ಸುಪ್ರೀಂ ಗಡುವು ಲೆಕ್ಕಿಸದೆ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಬಂಧನ
ಮುಂಬೈ, ಫೆಬ್ರವರಿ 02: ನಿರೀಕ್ಷಣಾ ಜಾಮೀನು ಸಲ್ಲಿಸಲು ನಾಲ್ಕು ವಾರಗಳ ಗಡುವು ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ಇಂದು ನಸುಕಿನ ಜಾವ 3:30 ಕ್ಕೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ತೇಲ್ತುಂಬ್ಡೆ ಅವರ ಮೇಲೆ ಭೀಮಾಕೊರೆಂಗಾವ್ ಹಿಂಸಾಚಾರಕ್ಕೆ ಕುಮ್ಮಕ್ಕು, ಪ್ರಧಾನಿ ಮೋದಿ ಹತ್ಯೆಗೆ ಸಂಚು ಆರೋಪಗಳನ್ನು ಮುಂಬೈ ಪೊಲೀಸರು ಹೊರಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರನ್ನು ಈ ಹಿಂದೆಯೂ ಬಂಧಿಸಲಾಗಿತ್ತು.
ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಮಾಡಬೇಕೆಂದು ಆನಂದ್ ತೇಲ್ತುಂಬ್ಡೆ ಅವರು ಸುಪ್ರಿಂ ಮೊರೆ ಹೋಗಿದ್ದರು, ಎಫ್ಐಆರ್ ರದ್ದು ಮಾಡಲು ಒಪ್ಪದ ಸುಪ್ರೀಂ ನಾಲ್ಕು ವಾರಗಳ ವರೆಗೆ ಆನಂದ್ ಅವರನ್ನು ಬಂಧಿಸುವಂತಿಲ್ಲ ಎಂದು ಸೂಚಿಸಿತ್ತು. ಆದರೆ ನಾಲ್ಕು ವಾರಕ್ಕೂ ಮುನ್ನವೇ ಪೊಲೀಸರು ತೇಲ್ತುಂಬ್ಡೆ ಅವರನ್ನು ಬಂಧಿಸಿದ್ದಾರೆ.
ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಆನಂದ್ ತೇಲ್ತುಂಬ್ಡೆ ಅವರು ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ನಿನ್ನೆ ವಜಾ ಮಾಡಿತ್ತು ಇದೇ ಕಾರಣವನ್ನು ಇಟ್ಟುಕೊಂಡು ಮುಂಬೈ ಪೊಲೀಸರು ತೇಲ್ತುಂಬ್ಡೆ ಅವರನ್ನು ಬಂಧಿಸಿದ್ದಾರೆ.
ಆನಂದ್ ತೇಲ್ತುಂಬ್ಡೆ ಮತ್ತು ಇತರ ಒಂಬತ್ತು ಮಂದಿ ಮಾನವ ಹಕ್ಕು ಹೋರಾಟಗಾರರು ಪ್ರಸ್ತುತ ಜೈಲಿನಲ್ಲಿ ದಿನಗಳೆಯುತ್ತಿದ್ದಾರೆ. ಇವರ ಮೇಲೆ ಪ್ರಧಾನಿ ಮೋದಿ ಹತ್ಯೆಗೆ ಸಂಚು ಮತ್ತು ಭೀಮಾಕೊರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಇವರೆಲ್ಲರಿಗೂ ನಗರ ನಕ್ಸಲರೆಂಬ ಹಣೆಪಟ್ಟಿ ಕಟ್ಟಲಾಗಿದೆ.