ಅನಿಲ್ ದೇಶ್ಮುಖ್ ವಿರುದ್ಧ ತನಿಖೆ: ಸುಪ್ರೀಂಕೋರ್ಟ್ಗೆ ಪರಮ್ಬೀರ್ ಅರ್ಜಿ
ಮುಂಬೈ, ಮಾರ್ಚ್ 22: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ತಾವು ಮಾಡಿರುವ ಆರೋಪಗಳ ತನಿಖೆ ನಡೆಸುವಂತೆ ಕೋರಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ವರ್ಗಾವಣೆ ಮತ್ತು ನೇಮಕಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಶ್ಮಿ ಶುಕ್ಲಾ ಸಲ್ಲಿಸಿರುವ ಅರ್ಜಿಯನ್ನು ವರದಿ ಕುರಿತು ಸಿಬಿಐ ತನಿಖೆ ನಡೆಸುವಂತೆಯೂ ಪರಮ್ ಬೀರ್ ಸಿಂಗ್ ಮನವಿ ಮಾಡಿದ್ದಾರೆ. ಜತೆಗೆ, ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಅನಿಲ್ ದೇಶ್ಮುಖ್ ಅವರ ನಿವಾಸದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ಭ್ರಷ್ಟಾಚಾರ ಆರೋಪ: ಅನಿಲ್ ದೇಶಮುಖ್ ಬೆಂಬಲಕ್ಕೆ ನಿಂತ ಶರದ್ ಪವಾರ್
ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ನಿಗದಿಯಾದ ಬಳಿಕ ಪರಮ್ ಬೀರ್ ಸಿಂಗ್ ಅವರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ. ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿರುವುದಕ್ಕೆ ತಡೆ ನೀಡುವಂತೆ ಕೂಡ ಅವರು ಮನವಿ ಮಾಡಿದ್ದಾರೆ. ಈ ನಡುವೆ ಅವರು ಮುಂಬೈನ ಗೃಹರಕ್ಷಣ ವಿಭಾಗದಲ್ಲಿ ಡಿಜಿಯಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ ನಿವಾಸದ ಮುಂದೆ ಜಿಲೆಟಿನ್ ಸ್ಫೋಟಕ ಮತ್ತು ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ಪ್ರಕರಣದಲ್ಲಿ ಎನ್ಐಎ ತನಿಖೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಬಂಧಿಸಿತ್ತು. ಇದರ ನಡುವೆಯೇ ಪರಮ್ ಬೀರ್ ಸಿಂಗ್ ವರ್ಗಾವಣೆ ಭಾರಿ ಚರ್ಚೆ ಹುಟ್ಟುಹಾಕಿದೆ.