ಸರಕಾರ ಪತನದ ಜೊತೆಗೆ ಮುಂಬೈಗೆ ಹೊಸ ಕಮಿಷನರ್; ಯಾರು ವಿವೇಕ್ ಪಣಸಾಲ್ಕರ್?

ಮುಂಬೈ, ಜೂನ್ 30: ಉದ್ಧವ್ ಠಾಕ್ರೆ ಅಧಿಕಾರದಿಂದ ಕೆಳಗಿಳಿಯುವ ಮುನ್ನ ಮುಂಬೈಗೆ ಹೊಸ ಕಮಿಷನರ್‌ರನ್ನು ತಂದು ಕೂರಿಸಿ ಹೋಗಿದ್ದಾರೆ. ಹಿಂದೆ ಥಾಣೆ ಪೊಲೀಸ್ ಕಮಿಷನರ್ ಆಗಿದ್ದ ವಿವೇಕ್ ಪಣಸಾಲ್ಕರ್ ಈಗ ಮುಂಬೈಗೆ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕವಾಗಿದ್ದಾರೆ.

ಈ ಮೊದಲು ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಸಂಜಯ್ ಪಾಂಡೆ ಅವರ ಅಧಿಕಾರಾವಧಿ ಇಂದು ಜೂನ್ 30ಕ್ಕೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ನೂತನ ಕಮಿಷನರ್ ನೇಮಕವಾಗಿದೆ. ಸಂಜಯ್ ಪಾಂಡೆ ಗುರುವಾರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ತಮ್ಮ ಕೊನೆಯ ದಿನದ ಕರ್ತವ್ಯವನ್ನು ಮುಗಿಸಿದ್ಧಾರೆ.

ವಿವೇಕ್ ಫಣಸಾಲ್ಕರ್ 1989ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ವಿವಿಧ ಸ್ತರಗಳಲ್ಲಿ ಕೆಲಸ ಮಾಡಿರುವ ಅವರು ಹಾಲಿ ಮುಂಬೈ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡುವ ಮುನ್ನ ಮಹಾರಾಷ್ಟ್ರ ರಾಜ್ಯ ಪೊಲೀಸ್ ಗೃಹ ಮತ್ತು ಕಲ್ಯಾಣ ನಿಗಮಕ್ಕೆ ಎಂಡಿಯಾಗಿ ಕೆಲಸ ಮಾಡುತ್ತಿದ್ದರು. ಡಿಜಿಪಿ ಸ್ರರದ ಅಧಿಕಾರಿಯಾಗಿದ್ದಾರೆ.

ಭಯೋತ್ಪಾದನಾ ನಿಗ್ರಹ ದಳ, ಭ್ರಷ್ಟಾಚಾರ ನಿಗ್ರಹ ದಳ ಇತ್ಯಾದಿ ಕಡೆ ಕೆಲಸ ಮಾಡಿದ್ದಾರೆ. ಮುಂಬೈನಲ್ಲಿ ಅವರು 2010ರಿಂದ 2015ರವರೆಗೂ ಜಂಟಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ನಾಶಿಕ್, ನಾಗಪುರ್, ಅಕೋಲ, ಥಾಣೆ ನಗರಗಳಲ್ಲಿ ಕರ್ತವ್ಯ ಮಾಡಿದ ಅನುಭವ ಇದೆ.

ಸಂಜಯ್ ಪಾಂಡೆ ಅವರ ಅಧಿಕಾರಾವಧಿಯನ್ನು ಸರಕಾರ ಮುಂದುವರಿಸುವ ಅವಕಾಶ ಇತ್ತು. ಆದರೆ ಉದ್ಧವ್ ಠಾಕ್ರೆ ವಿವೇಕ್ ಪಣಸಾಲ್ಕರ್ ಅವರನ್ನು ಮುಂಬೈ ಆಯುಕ್ತರಾಗಿ ಮಾಡಲು ನಿರ್ಧರಿಸಿದರೆನ್ನಲಾಗಿದೆ. ಸೇವಾ ಹಿರಿತನದ ಆಧಾರದಲ್ಲಿ ಪಣಸಾಲ್ಕರ್‌ಗೆ ಈ ಅಧಿಕಾರ ಸಿಕ್ಕಿದೆ ಎನ್ನಲಾಗಿದೆ.

