'ನಿಮ್ಮಲ್ಲಿ ಬಾಳಾಸಾಹೇಬ್ ರಕ್ತ ಹರಿಯುತ್ತಿದ್ದರೆ... NDAಯಿಂದ ಹೊರಬನ್ನಿ!'
ಮುಂಬೈ, ಜನವರಿ 11: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲಿ ಎನ್ ಡಿಎ ಮಿತ್ರಪಕ್ಷವಾದ ಶಿವಸೇನೆ ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದೆ. ಆದರೆ ಮೈತ್ರಿಕೂಟದಿಂದ ಹೊರಬರುವ ಬಗ್ಗೆ ಮಾತ್ರ ತುಟಿಬಿಚ್ಚಿಲ್ಲ.
ಶಿವಸೇನೆಯ ಈ ನಡೆಯನ್ನು ಖಂಡಿಸಿದ ಮಹಾರಾಷ್ಟ್ರದ ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ಜಯಂತ್ ಪಾಟೀಲ್, 'ನಿಮ್ಮಲ್ಲಿ ದಿ.ಬಾಳಾ ಸಾಹೇಬ್ ಠಾಕ್ರೆ(ಶಿವಸೇನೆ ಸಂಸ್ಥಾಪಕ) ಅವರ ರಕ್ತ ಹರಿಯುತ್ತಿರುವುದೇ ನಿಜವಾದರೆ ಮೊದಲು ಎನ್ ಡಿಎ ಯಿಂದ ಹೊರಬನ್ನಿ ನೋಡೋಣ' ಎಂದು ಸವಾಲು ಹಾಕಿದ್ದಾರೆ.
ಮೈತ್ರಿ ಮಾಡಿಕೊಳ್ಳದಿದ್ರೆ ನೀವು ಪುಡಿ ಪುಡಿ: ಶಿವಸೇನಾಗೆ ಅಮಿತ್ ಶಾ ವಾರ್ನಿಂಗ್
ಶಿವಸೇನೆಯ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ ಎಚ್ಚರಿಯನ್ನೂ ಸ್ಮರಿಸಿದ ಅವರು, ಇಂಥ ಹೇಳಿಕೆ ನೀದಿದರೂ ನೀವೇಕೆ ಸುಮ್ಮನಿದ್ದೀರಿ, ಎನ್ ಡಿಎ ಯಿಂದ ಆಚೆ ಬನ್ನಿ ಎಂದಿದ್ದಾರೆ.
ಶಿವಸೇನೆ ಮತ್ತು ಬಿಜೆಪಿ ನಡುವಿನ ವಾಕ್ಸಮರ ಇದೀಗ ಬಹಿರಂಗವಾಗಿದ್ದು, ಉಭಯ ಪಕ್ಷದ ನಾಯಕರೂ ದಿನೇ ದಿನೇ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ.
ಬಾಳಾಸಾಹೇಬ್ ರಕ್ತ ಹರಿಯುತ್ತಿದ್ದರೆ...
"ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿಮ್ಮನ್ನು ಪುಡಿ ಪುಡಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದರೂ ನೀವು ಅವರೊಂದಿಗೇ ಗುರುತಿಸಿಕೊಳ್ಳುತ್ತಿದ್ದೀರಲ್ಲ! ನಿಮ್ಮ ದೇಹದಲ್ಲಿ ಬಾಳಾಸಾಹೇಬ್ ಅವರ ರಕ್ತ ಹರಿಯುತ್ತಿದ್ದರೆ ನಾಳೆ ಮಹಾರಾಷ್ಟ್ರ ಸಂಪುಟದಿಂದ ಹೊರಬನ್ನಿ ನೋಡೋಣ" ಎಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರಿಗೆ ಜಯಂತ್ ಪಾಟೀಲ್ ಸವಾಲೆಸೆದಿದ್ದಾರೆ.
