ಶಾಂತಿಪ್ರಿಯ ಹಿಂದೂಗಳನ್ನು ಕಾಂಗ್ರೆಸ್ ಅವಮಾನಿಸಿದೆ : ಮೋದಿ ತೀವ್ರ ವಾಗ್ದಾಳಿ
ವಾರ್ಧಾ (ಮಹಾರಾಷ್ಟ್ರ), ಏಪ್ರಿಲ್ 01 : ಶಾಂತಿ ಪ್ರೀತಿಸುವ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳಿ, ಹಿಂದೂ ಧರ್ಮ ಪಾಲಕರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ವಾರ್ಧಾದಲ್ಲಿ ಬಿಜೆಪಿ ಮತ್ತು ಶಿವಸೇನೆಯ ಜಂಟಿ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 'ಹಿಂದೂ ಭಯೋತ್ಪಾದನೆ' ಪದವನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ ಎಂದು ಮೋದಿ ಕಿಡಿಕಾರಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ರೀತಿ ಹೇಳಿಕೆ ನೀಡಿದ್ದರಿಂದ, ಹಿಂದೂಗಳು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಈಗ ಹೇಳಿ, ಹಿಂದೂ ಭಯೋತ್ಪಾದನೆಯ ಒಂದಾದರೂ ಘಟನೆ ನಡೆದಿದೆಯಾ ಎಂದು ಅವರು ಪ್ರಶ್ನಿಸಿದರು.
ಮೋದಿ ಅವರು ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆಯಿಂದ ಪರಾರಿಯಾಗುತ್ತಿದ್ದಾರೆ ಎಂದು ಹೇಳಿ ಪರೋಕ್ಷವಾಗಿ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ಜೊತೆಗೆ ಕೇರಳದ ವಯನಾಡಿನಲ್ಲಿ ಕೂಡ ಸ್ಪರ್ಧೆಗೆ ಇಳಿಯಲಿದ್ದಾರೆ.
ತಮ್ಮನ್ನು 'ಹಿಂದೂ ಭಯೋತ್ಪಾದಕರು' ಎಂದು ಜರಿದವರನ್ನು ಶಿಕ್ಷಿಸಲು ಭಾರತದ ಮತದಾರರು ನಿರ್ಧರಿಸಿದ್ದಾರೆ. ಇದು ತಿಳಿಯುತ್ತಿದ್ದಂತೆ, ಹಿಂದೂಗಳು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಕಾಂಗ್ರೆಸ್ ಹೆದರುತ್ತಿದೆ ಎಂದು ನರೇಂದ್ರ ಮೋದಿ ಝಾಡಿಸಿದರು.

ಸೈನಿಕರನ್ನೂ ಕಾಂಗ್ರೆಸ್ ಅವಮಾನಿಸಿದೆ
ಕಾಂಗ್ರೆಸ್ ನಾಯಕರು ಹಿಂದೂಗಳನ್ನು ಮಾತ್ರ ಅವಮಾನಿಸಿಲ್ಲ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್ ನಲ್ಲಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ನಮ್ಮ ವಾಯು ಸೇನೆಯ ಸೈನಿಕರ ಸಾಹಸ, ತ್ಯಾಗವನ್ನು ಕೂಡ ಪ್ರಶ್ನಿಸಿ ಅವರನ್ನೂ ಅವಮಾನಿಸಿದ್ದಾರೆ. ಕಾಂಗ್ರೆಸ್ ನಾಯಕರು ಆಡಿರುವ ಭಾಷೆ ಪಾಕಿಸ್ತಾನದಲ್ಲಿ ಮಾತ್ರ ಆಡಲು ಲಾಯಕ್ಕು ಎಂದು ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದರು.

