ಬಿಜೆಪಿ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ: ಫಡ್ನವೀಸ್ ಡಿಸಿಎಂ ಅವಧಿ ಕೆಲವೇ ತಿಂಗಳು?
ಮುಂಬೈ, ಜುಲೈ 1: ಕಳೆದ ಕೆಲವು ದಿನಗಳಿಂದ ಹಲವು ಟ್ವಿಸ್ಟ್ ಪಡೆದುಕೊಂಡ ಮಹಾರಾಷ್ಟ್ರದ ರಾಜಕೀಯ ಗುರುವಾರ (ಜೂನ್ 30) ಮಹಾ ತಿರುವಿನೊಂದಿಗೆ ಮುಕ್ತಾಯಗೊಂಡಿದೆ. ಇನ್ನೆರಡ್ಮೂರು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಸೂಚಿಸುವ ಸಾಧ್ಯತೆಯಿದೆ.
ಯಾರೂ ಊಹಿಸದ ರೀತಿಯಲ್ಲಿ ಮತ್ತೊಮ್ಮೆ ಅಚ್ಚರಿಯ ನಡೆಯಿಟ್ಟಿರುವ ಅಮಿತ್ ಶಾ ಮತ್ತು ಜೆ. ಪಿ. ನಡ್ಡಾ ತಮ್ಮದೇನಿದ್ದರೂ ಬೇರೆಯೇ ರಾಜಕೀಯ ಸಮೀಕರಣ ಎಂದು ಸಾರಿದ್ದಾರೆ. ಖುದ್ದು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಏಕನಾಥ್ ಶಿಂಧೆಗೂ ಬಿಜೆಪಿ ವರಿಷ್ಠರ ನಿರ್ಧಾರ ಕೆಲವೇ ಕೆಲವು ಗಂಟೆಯ ಮುನ್ನ ತಿಳಿದಿದ್ದು.
ಠಾಕ್ರೆ ನಿರ್ಧಾರ ರದ್ದು; ಸಿಎಂ ಆದ ಬಳಿಕ ಶಿಂಧೆ ಕೈಗೊಂಡ ಮೊದಲ ಹೆಜ್ಜೆ ಇದು
ಮಹಾರಾಷ್ಟ್ರದಲ್ಲಿ ಮತ್ತೆ ಎನ್ಡಿಎ ಮೈತ್ರಿಕೂಟದ ಸರಕಾರ ಬಂತೆಂದರೆ ಅದರ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ದೇವೇಂದ್ರ ಫಡ್ನವೀಸ್ ಪರಿಶ್ರಮ ಬಹಳಾನೇ ಇದೆ. ಆದರೆ, ಯಾವ ರಾಜಕೀಯ ದೂರಾಲೋಚನೆಯನ್ನು ಇಟ್ಟುಕೊಂಡು ಅವರು ಇಷ್ಟು ಪ್ರಯತ್ನ ಪಟ್ಟರೋ ಅದು ಕೈಗೂಡಲಿಲ್ಲ ಎನ್ನುವುದು ಸತ್ಯ.
"ನಾನು ಸರಕಾರದ ಭಾಗವಾಗಿ ಇರುವುದಿಲ್ಲ" ಎಂದು ಹೇಳಿದ್ದ ದೇವೇಂದ್ರ ಫಡ್ನವೀಸ್, ಸಾಯಂಕಾಲದ ಹೊತ್ತಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ರಾಜ್ಯದ ಬಿಜೆಪಿ ಪಡಸಾಲೆಯಲ್ಲಿನ ಚರ್ಚೆಯ ವಿಷಯವೆಂದರೆ ಫಡ್ನವೀಸ್ ಕೆಲವು ತಿಂಗಳಷ್ಟೇ ಡಿಸಿಎಂ ಆಗಿರುತ್ತಾರೆ ಎಂದು.
ಜುಲೈ 4ರಂದು ಏಕನಾಥ್ ಶಿಂಧೆಗೆ ವಿಶ್ವಾಸಮತ ಪರೀಕ್ಷೆ; ಭಿನ್ನಮತೀಯರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ ಬಣ
ಬಿಜೆಪಿಯ ವರಿಷ್ಠರು ಸಿಎಂ ಮಾಡುತ್ತಾರೆ ಎನ್ನುವ ಸೂಚನೆಯಿರಲಿಲ್ಲ
ಗುವಹಾಟಿಯಿಂದ ಗೋವಾ ಅಲ್ಲಿಂದ ಮುಂಬೈಗೆ ಬಂದು ಇಳಿಯುವವರೆಗೂ ಏಕನಾಥ್ ಶಿಂಧೆಗೆ ತಮ್ಮನ್ನೇ ಬಿಜೆಪಿಯ ವರಿಷ್ಠರು ಸಿಎಂ ಮಾಡುತ್ತಾರೆ ಎನ್ನುವ ಸೂಚನೆಯಿರಲಿಲ್ಲ. ಇದೇ ರೀತಿ, ಫಡ್ನವೀಸ್ ಅವರೂ ನಾನೇ ಸಿಎಂ ಎನ್ನುವ ಲೆಕ್ಕಾಚಾರದಲ್ಲಿದ್ದರು. ಅತ್ಯಂತ ಗೌಪ್ಯವಾಗಿ ರಾಜಕೀಯ ಹೆಜ್ಜೆಯನ್ನು ಇಟ್ಟಿದ್ದ ಅಮಿತ್ ಶಾ ಮತ್ತು ಜೆ. ಪಿ. ನಡ್ಡಾ ಯಾರು ಸಿಎಂ/ ಡಿಸಿಎಂ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ವರಿಷ್ಠರ ನಡೆಯ ಬಗ್ಗೆ ಫಡ್ನವೀಸ್ ಅವರಿಗೆ ಅಸಮಾಧಾನವಿದ್ದರೂ ಅವರನ್ನು ಶಾಂತಗೊಳಿಸುವಲ್ಲಿ ನಡ್ಡಾ ಯಶಸ್ವಿಯಾದರು.
