ನಿರ್ಣಾಯಕ ಘಟ್ಟದಲ್ಲಿ ಮಹಾರಾಷ್ಟ್ರ ಸರಕಾರ ರಚನೆ: ಶರದ್ ಪವಾರ್ ಆಡಿದ್ದೇ 'ಪವರ್ ಪ್ಲೇ'
ಚುಟುಕು ಕ್ರಿಕೆಟಿನಲ್ಲಿ 'ಪವರ್ ಪ್ಲೇ' ವೇಳೆ ಆಡಿದ್ದೇ ಆಟ. ಮಹಾರಾಷ್ಟ್ರದಲ್ಲಿ ಯಾವ ಮೈತ್ರಿಕೂಟಕ್ಕೂ ಬಹುಮತ ಸಿಗದ ಈ ಹೊತ್ತಿನಲ್ಲಿ ಎನ್ಸಿಪಿ ಮುಖಂಡ ಶರದ್ ಪವಾರ್ ಆಡಿದ್ದೇ 'ಪವರ್ ಪ್ಲೇ'.
ಎಐಸಿಸಿ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಶರದ್ ಪವಾರ್ ನಡುವೆ, ಸೋಮವಾರ (ನ 4) ನಡೆಯಲಿರುವ ಸಭೆಯಲ್ಲಿ, ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಮುಂದಿನ ಹೆಜ್ಜೆಯ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಬಹುದು.
"ದುರಂಹಕಾರ ಎನ್ನುವ ಕೆಸರಿನಿಂದ ಕಮಲ ಹೊರಬರಬೇಕಿದೆ" ಎನ್ನುವ ಶಿವಸೇನೆ ಮುಖಂಡರೊಬ್ಬರ ಹೇಳಿಕೆ, ಬಿಜೆಪಿ-ಶಿವಸೇನೆ ನಡುವಿನ ಚುನಾವಣಾಪೂರ್ವ ಮೈತ್ರಿಕೂಟದ ಪರಿಕಲ್ಪನೆಯನ್ನೇ ನಗೇಪಾಟಲಿಗೆ ಗುರಿಮಾಡಿದೆ.
ಸದ್ಯದ ಮಟ್ಟಿಗೆ, ಬಿಜೆಪಿಯವರಿಂದ 'ರಾಜಕೀಯ ಚಾಣಕ್ಯ' ಎಂದೇ ಕರೆಯಲ್ಪಡುವ ಅಮಿತ್ ಶಾ, ಮಹಾರಾಷ್ಟ್ರದ ಬಿಕ್ಕಟ್ಟನ್ನು ತಾರ್ಕಿಕ ಅಂತ್ಯ ಕೊಂಡೊಯ್ಯಲು ವಿಫಲರಾಗುತ್ತಿದ್ದಾರೆ. ಹಾಗಾಗಿ, ಶರದ್ ಪವಾರ್ ಅವರತ್ತ, ಎಲ್ಲರ ಚಿತ್ತ ನೆಟ್ಟಿದೆ. ಮುಂದಿನ ಸಾಧ್ಯಾಸಾಧ್ಯತೆಗಳು:

ಸಂಜಯ್ ರಾವತ್ ಹೇಳಿಕೆ
"ಬಿಕ್ಕಟ್ಟು ಹಾಗೇ ಮುಂದುವರಿದಿದೆ. ಸರ್ಕಾರ ರಚನೆ ಬಗ್ಗೆ ಈ ವರೆಗೆ ಯಾವುದೇ ಮಾತುಕತೆ ನಡೆದಿಲ್ಲ. ಒಂದು ವೇಳೆ ಮಾತುಕತೆ ನಡೆದರೆ ಅದು ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತ್ರ. ನಮ್ಮ ಕಡೆಯಿಂದ ಯಾವುದೇ ಸಮನ್ವಯದ ಕೊರತೆ ಇಲ್ಲ. ಶಿವಸೇನೆಗೆ 170 ಶಾಸಕರ ಬೆಂಬಲವಿದೆ. ನಮ್ಮ ಪಕ್ಷಕ್ಕೆ ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರ ರಚಿಸುವ ಸಾಮರ್ಥ್ಯ ಇದೆ" ಎಂದು ಪಕ್ಷದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. (ಚಿತ್ರದಲ್ಲಿ ಸಂಜಯ್ ರಾವತ್)

