ಮುಂಬೈಗೆ ಹೋಗುವ ಮುನ್ನ ಓದಿ; ಸರ್ಕಾರದಿಂದ ಹೊಸ ಮಾರ್ಗಸೂಚಿ
ಮುಂಬೈ, ಮೇ 25 : ಮಹಾರಾಷ್ಟ್ರ ರಾಜ್ಯ ಕೊರೊನಾ ಹಾಟ್ ಸ್ಪಾಟ್. ಅದರಲ್ಲೂ ಮುಂಬೈ ನಗರದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ ಸರ್ಕಾರ ಮುಂಬೈಗೆ ಭೇಟಿ ನೀಡುವ ಜನರಿಗೆ ಹಲವು ಷರತ್ತು ಹಾಕಿದೆ.
ಸೋಮವಾರದಿಂದ ದೇಶಿಯ ವಿಮಾನ ಸೇವೆ ಆರಂಭವಾಗಿದೆ. ಜೂನ್ 1ರಿಂದ ರೈಲು ಸಂಚಾರ ಆರಂಭವಾಗುತ್ತಿದೆ. ಆದ್ದರಿಂದ, ಮಹಾರಾಷ್ಟ್ರ ಸರ್ಕಾರ ಮುಂಬೈಗೆ ಭೇಟಿ ನೀಡಲು ಮಾರ್ಗಸೂಚಿ ರಚನೆ ಮಾಡಿದೆ.
ಮುಂಬೈ ನಗರಕ್ಕೆ 25 ವಿಮಾನಗಳು ಆಗಮಿಸಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ನಗರಕ್ಕೆ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡಿರಬೇಕು ಎಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ಇದುವರೆಗೂ 52,667 ಕೊರೊನಾ ಪ್ರಕರಣಗಳು ದಾಖಲಾಗಿವೆ. 1695 ಜನರು ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ 30,542 ಪ್ರಕರಣ ದಾಖಲಾಗಿದೆ. 988 ಸೋಂಕಿತರು ಮೃತಪಟ್ಟಿದ್ದಾರೆ.

ಆರೋಗ್ಯ ಸೇತು ಕಡ್ಡಾಯ
* ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಹೊಂದಿರಬೇಕು.
* ಪ್ರಯಾಣಿಕರು ಯಾವುದೇ ಕಂಟೈನ್ಮೆಂಟ್ ಝೋನ್ನಿಂದ ಬಂದಿರಬಾರದು. ಕೋವಿಡ್ - 19 ಸೋಂಕಿನ ಯಾವುದೇ ಲಕ್ಷಣ ಇರಬಾರದು.
* ಕಳೆದ ಎರಡು ತಿಂಗಳಿನಿಂದ ಕೊರೊನಾ ಸೋಂಕು ಬಂದಿರಬಾರದು ಮತ್ತು ಎಲ್ಲೂ ಕ್ವಾರಂಟೈನ್ಗೆ ಒಳಗಾಗಿರಬಾರದು.

ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ
* ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡದ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
* ವಿಮಾನ ಮತ್ತು ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಎಲ್ಲಾ ಸಿಬ್ಬಂದಿ, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸ್ ನಿಯಮ ಪಾಲನೆ ಮಾಡಬೇಕು.

ಹೋಂ ಐಸೋಲೇಷನ್
* ವಿಮಾನ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರ ಎಡಗೈಗೆ ಸೀಲ್ ಹಾಕಲಾಗುತ್ತದೆ. 14 ದಿನ ಹೋಂ ಐಸೋಲೇಷನ್ನಲ್ಲಿ ಇರಬೇಕು.
* ತುರ್ತು ಕೆಲಸಗಳು ಇದ್ದರೆ ಐಸೋಲೇಷನ್ನಿಂದ ವಿನಾಯಿತಿ ನೀಡುವ ಕುರಿತು ಸ್ಥಳೀಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ.
* ಒಂದು ವಾರಕ್ಕಿಂತ ಕಡಿಮೆ ಅವಧಿಯ ಕೆಲಸಕ್ಕೆ ಬರುವ ಜನರಿಗೆ ಹೋಂ ಐಸೋಲೇಷನ್ನಿಂದ ವಿನಾಯಿತಿ ಇದೆ.

ಜನರ ಪ್ರವೇಶಕ್ಕೆ ಅವಕಾಶವಿಲ್ಲ
* ಮುಂಬೈ, ರಾಜ್ಯಕ್ಕೆ ಬಂದ ಜನರಿಗೆ ಕಂಟೈನ್ಮೆಂಟ್ ಝೋನ್ ಅಥವ ಹಾಟ್ ಸ್ಪಾಟ್ಗಳ ಪ್ರವೇಶಕ್ಕೆ ಅನುಮತಿ ಇಲ್ಲ.
* ಪ್ರಯಾಣಿಕರು ಯಾವ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
* ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತಮ್ಮ ಖಾಸಗಿ ವಾಹನದಲ್ಲಿಯೇ ಸಂಚಾರ ನಡೆಸಬೇಕು.












Click it and Unblock the Notifications