ಕಾಡಿನಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಬಲಿಯಾದ ಬೌದ್ಧ ಬಿಕ್ಕು
ಮುಂಬೈ, ಡಿಸೆಂಬರ್ 13: ಸಂರಕ್ಷಿತ ಅರಣ್ಯವೊಂದರಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ ಬೌದ್ಧ ಬಿಕ್ಕು ಚಿರತೆಯ ದಾಳಿಗೆ ಬಲಿಯಾದ ಘಟನೆ ಮಹಾರಾಷ್ಟ್ರದ ರಾಮ್ದೇಗಿಯಲ್ಲಿ ನಡೆದಿದೆ.
ರಾಹುಲ್ ವಾಲ್ಕೆ ಬೋಧಿ (35) ಅವರು ಮಂಗಳವಾರ ಬೆಳಿಗ್ಗೆ ಮರವೊಂದರ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. ಆಗ ಚಿರತೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟರು.
ರಾಹುಲ್ ಅವರೊಂದಿಗೆ ಇನ್ನೂ ಇಬ್ಬರು ಬಿಕ್ಕುಗಳು ಧ್ಯಾನ ನಿರತರಾಗಿದ್ದರು. ಅವರಿಬ್ಬರೂ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಅರಣ್ಯಕ್ಕೆ ಧಾವಿಸಿದ ಪೊಲೀಸರು ರಾಹುಲ್ ಅವರ ದೇಹ ಪತ್ತೆಗೆ ಹುಡುಕಾಟ ನಡೆಸಿದರು.

'ಅವರ ದೇಹವನ್ನು ಚಿರತೆ ಎಳೆದುಕೊಂಡು ಕಾಡಿನ ಒಳಭಾಗಕ್ಕೆ ಒಯ್ಯಲು ಪ್ರಯತ್ನಿಸಿದೆ. ಆಗ ಅವರ ದೇಹ ಅನೇಕ ಕಡೆ ಹರಿದುಹೋಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೃಷ್ಣ ತಿವಾರಿ ತಿಳಿಸಿದ್ದಾರೆ.
ಈ ಕಾಡು ಚಿರತೆಗಳ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಈ ತಿಂಗಳಿನಲ್ಲಿ ನಡೆದ ಐದನೆಯ ಚಿರತೆ ದಾಳಿ ಇದಾಗಿದೆ.
ವಾರ್ಷಿಕ ಪ್ರಾರ್ಥನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಹುಲ್ ಮತ್ತು ಇತರೆ ಬೌದ್ಧ ಬಿಕ್ಕುಗಳು ಅಲ್ಲಿಗೆ ಆಗಮಿಸಿದ್ದರು. ಕಾಡಿನಲ್ಲಿ ತೀರಾ ಒಳಭಾಗಕ್ಕೆ ಹೋಗದಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಅವರು ಅದನ್ನು ಅಲಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅರಣ್ಯದ ಹೊರವಲಯದಲ್ಲಿರುವ ತಮ್ಮ ಅಂಗಡಿಯ ಮುಂದೆ ಸಂದೀಪ್ ಅರ್ಜುನ್ ಎಂಬುವವರು ಸೋಮವಾರ ಚಿರತೆ ದಾಳಿಗೆ ಬಲಿಯಾಗಿದ್ದರು. ಇದೇ ಚಿರತೆಯೇ ಅವರ ಮೇಲೆ ದಾಳಿ ನಡೆಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ.












Click it and Unblock the Notifications