 ವಿವೇಕ್ ಫಣಸಾಲ್ಕರ್ ವೃತ್ತಿಜೀವನದ ಟೈಮ್‌ಲೈನ್

ವಿವೇಕ್ ಫಣಸಾಲ್ಕರ್ ವೃತ್ತಿಜೀವನದ ಟೈಮ್‌ಲೈನ್

1991-93: ಅಕೋಲ ಜಿಲ್ಲೆಯ ಹೆಚ್ಚುವರಿ ಸಿಎಸ್‌ಪಿ
1993-95: ಅಂದಿನ ರಾಜ್ಯಪಾಲರಿಗೆ ಹೆಚ್ಚುವರಿ ಸಹಾಯಕ ಆಯುಕ್ತ (ಅಡಿಸಿ)
1995-98: ವಾರ್ಧಾ ಮತ್ತು ಪರ್ಭನಿಯಲ್ಲಿ ಎಸ್‌ಪಿ
1998-2000: ನಾಶಿಕ್‌ನಲ್ಲಿ ಉಪ ಪೊಲೀಸ್ ಆಯುಕ್ತ
2000-03: ನಾಗಪುರ್‌ನಲ್ಲಿ ಸಿಐಡಿ ಎಸ್‌ಪಿ
2003-07: ಕಾಟನ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಯ ನಿರ್ದೇಶಕ
2007-10: ಪುಣೆ ಮತ್ತು ಥಾಣೆ ನಗರಗಳಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ)
2010-14: ಮುಂಬೈ ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ
2014-15: ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ
2015-16: ಮುಂಬೈನ ಭಯೋತ್ಪಾದನಾ ನಿಗ್ರಹ ದಳದ ಎಡಿಜಿಪಿ
2016-18: ಮುಂಬೈನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ
2018-21: ಥಾಣೆ ಪೊಲೀಸ್ ಆಯುಕ್ತ
2021-22: ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ಮತ್ತು ಕಲ್ಯಾಣ ನಿಗಮ ಸಂಸ್ಥೆಯ ನಿರ್ವಾಹಕ ನಿರ್ದೇಶಕ

 ವಿವೇಕ್ ವೃತ್ತಿಜೀವನದ ಹೈಲೈಟ್ಸ್

ವಿವೇಕ್ ವೃತ್ತಿಜೀವನದ ಹೈಲೈಟ್ಸ್

ವಿವೇಕ್ ಪಣಸಾಲ್ಕರ್ ಅವರ ಸುದೀರ್ಘ ವೃತ್ತಿಜೀವನದಲ್ಲಿ ದಕ್ಷ ಸೇವೆಗೆ ಹೆಸರಾದವರು. ಭಯೋತ್ಪಾದನೆ, ಭ್ರಷ್ಟಾಚಾರ ನಿಗ್ರಹ ಕಾರ್ಯಗಳಲ್ಲಿ ಅವರು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆನ್ನಲಾಗಿದೆ. ಮುಂಬೈನ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವಾಗ ಅವರು ರಸ್ತೆ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಥಾಣೆ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕುವಲ್ಲಿ ವಿವೇಕ್ ಪಾತ್ರ ಮಹತ್ವವಿತ್ತು.

ಉದ್ಯಮಿ ಮನ್‌ಸುಖ್ ಹಿರೇನ್ ಸಾವು ಪ್ರಕರಣದಲ್ಲಿ ಆಗ ಥಾಣೆ ಕಮಿಷನರ್ ಆಗಿ ವಿವೇಕ್ ಫಣಸಾಲ್ಕರ್ ಬಹಳ ಶ್ರಮ ವಹಿಸಿ ಸಾಕ್ಷ್ಯಾಧಾರಗಳನ್ನು ರಕ್ಷಿಸುವ ಕೆಲಸ ಮಾಡಿದ್ದರು. ಆಗ ದೇವೇಂದ್ರ ಫಡ್ನವಿಸ್ ಸಿಎಂ ಆಗಿದ್ದರು.

 ಏನಿದು ಮನಸುಖ್ ಹಿರೇನ್ ಪ್ರಕರಣ?

ಏನಿದು ಮನಸುಖ್ ಹಿರೇನ್ ಪ್ರಕರಣ?

ವರ್ಷದ ಹಿಂದಿನ ಈ ಘಟನೆ ನಿಮಗೆ ನೆನಪಿರಬಹುದು. ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಮುಂಬೈನ ಮನೆ ಎದುರು ಸ್ಫೋಟಕಗಳಿದ್ದ ವಾಹನವೊಂದನ್ನು ನಿಲ್ಲಿಸಲಾಗಿತ್ತು. ಅದು ದೇಶಾದ್ಯಂತ ದೊಡ್ಡ ಸುದ್ದಿಯಾಯಿತು. ಅದಾಗಿ ಕೆಲ ದಿನಗಳ ಬಳಿಕ ಯಾವುದೋ ಕಾಲುವೆಯೊಂದರಲ್ಲಿ ಉದ್ಯಮಿ ಮನಸುಖ್ ಹಿರೇನ್ ದೇಹ ಪತ್ತೆಯಾಗಿತ್ತು.

