ಗಣೇಶ ವಿಸರ್ಜನೆ; ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಗಳ ನಡುವೆ ಸಂಘರ್ಷ
ಮುಂಬೈ, ಸೆ.11: ಮಹಾರಾಷ್ಟ್ರದ ಮುಂಬೈನ ದಾದರ್ನಲ್ಲಿ ಗಣೇಶ ವಿಸರ್ಜನೆ ವೇಳೆ ಶಿವಸೇನೆಯ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದ ಜಗಳ ಆರಂಭವಾಗಿದೆ ಎಂದು ಎರಡೂ ಬಣಗಳು ಆರೋಪಿಸಿವೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಡುವೆ ಶಿವಸೇನೆ ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಕಿತ್ತಾಟ ಸುಪ್ರೀಂಕೋರ್ಟ್ ಪೀಠದಲ್ಲಿ ಪ್ರಸ್ತುತ ವಿಚಾರಣೆ ಬಂದಿದೆ. ಇದರ ನಡುವೆಯೇ ಎರಡೂ ಬಣಗಳ ನಡುವೆ ಘರ್ಷಣೆ ನಡೆಯುತ್ತಿದೆ.
Breaking: ಇನ್ನೂ ಬಗೆಹರಿಯದ ಶಿವಸೇನಾ ಚುನಾವಣಾ ಚಿಹ್ನೆ ವಿವಾದ
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ದಾಳಿ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಏಕನಾಥ್ ಶಿಂಧೆ ಬಣದ ಸ್ಥಳೀಯ ಮುಖಂಡ ಸಂತೋಷ್ ತೆಲವಣೆ ಹೇಳಿದ್ದಾರೆ.
ಹಾಗೆಯೇ, ಪ್ರತಿಸ್ಪರ್ಧಿ ಪಾಳೆಯದ ನಾಯಕರೊಬ್ಬರು ತಮ್ಮ ನಾಯಕ ಮಹೇಶ್ ಸಾವಂತ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಠಾಕ್ರೆ ಬಣ ಆರೋಪಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಎರಡು ಬಣಗಳ ನಡುವೆ ದಸರಾ ಹಬ್ಬದಲ್ಲಿಯೂ ಘರ್ಷಣೆ ಸಂಬಂವಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಕಡೆಯವರು ನಾವೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಾರೆ. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಪಕ್ಷದ ವಾರ್ಷಿಕ ದಸರಾ ರ್ಯಾಲಿಯನ್ನು ನಡೆಸಲು ಅನುಮತಿ ಕೋರಿದ್ದಾರೆ.
ಅಕ್ಟೋಬರ್ನಲ್ಲಿ ನಡೆಯಲಿರುವ ಪಕ್ಷದ ದಸರಾ ರ್ಯಾಲಿಗಾಗಿ ವಿಸ್ತಾರವಾದ ಶಿವಾಜಿ ಉದ್ಯಾನವನವನ್ನು ಕಾಯ್ದಿರಿಸಲು ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಶಿಂಧೆ ನೇತೃತ್ವದ ಬಣಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಂಬೈನ ನಾಗರಿಕ ಸಂಸ್ಥೆ ಹೇಳಿದೆ.
ಜೂನ್ನಲ್ಲಿ, ಏಕನಾಥ್ ಶಿಂಧೆ ಮತ್ತು ಶಿವಸೇನೆಯ 55 ಶಾಸಕರಲ್ಲಿ 39 ಶಾಸಕರು ಬಂಡಾಯ ಹೂಡಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದರು.
ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ, ಏಕನಾಥ್ ಶಿಂಧೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೊಸ ಸರ್ಕಾರದಲ್ಲಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿದ್ದಾರೆ.
ಇತ್ತ, ದಾದರ್ ಪ್ರದೇಶದಲ್ಲಿ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರ ನಡುವೆ ಸಾಮಾಜಿಕ ಮಾಧ್ಯಮ ಪೋಸ್ಟ್ಗಾಗಿ ಘರ್ಷಣೆ ನಡೆದ ನಂತರ ಪೊಲೀಸರು ಉದ್ಧವ್ ಠಾಕ್ರೆ ಬಣದ 5 ಕಾರ್ಯಕರ್ತರನ್ನು ಬಂಧಿಸಿದ್ದಾರೆ. 30ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.