'ಮನೆಯಲ್ಲೇ ಇರಿ, ಹೊರಗೆ ಬರಬೇಡಿ': ಮುಂಬೈ ವಾಸಿಗಳಿಗೆ ಸೂಚನೆ
ಮುಂಬೈ, ಆಗಸ್ಟ್ 29: ''ಸಾರ್ವಜನಿಕರೇ.. ಆದಷ್ಟೂ ಮನೆಯಲ್ಲೇ ಇರಲು ಪ್ರಯತ್ನಿಸಿ. ಸುಮ್ಮನೇ ಹೊರಗೆ ಬರಬೇಡಿ. ಅವಶ್ಯವಾಗಿದ್ದರೆ ಮಾತ್ರ ಹೊರಗೆ ಬನ್ನಿ. ಆದರೆ, ಹಾಗೆ ಬರುವುದಾದರೆ ಎಚ್ಚರಿಕೆ ಕ್ರಮಗಳನ್ನುಕೈಗೊಳ್ಳಿ'' - ಇಂಥದ್ದೊಂದು ಸೂಚನೆಯನ್ನು ಇಡೀ ಮುಂಬೈ ನಗರವಾಸಿಗಳಿಗೆ ನೀಡಲು ಮುಂಬೈ ಮಹಾನಗರ ಪಾಲಿಕೆ ನೀಡುತ್ತಿದೆ.
Recommended Video

ಮಂಗಳವಾರ (ಆಗಸ್ಟ್ 29) ಬೆಳಗ್ಗೆ 8:30ರಿಂದ ಮಧ್ಯಾಹ್ನ 2:30ರೊಳಗೆ ಸುಮಾರು 100 ಮಿ.ಮೀ. ಮಳೆಯಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನ 12:30ರಿಂದ 1:30ರವರೆಗೆ ಸುಮಾರು 70 ಮಿ.ಮೀ. ಮಳೆ ಸುರಿದಿದೆ.

ಕಳೆದೊಂದು ದಿನದಿಂದಲೇ (ಸೋಮವಾರದಿಂದ) ಧಾರಾಕಾರವಾಗಿ ಸುರಿದಿದ್ದ ಮಳೆಯಿಂದಾಗಿ ಇಡೀ ಮಹಾನಗರವೇ ನದಿಯೇ ಹರಿದುಬಂದು ತುಂಬಿಕೊಂಡಂತೆ ಕಂಡಿತ್ತು. ಆದರೆ, ಸೋಮವಾರ ಸುರಿದ ಮತ್ತಷ್ಟು ಅಗಾಧ ಮಳೆಯಿಂದಾಗಿ ಜಲಪ್ರಳಯವೇ ಉಂಟಾದಂತೆ ಕಾಣಿಸುತ್ತಿದೆ.
ಪಾಪ! ಮಹಾನಗರ ಪಾಲಿಕೆಯೇನೋ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲೇ ಇರಿ ಎಂದು ಹೇಳುತ್ತಿದೆ. ಆದರೆ, ಕೆಲವರಿಗೆ ಮನೆಯಲ್ಲೂ ಇರಲಾರದ ಪರಿಸ್ಥಿತಿ ಉಂಟಾಗಿದೆ. ಏಕೆಂದರೆ, ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿರುವುದರಿಂದಾಗಿ ಮನೆಗಳಿಗೆ ನೀರು ನುಗ್ಗಿ ಅವರ ನೆಮ್ಮದಿ ಹಾಳುಗೆಡವಿದೆ.

ಏತನ್ಮಧ್ಯೆ, ಸರ್ಕಾರಿ ಕಚೇರಿಗಳಿಗೆ ಬೆಳಗ್ಗೆ ತೆರಳಿದ್ದ ನೌಕರರು ಅಲ್ಲೇ ಸಿಲುಕಿಹಾಕಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ, ಕಚೇರಿಯ ಸಮಯ ಮುಗಿದ ನಂತರ ಮನೆಗೆ ಹೋಗೋಣವೆಂದರೆ ಕಾಲಿಡಲು ರಸ್ತೆಯೇ ಕಾಣುತ್ತಿಲ್ಲ. ಕಚೇರಿಯ ಬಾಗಿಲವರೆಗೂ ನೀರು ಬಂದು ನಿಂತಿವೆ. ಕೆಲ ಕಚೇರಿಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಚೇರಿಯಿಂದ ಮನೆಗೆ ಹೋಗಬೇಕೆಂದರೆ ಅವರು ದೋಣಿಗಳಲ್ಲಿ ಸಾಗಬೇಕಾದ ಪರಿಸ್ಥಿತಿಯಿದೆ.

ಮುಂಬೈ ಮಹಾನಗರ ಪಾಲಿಕೆಯ ಮುಖ್ಯಸ್ಥರಾಗಿರುವ ಶಿವಸೇನೆಯ ಆದಿತ್ಯ ಠಾಕ್ರೆ, ಕಚೇರಿಗಳಲ್ಲಿರುವ ನೌಕರರರು ಯಾವುದೇ ಕಾರಣಕ್ಕೆ ಗಾಬರಿಯಾಗದೇ ಕಚೇರಿಯಲ್ಲೇ ಇಂದು ಕೆಲಕಾಲ ಇರಬೇಕೆಂದು ಮನವಿ ಮಾಡಿದ್ದಾರೆ.

ಏತನ್ಮಧ್ಯೆ, ಮುಂದಿನ 48 ಗಂಟೆಗಳವರೆಗೆ ಮತ್ತಷ್ಟು ಅಗಾಧವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದಾಗಿ ಮುಂಬೈ ಜನರು ಮತ್ತಷ್ಟು ಭಯಭೀತರಾಗಿದ್ದಾರೆ.
(ಚಿತ್ರ ಕೃಪೆ: ಎಎನ್ಐ)












Click it and Unblock the Notifications