ಮುಂಬೈಗೆ ಕಾಲಿಡದಂತೆ ಆನೆಗಳಿಗೆ ನಿಷೇಧ!
ಮುಂಬೈ, ನ.4 : ಆನೆ ನಡೆದಿದ್ದೇ ಹಾದಿ ಎಂಬ ಮಾತನ್ನು ಮಹಾರಾಷ್ಟ್ರ ಸರ್ಕಾರ ಸುಳ್ಳು ಮಾಡಿದೆ. ಮುಂಬೈ ನಗರಕ್ಕೆ ಆನೆಗಳು ಇನ್ನೂ ಕಾಲಿಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದ್ದರಿಂದ ಮುಂಬೈ, ಠಾಣೆ ನಗರಗಳ ಜನರು ಆನೆಗಳನ್ನು ನೋಡಲು ಪರಸ್ಥಳಕ್ಕೆ ತೆರಳುವುದು ಅನಿವಾರ್ಯವಾಗಿದೆ. ಎರಡು ನಗರಗಳಲ್ಲಿ ಆನೆಗಳ ಪ್ರವೇಶಕ್ಕೆ ನಿಷೇಧ ಹೇರಿ ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ವನ್ಯಜೀವಿಗಳ ರಕ್ಷಣಾ ಕಾಯ್ದೆ ಅನ್ವಯ ಆನೆಗಳನ್ನು ಯಾವುದೇ ಖಾಸಗೀ ಕಾರ್ಯಕ್ರಮಕ್ಕೆ ಬಳಸುವುದು ದಂಡಾರ್ಹ ಅಪರಾಧವಾಗಿದೆ. ಇದರ ಹೊರತಾಗಿಯೂ ಮಾವುತರು ಭಿಕ್ಷೆ ಬೇಡಲು, ಮಕ್ಕಳಿಗೆ ಮನರಂಜನೆ ಒದಗಿಸಲು, ವಿವಾಹ ಕಾರ್ಯಕ್ರಮಗಳಲ್ಲಿ ಆಮಂತ್ರಿತರಿಗೆ ಮೋಜು ಒದಗಿಸಲು, ದೇವಾಲಯದ ಕಾರ್ಯಕ್ರಮಗಳಲ್ಲಿ ಬಳಸುತ್ತಿದ್ದಾರೆ.

ಮುಂಬೈ, ಠಾಣೆ ಮುಂತಾದ ನಗರಗಳಲ್ಲಿ ರಾಜಕೀಯ ಸಮಾವೇಶಗಳು, ಧಾರಾವಾಹಿ, ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಆನೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಸದ್ಯ ಇದಕ್ಕೆ ನಿಷೇಧ ಹೇರಿರುವ ಮಹಾರಾಷ್ಟ್ರ ಅರಣ್ಯ ಇಲಾಖೆ, ಮುಂಬೈ ಮತ್ತು ಠಾಣೆ ನಗರಗಳಿಗೆ ಆನೆಗಳ ಪ್ರವೇಶವನ್ನು ನಿರಾಕರಿಸಿದೆ. ಇದರಿಂದ ಇಲ್ಲಿನ ಜನರು ಆನೆಗಳನ್ನು ನೋಡಲು ಬೇರೆ ನಗರಗಳಿಗೆ ಹೋಗಬೇಕಾಗುತ್ತದೆ.
ನಿಷೇಧವೇಕೆ : ಮುಂಬೈ ಮತ್ತು ಠಾಣೆ ನಗರಗಳಲ್ಲಿ ಜನಸಂದಣಿ ಹೆಚ್ಚು, ನಗರಕ್ಕೆ ಬರುವ ಆನೆಗಳು ಶಬ್ದಕ್ಕೆ ಬೆದರಿ ನಗರದಲ್ಲಿ ದಾಂಧಲೆ ಎಬ್ಬಿಸಿದರೆ ನೂರಾರು ಜನರು ದಾಳಿಗೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ನಗರಗಳಲ್ಲಿ ಆನೆಗಳ ಪ್ರವೇಶಕ್ಕೆ ನಿಷೇಧ ಹೇರಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಮುಂಬೈಯಂತಹ ಮಹಾನಗರದಲ್ಲಿ ಆನೆಗಳಿಗೆ ಅಗತ್ಯವಾದಷ್ಟು ಆಹಾರ ಪೂರೈಕೆ ಅಸಾಧ್ಯ. ಆದ್ದರಿಂದ ಆನೆಗಳು ದಯನೀಯ ಸ್ಥಿತಿ ತಲುಪಿವೆ. ಆದ್ದರಿಂದ ನಗರಕ್ಕೆ ಆನೆಗಳ ಪ್ರವೇಶಕ್ಕೆ ನಿಷೇಧ ಹೇರಬೇಕೆಂದು ಪ್ರಾಣಿದಯಾ ಸಂಘಟನೆಗಳು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಿದ್ದವು. ಒತ್ತಾಯಕ್ಕೆ ಮಣಿದಿರುವ ಮಹಾರಾಷ್ಟ್ರದ ಅರಣ್ಯ ಇಲಾಖೆ, ಮುಂಬೈ, ಠಾಣೆಯಂತಹ ಮಹಾನಗರಗಳಿಗೆ ಆನೆಗಳು ಪ್ರವೇಶಿಸುವಂತಿಲ್ಲ ಎಂದು ಹೇಳಿದೆ.











Click it and Unblock the Notifications