ಎನ್ಸಿಪಿ ಮುಖಂಡ ಅಜಿತ್ ಪವಾರ್
ಎನ್ಸಿಪಿ ಮುಖಂಡ ಅಜಿತ್ ಪವಾರ್ ಅವರನ್ನು ಶಿವಸೇನೆ ಸಂಪರ್ಕಿಸಿದೆ. ಈ ವಿಚಾರವನ್ನು ಸ್ವತಃ ಅಜಿತ್ ಪವಾರ್ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. "ನಮಗೆ ವಿರೋಧ ಪಕ್ಷದಲ್ಲಿ ಕೂರಲು ಮತದಾರ ಮ್ಯಾನ್ಡೇಟ್ ಕೊಟ್ಟಿರುವುದು" ಎಂದು ಶರದ್ ಪವಾರ ಹೇಳಿದ್ದರೂ, ಆಫ್ ದಿ ರೆಕಾರ್ಡ್ ಶಿವಸೇನೆ - ಎನ್ಸಿಪಿ ನಡುವೆ, ಸರಕಾರ ರಚಿಸುವ ಸಂಬಂಧ ಹಲವು ಸುತ್ತಿನ ಮಾತುಕತೆ ಮುಗಿದಿದೆ. (ಚಿತ್ರದಲ್ಲಿ ಅಜಿತ್ ಪವಾರ್)

ಮಹಾರಾಷ್ಟ್ರ ಅಸೆಂಬ್ಲಿ
ಬಿಜೆಪಿ 105, ಶಿವಸೇನೆ, 56, ಎನ್ಸಿಪಿ 54, ಕಾಂಗ್ರೆಸ್ 44 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಸರಳ ಬಹುಮತಕ್ಕೆ ಬೇಕಾಗಿರುವುದು. ಇಲ್ಲಿ, ಶಿವಸೇನೆಗೆ ಬರೀ ಎನ್ಸಿಪಿ ಬೆಂಬಲ ನೀಡಿದರೆ ಸಾಲುವುದಿಲ್ಲ. ಕಾಂಗ್ರೆಸ್ ಮತ್ತು ಪಕ್ಷೇತರರರ ಬೆಂಬವಿಲ್ಲದಿದ್ದರೆ, ಸರಕಾರ ರಚಿಸಲು ಶಿವಸೇನೆಗೆ ಸಾಧ್ಯವಾಗುವುದಿಲ್ಲ. ಶಿವಸೇನೆ ಹೇಳಿಕೊಳ್ಳುತ್ತಿರುವಂತೆ 170 ಶಾಸಕರ ಬೆಂಬಲವಿದೆ ಎಂದಾದರೆ, ಅದು ಶಿವಸೇನೆ + ಕಾಂಗ್ರೆಸ್ + ಎನ್ಸಿಪಿ + ಕೆಲವು ಪಕ್ಷೇತರರು.

ಮಹಾರಾಷ್ಟ್ರ ಕಾಂಗ್ರೆಸ್ ಘಟಕದಲ್ಲೇ ವಿರೋಧ
ಇಡೀ ಮಹಾರಾಷ್ಟ್ರದ ವಿದ್ಯಮಾನವನ್ನು ಇತ್ತೀಚೆಗೆ ಗಮನಿಸುವುದಾದರೆ, ಕಾಂಗ್ರೆಸ್ ನಲ್ಲಿ ಇರುವ ಗೊಂದಲ. ಎನ್ಸಿಪಿ ಜೊತೆ ಸೇರಿ, ಶಿವಸೇನೆಗೆ ಬೆಂಬಲ ನೀಡಲು, ಮಹಾರಾಷ್ಟ್ರ ಕಾಂಗ್ರೆಸ್ ಘಟಕದಲ್ಲೇ ವಿರೋಧವಿದೆ. ಯಾವ ಕಾರಣಕ್ಕೂ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎನ್ನುವ ಒತ್ತಡ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.

ಶರದ್ ಪವಾರ್ - ಸೋನಿಯಾ ಗಾಂಧಿ ಭೇಟಿ
"ನವೆಂಬರ್ ಎಂಟನೇ ತಾರೀಕಿಗೆ ಮಹಾರಾಷ್ಟ್ರ ಸರ್ಕಾರದ ಈಗಿನ ಅವಧಿ ಮುಕ್ತಾಯವಾಗುತ್ತದೆ. ನವೆಂಬರ್ ಏಳನೇ ತಾರೀಕಿಗೂ ಮುಂಚೆ ಸರ್ಕಾರ ರಚನೆ ಆಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು" ಎಂದು ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ. ಇದಕ್ಕೆ "ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ" ಎಂದು ಶಿವಸೇನೆ ಪ್ರತಿಕ್ರಿಯೆ ನೀಡಿದೆ. ಸದ್ಯದ ಮಟ್ಟಿಗೆ ಶರದ್ ಪವಾರ್ 'ಕಿಂಗ್ ಮೇಕರ್' ಆಗುವ ಸಾಧ್ಯತೆಯಿದೆ.












Click it and Unblock the Notifications