ಶರದ್ ಕಾಲೆಳೆದ ನರೇಂದ್ರ ಮೋದಿ
ಮೊದಲು ಸ್ಪರ್ಧಿಸಲು ನಿರ್ಧರಿಸಿ, ನಂತರ ಸ್ಪರ್ಧಾ ಕಣದಿಂದ ಹಿಂದೆ ಸರಿದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ ಶರದ್ ಪವಾರ್ ಅವರ ಮೇಲೆಯೂ ಮೋದಿ ತೀವ್ರ ವಾಗ್ದಾಳಿ ನಡೆಸಿದರು. ಇದು ಏಕೆಂದರೆ, ಶರದ್ ಪವಾರ್ ಅವರ ಗೆಲುವಿಗೆ ಸೂಕ್ತವಾದ ವಾತಾವರಣ ಮಹಾರಾಷ್ಟ್ರದಲ್ಲಿ ಇಲ್ಲ ಎಂದು ಮೋದಿ ವ್ಯಂಗ್ಯವಾಡಿದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಕೂಟ ರಚಿಸಿವೆ. ಹಾಗೆಯೆ, ಬಿಜೆಪಿ ಮತ್ತು ಶಿವಸೇನೆ ಜಂಟಿಯಾಗಿ ಸ್ಪರ್ಧಾಕಣದಲ್ಲಿ ಧುಮುಕಿವೆ.

ಶರದ್ ಪವಾರ್ ಕುಟುಂಬದಲ್ಲಿಯೇ ವಾರ್
ಶರದ್ ಪವಾರ್ ಅವರ ಕುಟುಂಬದಲ್ಲಿಯೇ ಆಂತರಿಕ ಯುದ್ಧ ಶುರುವಾಗಿದೆ. ತಮ್ಮ ಪಕ್ಷದಲ್ಲಿಯೇ ಶರದ್ ಪವಾರ್ ಅವರು ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಎನ್ಸಿಪಿಯ ಧುರೀಣ ಶರದ್ ಅವರ ಕಾಲೆಳೆದರು. ಕಾಂಗ್ರೆಸ್ ಪಕ್ಷ ತಮ್ಮನ್ನು 'ಶೌಚಾಲಯದ ಚೌಕಿದಾರ' ಎಂದು ಜರಿದಿದ್ದನ್ನು ತಾವು ಆಭರಣದಂತೆ ಧರಿಸುವುದಾಗಿ ಅವರು ವ್ಯಂಗ್ಯವಾಡಿದರು. ಇದೇ ಸಮಯದಲ್ಲಿ, ಪಿಎಸ್ಎಲ್ವಿ-ಸಿ45 ಅನ್ನು ಯಶಸ್ವಿಯಾಗಿ ಶ್ರೀಹರಿಕೋಟಾದಿಂದ ಉಡಾಯಿಸಿದ್ದಕ್ಕೆ ಇಸ್ರೋದ ವಿಜ್ಞಾನಿಗಳಿಗೆ ಅಭಿನಂದಿಸಿದರು.
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

2014ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ-ಶಿವಸೇನೆ
2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಇರುವ 48 ಕ್ಷೇತ್ರಗಳಲ್ಲಿ, ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮೈತ್ರಿಕೂಟ 41 ಕ್ಷೇತ್ರಗಳಲ್ಲಿ ಗೆದ್ದು ಜಯಭೇರಿ ಬಾರಿಸಿತ್ತು. ಉಪಚುನಾವಣೆಯಲ್ಲಿ ಒಂದು ಸೀಟನ್ನು ಬಿಜೆಪಿ ಕಳೆದುಕೊಂಡಿರುವುದರಿಂದ, ಪ್ರಸ್ತುತ ಬಿಜೆಪಿ 22 ಮತ್ತು ಶಿವಸೇನೆ 18 ಕ್ಷೇತ್ರಗಳಲ್ಲಿ ಸಂಸದರಿದ್ದಾರೆ. ಎನ್ಸಿಪಿ 5ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 2 ಸೀಟನ್ನು ತನ್ನದಾಗಿಸಿಕೊಂಡಿತ್ತು. ಈ ಐದು ವರ್ಷಗಳಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸಂಬಂಧ ಅಷ್ಟು ಹಿತಕರವಾಗಿರಲಿಲ್ಲ. ಆದರೆ, ಕಡೆಗೆ ಎರಡೂ ಪಕ್ಷಗಳು ಆಂತರಿಕ ಭಿನ್ನಮತವನ್ನು ಶಮನ ಮಾಡಿಕೊಂಡಿದ್ದು ಮತ್ತೆ ಒಟ್ಟಾಗಿ ಸ್ಪರ್ಧಿಸುತ್ತಿವೆ. ಮಹಾರಾಷ್ಟ್ರದಲ್ಲಿ ಏಪ್ರಿಲ್ 11ರಿಂದ ಏಪ್ರಿಲ್ 29ರವರೆಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯುತ್ತಿದೆ.












Click it and Unblock the Notifications