ಮುಂಬೈ ಪೊಲೀಸರನ್ನು ನಂಬಲ್ಲ, ದೆಹಲಿಗೆ ಕಳಿಸಿ: ಛೋಟಾರಾಜನ್
ಮುಂಬೈ, ನ.03: ಭೂಗತ ಪಾತಕಿ ಛೋಟಾರಾಜನ್ ನನ್ನು ಇಂಡೋನೇಷಿಯಾದಿಂದ ಭಾರತಕ್ಕೆ ಮಂಗಳವಾರವೇ ಕರೆ ತರುವ ಸಾಧ್ಯತೆಯಿದೆ. 6 ಮಂದಿ ಇರುವ ಸಿಬಿಐ ಹಾಗೂ ಮುಂಬೈ ಪೊಲೀಸರ ತಂಡ ಈಗ ಇಂಡೋನೇಷಿಯಾದಲ್ಲಿದೆ. ಅದರೆ, ಛೋಟಾ ರಾಜನ್ ನನ್ನು ಭಾರತದ ಯಾವ ಜೈಲಿನಲ್ಲಿರಿಸಿ ವಿಚಾರಣೆ ನಡೆಸಬೇಕು ಎಂಬುದರ ಬಗ್ಗೆ ಗೊಂದಲ ಉಂಟಾಗಿದೆ. ಈ ಗೊಂದಲಕ್ಕೆ ಛೋಟಾ ರಾಜನ್ ಹೇಳಿಕೆಯೇ ಕಾರಣವಾಗಿದೆ.
ಇಂಡೋನೇಷಿಯಾದಲ್ಲಿ ಸಿಬಿಐ ಅಧಿಕಾರಿಗಳ ಜೊತೆ ಮಾತನಾಡಿದ ಡಾನ್ ಛೋಟಾರಾಜನ್, 'ನನಗೆ ಮುಂಬೈ ಪೊಲೀಸರ ಮೇಲೆ ನಂಬಿಕೆ ಇಲ್ಲ, ನನ್ನ ಜೀವಕ್ಕೆ ಅಪಾಯವಿದೆ. ದಯವಿಟ್ಟು ನನ್ನನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿ ಎಂದಿದ್ದಾನೆ. ಇದಾದ ಬಳಿಕ ಛೋಟಾ ರಾಜನ್ ನನ್ನು ಯಾರ ವಶಕ್ಕೆ ಒಪ್ಪಿಸಬೇಕು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ದೆಹಲಿಗಿಂತ ಮುಂಬೈ ಪೊಲೀಸರೇ ಛೋಟಾ ವಿರುದ್ಧ ಹೆಚ್ಚಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಭಾರತಕ್ಕೆ ಹೋದ್ರೆ ನಾನು ಫಿನಿಷ್: ಛೋಟಾ ರಾಜನ್]

ಗೃಹ ಇಲಾಖೆ ಜೊತೆ ಚರ್ಚೆ: ಛೋಟಾನನ್ನು ಭಾರತಕ್ಕೆ ಕರೆ ತಂದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅದರೆ, ಅದಕ್ಕೂ ಮುನ್ನ ಯಾವ ಪೊಲೀಸರ ವಶದಲ್ಲಿರಬೇಕು ಎಂಬುದರ ಬಗ್ಗೆ ನಿರ್ದೇಶನ ನೀಡುವಂತೆ ಗೃಹ ಇಲಾಖೆಗೆ ಸಿಬಿಐ ಕೋರಿದೆ. ದೆಹಲಿಯಲ್ಲಿ ಛೋಟಾ ವಿರುದ್ಧ 6 ಕೇಸುಗಳು ಮಾತ್ರ ಇವೆ. ಮುಂಬೈ ಪೊಲೀಸರು ಮೂವತ್ತಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ. [ಇಂಡೋನೇಷಿಯಾದಿಂದ 'ಛೋಟಾ' ಇಂಡಿಯಾಕ್ಕೆ: ಸಿಬಿಐ]
ಯಾರ ವಶಕ್ಕೆ ಛೋಟಾ ರಾಜನ್?: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಹತ್ಯೆಗೈಯಲು ರೂಪಿಸಿದ್ದ ಸಂಚು ವಿಫಲವಾಗಲು ಮುಂಬೈ ಪೊಲೀಸರು ಕಾರಣ ಎಂದು ದೆಹಲಿ ಪೊಲೀಸರು ಬೊಟ್ಟು ಮಾಡುತ್ತಿದ್ದಾರೆ.
ಹಿರಿಯ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಇಬ್ಬರು ಛೋಟಾ ರಾಜನ್ ಸಹಚರರ ನೆರವಿನಿಂದ ದಾವೂದ್ ಕಥೆ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು.
ಅದರೆ, ಈ ಯೋಜನೆ ಕಾರ್ಯಗತವಾಗುವ ಮೊದಲೇ ವಿಕ್ಕಿ ಮಲ್ಹೋತ್ರಾ ಹಾಗೂ ಫರಾದ್ ತನೇಶಾರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇದಕ್ಕೆ ಪೂರಕವಾಗಿ ದಾವೂದ್ ಗ್ಯಾಂಗಿನ ಜೊತೆ ಮುಂಬೈ ಪೊಲೀಸರಿಗೆ ಸಂಪರ್ಕವಿದೆ ಎಂದು ಛೋಟಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಛೋಟಾ ರಾಜನ್ ವಿರೋಧಿ ಬಣದ ಹಲವು ಸದಸ್ಯರು ಮುಂಬೈನಲ್ಲಿ ಹೊಂಚು ಹಾಕಿ ಕಾಯುತ್ತಿರುವಾಗ ಛೋಟಾ ರಾಜನ್ ನನ್ನು ಮುಂಬೈಗೆ ಸ್ಥಳಾಂತರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಸದ್ಯಕ್ಕೆ ಸುರಕ್ಷತಾ ದೃಷ್ಟಿಯಿಂದ ಛೋಟಾನನ್ನು ದೆಹಲಿಗೆ ಮೊದಲಿಗೆ ಕರೆದೊಯ್ಯುವ ಸಾಧ್ಯತೆಯಿದೆ ಎನ್ನಬಹುದು. (ಒನ್ ಇಂಡಿಯಾ ಸುದ್ದಿ)












Click it and Unblock the Notifications