ಲಿ 351 ಪ್ರಕರಣಗಳಿವೆ. ತಮಿಳುನಾಡಿನಲ್ಲಿ 118 ಪ್ರಕರಣಗಳಿವೆ, ಗುಜರಾತ್ನಲ್ಲಿ 115, ಕೇರಳದಲ್ಲಿ 100ಕ್ಕೂ ಅಧಿಕ ಪ್ರಕರಣಗಳಿವೆ.

ದೇಶದ ಒಟ್ಟು 8 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ. 10ಕ್ಕಿಂತಾ ಹೆಚ್ಚಾಗಿದ್ದು, ಈ ಪೈಕಿ 6 ಜಿಲ್ಲೆಗಳು ಮಿಜೋರಾಂ, ಅರುಣಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿವೆ. ಇನ್ನುಳಿದಂತೆ 14 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ. 5 ರಿಂದ 10ರಷ್ಟಿದೆ ಎಂದು ಲವ್ ಅಗರ್ವಾಲ್ ವಿವರಿಸಿದ್ದಾರೆ.
ಹೊಸ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಶೇ. 90ಕ್ಕಿಂತಾ ಹೆಚ್ಚು ವಯಸ್ಕರು ಕೊರೊನಾ ವೈರಸ್ ಸೋಂಕು ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಮುನ್ನೆಚ್ಚರಿಕಾ ಡೋಸ್ ಪಡೆಯಲು ಅರ್ಹರಾಗಿರುವ ಫಲಾನುಭವಿಗಳಿಗೆ ಜನವರಿ 10ರಿಂದ ಸರ್ಕಾರವು ಎಸ್ಎಂಎಸ್ ಸಂದೇಶ ರವಾನಿಸಲಿದೆ. ಮುನ್ನೆಚ್ಚರಿಕಾ ಡೋಸ್ ಕೇವಲ 60 ವರ್ಷ ಮೇಲ್ಪಟ್ಟವರಿಗೆ ಲಭ್ಯವಾಗಲಿದೆ.
ಇದೇ ವೇಳೆ ಮಾತನಾಡಿದ ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ಅವರು, ಕೊರೊನಾ ನಿರೋಧಕ ಲಸಿಕೆಯು ಸೋಂಕು ತಗುಲುವುದನ್ನು ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ, ಇಸ್ರೇಲ್, ಅಮೆರಿಕ, ಯುರೋಪ್, ಬ್ರಿಟನ್ ಹಾಗೂ ಚೀನಾ ದೇಶಗಳ ಲಸಿಕೆಯು ಸೋಂಕಿನ ವಿರುದ್ಧ ಹೋರಾಡುವಲ್ಲಿ ಶಕ್ತವಾಗಿದೆ. ಸೋಂಕಿನ ತೀವ್ರತೆ ತಡೆಯುತ್ತವೆ. ಆಸ್ಪತ್ರೆಗೆ ದಾಖಲಾಗದಂತೆ ಹಾಗೂ ಸಾವು ಸಂಭವಿಸದಂತೆ ತಡೆಯುವ ಶಕ್ತಿ ಹೊಂದಿವೆ ಎಂದು ಅವರು ವಿವರಿಸಿದ್ದಾರೆ.
ಇನ್ನು ಕೊರೊನಾ ಲಸಿಕೆ ಪಡೆದಿದ್ದರೂ ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಗುಂಪು ಸೇರಬಾರದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಬಲರಾಮ್ ಭಾರ್ಗವ ಅವರು ಮನವಿ ಮಾಡಿದ್ದಾರೆ.
ಇನ್ನು ಕೊರೊನಾ ಸೋಂಕು ತಗುಲಿದವರಿಗೆ ನೀಡಲಾಗುವ ಚಿಕಿತ್ಸೆಯ ಕುರಿತಾಗಿ ಈಗಾಗಲೇ ಮಾರ್ಗಸೂಚಿ ನೀಡಲಾಗಿದ್ದು, ಇದೇ ಮಾರ್ಗಸೂಚಿ ಮುಂದುವರಿಯಲಿದೆ ಎಂದು ಅವರು ವಿವರಿಸಿದ್ದಾರೆ.