ಬಿಜೆಪಿಗೆ ಅಧಿಕಾರದ ದಾಹವಿಲ್ಲ ಎನ್ನುವುದು
ಈಗ ಫಡ್ನವೀಸ್ ಅವರನ್ನು ಸಿಎಂ ಮಾಡದೇ ಇರುವುದಕ್ಕೆ ಹಲವು ಕಾರಣಗಳಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಅದರಲ್ಲಿ ಒಂದು ಬಿಜೆಪಿಗೆ ಅಧಿಕಾರದ ದಾಹವಿಲ್ಲ ಎನ್ನುವುದು. ನಮ್ಮ ಮತ್ತು ಏಕನಾಥ್ ಶಿಂಧೆ ಬಣದ ಶಿವಸೇನೆ ನಡುವೆ ಹಿಂದೂ ಸಿದ್ದಾಂತ ತಾಳೆ ಹೊಂದುತ್ತಿರುವುದರಿಂದ, ಸಂಖ್ಯಾಬಲ ನಮಗೆ ಹೆಚ್ಚಿದ್ದರೂ, ನಮಗೆ ಸಿಎಂ ಪಟ್ಟ ಬೇಡ ಎನ್ನುವ ಮೂಲಕ, ಒಂದು ನಿರ್ಧಾರದ ಹಿಂದೆ ಹಲವು ಗುರಿಯನ್ನು ಬಿಜೆಪಿಯ ವರಿಷ್ಠರು ಇಟ್ಟುಕೊಂಡ ಹಾಗೇ ಅವಲೋಕಿಸಲಾಗುತ್ತಿದೆ.
ಫಡ್ನವೀಸ್ ಬೆಂಬಲಿಗರನ್ನು ಸಮಾಧಾನ ಪಡಿಸುವ ಕಾರ್ಯತಂತ್ರ
ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತೆಂದರೆ ಫಡ್ನವೀಸ್ ಅವರನ್ನು ಡಿಸಿಎಂ ಆಗಿ ಮಾಡಿರುವುದು ತಾತ್ಕಾಲಿಕ ನಡೆ. ಅವರನ್ನು ಕೇಂದ್ರಕ್ಕೆ ಕರೆಸಿಕೊಂಡು ಪ್ರಭಾವೀ ಸಚಿವ ಸ್ಥಾನ ನೀಡುವುದು ವರಿಷ್ಠರ ಮುಂದಿನ ಹೆಜ್ಜೆ ಎನ್ನುವುದು ಬಿಜೆಪಿಯಲ್ಲಿನ ಚರ್ಚೆಯ ವಿಷಯವಾಗಿದೆ. ಆ ಮೂಲಕ, ಕೇಂದ್ರ ಸಚಿವ ಸಂಪುಟವನ್ನೂ ಬಲಗೊಳಿಸುವುದು ಮತ್ತು ಫಡ್ನವೀಸ್ ಬೆಂಬಲಿಗರನ್ನು ಸಮಾಧಾನ ಪಡಿಸುವ ಕಾರ್ಯತಂತ್ರವನ್ನು ಬಿಜೆಪಿ ವರಿಷ್ಠರು ಹಣೆಯಲು ಹೊರಟಿದ್ದಾರೆ ಎಂದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ವರಿಷ್ಠರ ಮನವೊಲಿಕೆಯ ನಂತರ ಡಿಸಿಎಂ ಆಗಿ ಅಧಿಕಾರ
ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ವರಿಷ್ಠರಿಂದ ಸೂಚನೆ ಬಂದಾಗ ದೇವೇಂದ್ರ ಫಡ್ನವೀಸ್ ಅಸಮಾಧಾನ ಗೊಂಡಿದ್ದರು. ಇದಾದ ನಂತರ ವರಿಷ್ಠರ ಮನವೊಲಿಕೆಯ ನಂತರ ಡಿಸಿಎಂ ಆಗಿ ಅಧಿಕಾರ ತೆಗೆದುಕೊಂಡರು. ರಾಜ್ಯದಲ್ಲಿ 48 ಲೋಕಸಭಾ ಕ್ಷೇತ್ರವಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ, ಶಿವಸೇನೆಯ ಬೆಂಬಲವೂ ಬಿಜೆಪಿಗೆ ಅವಶ್ಯಕ. ಜೊತೆಗೆ, ಪ್ರಭಾವೀ ನಾಯಕರಾಗಿರುವ ಫಡ್ನವೀಸ್ ಅವರನ್ನೂ ಸಮಾಧಾನ ಪಡಿಸಬೇಕು. ಹಾಗಾಗಿ, ಬಿಜೆಪಿ ಹೈಕಮಾಂಡ್ ಫಡ್ನವೀಸ್ ಅವರನ್ನು ಕೇಂದ್ರದ ಸೇವೆಗೆ ಕರೆಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
Recommended Video