ಪುಡಿ ಪುಡಿ ಮಾಡುತ್ತೇನೆ ಎಂದಿದ್ದ ಶಾ
"ಎನ್ ಡಿಎ ಮೈತ್ರಿ ಕೂಟದಲ್ಲಿ ಶಿವಸೇನೆ ಸೇರಿಕೊಳ್ಳದೆ, ಮೈತ್ರಿಕೂಟಕ್ಕೆ ಬೆಂಬಲ ನೀಡದೆ ಇದ್ದರೆ ಬಿಜೆಪಿಯು ಶಿವಸೇನೆಯನ್ನು ಪುಡಿಪುಡಿ ಮಾಡುತ್ತದೆ" ಎಂಬ ಎಚ್ಚರಿಕೆಯ ಹೇಳಿಕೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ನೀಡಿದ್ದರು. ಬಿಜೆಪಿ ಜೊತೆಗಿದ್ದರೆ ಶಿವಸೇನೆಗೂ ಲಾಭ. ಆಗ ಅವರಿಗೆ ಗೆಲುವು ಸಿಗುವುದು ಖಚಿತ ಎಂದು ಸಹ ತಮ್ಮ ಮಾತಿಗೆ ಸಮಜಾಯಿಷಿ ಕೊಟ್ಟಿದ್ದರು ಅಮಿತ್ ಶಾ.
ಬಿಜೆಪಿಯನ್ನು ಹೂತುಹಾಕುತ್ತೇವೆ ಎಂದಿದ್ದ ಶಿವಸೇನೆ ನಾಯಕ!
ಅಮಿತ್ ಶಾ ಅವರ ಪುಡಿ ಪುಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಶಿವಸೇನೆ ಮುಖಂಡ ರಾಮದಾಸ್ ಖದಮ್, "ಅವರು(ಬಿಜೆಪಿ) ಈಗಾಗಲೇ ಐದು ರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಈಗ ಮಹಾರಾಷ್ಟ್ರಕ್ಕೆ ಬಂದು ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಬೇಡಿ. ನಾವು ನಿಮ್ಮನ್ನು ಹೂತುಹಾಕುತ್ತೇವೆ. ನಾವು ಮೋದಿ ಅಲೆ ಇಲ್ಲದೆಯೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 63(228) ಸ್ಥಾನಗಳನ್ನು ಗೆದ್ದಿದ್ದೇವೆ ಎಂಬುದನ್ನು ಮರೆಯದಿರಿ" ಎಂಬ ಹೇಳಿಕೆ ನೀದಿದ್ದರು.
ಮನಮೋಹನ್ ರನ್ನು ಹೊಗಳಿದ್ದ ಶಿವಸೇನೆ!
"Accidential Prime Minister' ಚಿತ್ರದ ಕುರಿತು ಎದ್ದಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯೆ ನೀದುತ್ತಿದ್ದ ಸಮಯದಲ್ಲಿ ಶಿವಸೇನಾ ಮುಖಂಡ ಸಂಜಯ್ ರಾವತ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಕಸ್ಮಿಕ ಪ್ರಧಾನಿಯಲ್ಲ, ಅವರೊಬ್ಬ ಯಶಸ್ವೀ ಪ್ರಧಾನಿ. ದೇಶವನ್ನು ಒಬ್ಬ ಪ್ರಧಾನಿ ಹತ್ತು ವರ್ಷಗಳ ಕಾಲ ಆಳಿದ್ದಾರೆ ಮತ್ತು ಜನರು ಅವರಿಗೆ ಗೌರವ ನೀಡುತ್ತಾರೆ ಎಂದರೆ ಅವರನ್ನು ಆಕಸ್ಮಿಕ ಪ್ರಧಾನಿ ಎನ್ನುವುದಕ್ಕೆ ಹೇಗೆ ಸಾಧ್ಯ? ನರಸಿಂಹ ರಾವ್ ಅವರ ನಂತರ ಈ ದೇಶ ಕಂಡ ಅತ್ಯಂತ ಯಶಸ್ವೀ ಪ್ರಧಾನಿ ಮನಮೋಹನ್ ಸಿಂಗ್" ಎಂದು ಮನಮೋಹನ್ ಸಿಂಗ್ ಅವರ ಗುಣಗಾನ ಮಾಡಿ, ಬಿಜೆಪಿಗೆ ಕಸಿವಿಸಿ ಉಂಟು ಮಾಡಿದ್ದರು.