ಕೊರೊನಾ ಸೋಂಕಿನ ಎಲ್ಲಾ ರೂಪಾಂತರಿಗಳಿಗೂ ಇದೇ ಮಾರ್ಗಸೂಚಿ ಮುಂದುವರಿಸುವಂತೆ ಸೂಚಿಸಿರುವ ಭಾರ್ಗವ ಅವರು, ಕೊರೊನಾ ಸೋಂಕಿತರು ಮನೆಯಲ್ಲೇ ಐಸೋಲೇಟ್ ಆಗುವುದು ಅತಿ ಮುಖ್ಯ ಎಂದಿದ್ದಾರೆ.
ಇನ್ನು ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ನೀತಿ ಆಯೋಗದ ಸದಸ್ಯ ಡಾ. ವಿ. ಕೆ. ಪೌಲ್ ಅವರು, ಈ ವಿಚಾರವು ಚುನಾವಣಾ ಆಯೋಗದ ವ್ಯಾಪ್ತಿಗೆ ಬರಲಿದ್ದು, ಈ ಕುರಿತಾಗಿ ಸೂಕ್ತ ವೇದಿಕೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಓಮಿಕ್ರಾನ್ ಕುರಿತು ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಲಸಿಕೆ ಪಡೆಯದೇ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಓಮಿಕ್ರಾನ್ ಸೋಂಕು ತಗುಲಿದರೆ ರೋಗದ ತೀವ್ರತೆ ಕಡಿಮೆ ಇರಬಹುದು, ಆದರೆ ಬೃಹತ್ ಸಂಖ್ಯೆಯಲ್ಲಿನ ಸಣ್ಣ ಪ್ರಮಾಣವೂ ಸಹ ಆರೋಗ್ಯ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಬಹುದು ಎಂದು ಸೌಮ್ಯ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.
ಸಂದರ್ಶನದಲ್ಲಿ ಅವರು ಮಾತನಾಡಿದ್ದು, ಭಾರತೀಯರು ಓಮಿಕ್ರಾನ್ ಎದುರಿಸುವುದಕ್ಕೆ ಸಜ್ಜುಗೊಳ್ಳಬೇಕಾಗುತ್ತದೆ, ಆದರೆ ಆತಂಕ ಪಡಬಾರದು ಎಂದು ಹೇಳಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 309 ಹೊಸ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,270ಕ್ಕೆ ಏರಿಕೆಯಾಗಿದೆ. ಈ ಪೈಕಿ 374 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಮಿಕ್ರಾನ್ ಸೋಂಕಿತರಿದ್ದಾರೆ. ದೆಹಲಿ ಎರಡನೇ ಸ್ಥಾನದಲ್ಲಿದೆ. ಓಮಿಕ್ರಾನ್ ಹೆಚ್ಚಳದಿಂದ ಆಸ್ಪತ್ರೆಯಗಳಿಂದ ಹೊರರೋಗಿಗಳ ವಿಭಾಗದ ಮೇಲೆ ಹೆಚ್ಚು ಒತ್ತಡ ಉಂಟಾಗಲಿದ್ದು, ಐಸಿಯುಗಳಿಂದ ಹೊರತುಪಡಿಸಿ ಮನೆಯಲ್ಲೇ ಹೆಚ್ಚು ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಡಾ. ಸ್ವಾಮಿನಾಥನ್ ತಿಳಿಸಿದ್ದಾರೆ. ಓಮಿಕ್ರಾನ್ ತಡೆಗೆ ಟೆಲಿ ಕನ್ಸಲ್ಟೇಷನ್ ಗಳನ್ನು ಹೆಚ್ಚಿಸುವುದಕ್ಕೆ ಸ್ವಾಮಿನಾಥನ್ ಕರೆ ನೀಡಿದ್ದಾರೆ.












Click it and Unblock the Notifications