ಕುತೂಹಲವೆಂದರೆ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಆಗಿದ್ದ ಸಚಿನ್ ವಾಝೆ ಎಂಬಾತ ಸ್ಪೋಟಕಗಳಿದ್ದ ವಾಹನವನ್ನು ಅಂಬಾನಿ ಮನೆ ಬಳಿ ನಿಲ್ಲಿಸಿದ್ದು. ಈ ಪ್ರಕರಣವನ್ನು ತಾನೇ ಬಗೆಹರಿಸಿ ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಲು ಮತ್ತು ಅಂಬಾನಿ ಕುಟುಂಬದಿಂದ ಹೇರಳ ಹಣ ಪಡೆಯಲು ಸಚಿನ ವಾಝೆ ನಡೆಸಿದ್ದ ದೊಡ್ಡ ಪಿತೂರಿ ಇದು. ಯಾವಾಗ ಈ ಪ್ರಕರಣ ದೊಡ್ಡ ಸದ್ದು ಮಾಡಿ ಬೇರೆ ಬೇರೆ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಿದವೋ ತಾನು ಸಿಕ್ಕಿಬೀಳುವ ಭಯದಲ್ಲಿ ಸಚಿನ್ ವಾಝೆ ಈ ಘಟನೆಯನ್ನು ಮನಸುಖ್ ಹಿರೇನ್ ತಲೆಗೆ ಕಟ್ಟುವ ಪ್ರಯತ್ನ ಮಾಡಿದರು.

ಘಟನೆಯ ಹೊಣೆಯನ್ನು ಹೊರಲು ಮನಸುಖ್ ನಿರಾಕರಿಸಿದ್ದರು. ಇವರು ತನಿಖಾಧಿಕಾರಿಗಳ ಮುಂದೆ ಬಾಯಿಬಿಡಬಹುದು ಎಂದು ಎಣಿಸಿ ಸಚಿನ್ ವಾಝೆ ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಜೊತೆ ಸೇರಿ ಮನಸುಖ್ ಹಿರೇನ್‌ರನ್ನು ಥಾಣೆ ವ್ಯಾಪ್ತಿಯಲ್ಲಿ ಮುಗಿಸಿದರೆನ್ನಲಾಗಿದೆ.

ಈ ಪ್ರಕರಣವಾದಾಗ ವಿವೇಕ್ ಫಣಸಾಲ್ಕರ್ ಥಾಣೆಯ ಪೊಲೀಸ್ ಕಮಿಷನರ್ ಆಗಿದ್ದರು. ಸಾಕ್ಷ್ಯಾಧಾರಗಳು ನಾಶವಾಗದಂತೆ ಇವರು ಬಹಳ ಎಚ್ಚರ ವಹಿಸಿದ್ದರು.

 ಸಂಜಯ್ ಪಾಂಡೆ ಅವಧಿಯ ಹೈಲೈಟ್ಸ್

ಸಂಜಯ್ ಪಾಂಡೆ ಅವಧಿಯ ಹೈಲೈಟ್ಸ್

ಸಂಜಯ್ ಪಾಂಡೆ ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮುಂಬೈನ ಪೊಲೀಸ್ ಆಯುಕ್ತರಾಗಿದ್ದರು. ನಿವೃತ್ತಿಗೆ ನಾಲ್ಕು ತಿಂಗಳು ಇರುವಾಗ ಅವರನ್ನು ಠಾಕ್ರೆ ಸರಕಾರ ಮುಂಬೈ ಕಮಿಷನರ್ ಆಗಿ ಮಾಡಿದ್ದು ಕುತೂಹಲ ಮೂಡಿಸಿತ್ತು. ಅದಕ್ಕಿಂತ ಒಂದು ವರ್ಷ ಮುಂಚಿನಿಂದ ಅವರು ಮಹಾರಾಷ್ಟ್ರ ಡಿಜಿಪಿಯಾಗಿ ಕರ್ತವ್ಯ ತೋರಿದ್ದರು.

ಅವರ ಅಧಿಕಾರಾವಧಿಯಲ್ಲಿ ವಿಪಕ್ಷ ನಾಯಕರ ವಿರುದ್ಧ ಹಲವು ಪ್ರಕರಣಗಳು ದಾಖಲಾದವು. ಐಪಿಎಸ್ ಅಧಿಕಾರಿ ರಷ್ಮಿ ಶುಕ್ಲಾ ಫೋನ್ ಟ್ಯಾಪಿಂಗ್ ಪ್ರಕರಣ ನಡೆದದ್ದೂ ಅವರ ಅವಧಿಯಲ್ಲೇ. ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್, ಕೇಂದ್ರ ಸಚಿವ ನಾರಾಯಣ್ ರಾಣೆ ಮೊದಲಾದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.

(ಒನ್ಇಂಡಿಯಾ ಸುದ್ದಿ)

Recommended Video

      ಉದಯಪುರ್ ಟೈಲರ್ ಹತ್ಯೆ ನಂತರ ಕರ್ನಾಟಕದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+