ಸಲ್ಮಾನಿಗೊಂದು ನ್ಯಾಯ, ಗೀತಾಗೊಂದು ನ್ಯಾಯ ಏಕೆ?
ಮುಂಬೈ, ಜೂ.16: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಕೇಸ್ ಎಲ್ಲರಿಗೂ ನೆನಪಿರಬಹುದು. 2002ರ ಕೇಸಿನಲ್ಲಿ ಹೈಕೋರ್ಟ್ ಏಕೆ ಸಲ್ಮಾನಿಗೆ ಎಷ್ಟು ತ್ವರಿತವಾಗಿ ಜಾಮೀನು ಸಿಕ್ಕಿತು ಎಂಬುದು ಇಂದಿಗೂ ಚರ್ಚೆಯಾಗುತ್ತಿದೆ. ಆದರೆ, ಇದೇ ರೀತಿ ಪ್ರಕರಣದಲ್ಲಿ ಜನಪ್ರಿಯ ನೃತ್ಯ ಸಂಯೋಜಕಿಗೆ ರಿಲೀಫ್ ನೀಡಲು ಕೋರ್ಟ್ ನಿರಾಕರಿಸಿದೆ.
ಕೆಲ ತಿಂಗಳ ಹಿಂದೆ ಬಾಲಿವುಡ್ ನೃತ್ಯ ಸಂಯೋಜಕಿ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ 42ವರ್ಷ ವಯಸ್ಸಿನ ಗೀತಾ ಕಪೂರ್ ಅವರು ತಮ್ಮ ಸೆಡಾನ್ ಮಾದರಿ ಕಾರನ್ನು ಪಾದಾಚಾರಿಯ ಮೇಲೆ ಹರಿಸಿದ್ದರು. ಮಾರ್ಚ್ ನಲ್ಲಿ ನಡೆದ ಈ ಅಪಘಾತದಿಂದ ಗೀತಾ ಅವರ ಮೇಲೆ ಐಪಿಸಿ ಸೆಕ್ಷನ್ 279, 338 ಅನ್ವಯ ಪ್ರಕರಣ ದಾಖಲಿಸಲಾಯಿತು.
ಅದರೆ, ಗೀತಾ ಅವರು ಬಾಂಬೆ ಹೈಕೋರ್ಟಿಗೆ ಈ ಬಗ್ಗೆ ಮಾಹಿತಿ ನೀಡಿ, ಸಂತ್ರಸ್ತ ಹಾಗೂ ಅವರ ಕುಟುಂಬದ ಜೊತೆ ಕೋರ್ಟಿನ ಹೊರಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಪ್ರಕರಣವನ್ನು ರದ್ದುಗೊಳಿಸಿ ಎಂದು ಕೇಳಿ ಕೊಂಡಿದ್ದರು.
ಅಪಘಾತ ನಡೆದ ಬಳಿಕ ಗಾಯಗೊಂಡ 37 ವರ್ಷ ವಯಸ್ಸಿನ ನಿಸಾರ್ ನೂರ್ ಮೊಹಮ್ಮದ್ ಅವರನ್ನು ಕೊಕಿಲಾಬೇನ್ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯಕೀಯ ವೆಚ್ಚ 7 ಲಕ್ಷ ರು ಭರಿಸಲಾಗಿದೆ. ಬಲಗಾಲ ಕೀಲು ಈಗ ಸರಿ ಹೋಗುತ್ತಿದೆ ಎಂದು ಗೀತಾ ಹೇಳಿದ್ದಾರೆ.[ಆಡಿ ಗುದ್ದಿ ಇಬ್ಬರ ಸಾವಿಗೆ ಕಾರಣಳಾದ ಹೈಪ್ರೊಫೈಲ್ ವಕೀಲೆ]
ಅದರೆ, ಗೀತಾ ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಲಿಲ್ಲ. ಮತ್ತೊಮ್ಮೆ ಸಂತ್ರಸ್ತ ಕುಟುಂಬದೊಡನೆ ಚರ್ಚಿಸಿ ಮರು ಅರ್ಜಿ ಸಲ್ಲಿಸುವಂತೆ ಸೂಚಿಸಿತು. ಕಪೂರ್ ಮತ್ತೊಮ್ಮೆ 3 ಲಕ್ಷ ಚೆಕ್ ಹಿಡಿದುಕೊಂಡು ಸಂತ್ರಸ್ತನಿಗೆ ನೀಡಿ, ಪ್ರಕರಣಕ್ಕೆ ಇತಿಶ್ರೀ ಹಾಡುವಂತೆ ಕೋರಿದರು. [ಸಲ್ಮಾನ್ ಕೇಸ್ ಫೈಲ್ 2012ರಲ್ಲೇ ಬೆಂಕಿಗೆ ಆಹುತಿ]
ಅದರೆ, ಇಷ್ಟಾದರೂ ಹೈಕೋರ್ಟ್ ಮಾತ್ರ ಗೀತಾ ಕಪೂರ್ ಅವರಿಗೆ ಇನ್ನೂ ರಿಲೀಫ್ ನೀಡಿಲ್ಲ. ಸಲ್ಮಾನ್ ಖಾನ್ ಪ್ರಕರಣದಲ್ಲಿ ಮಾತ್ರ ಜಾಮೀನು ತ್ವರಿತವಾಗಿ ನೀಡಲಾಯಿತು. ಸಲ್ಮಾನ್ ಅವರ ಹಿಟ್ ಅಂಡ್ ರನ್ ಕೇಸ್ ಸದ್ಯ ಜು.1ಕ್ಕೆ ವಿಚಾರಣೆಗೆ ಬರಲಿದೆ.
ಇತ್ತೀಚೆಗೆ ಕುಡಿದ ಮತ್ತಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿದ ವಕೀಲೆ ಜಾಹ್ನವಿ ಎಂಬುವವರು ಇಬ್ಬರ ಪ್ರಾಣ ಬಲಿ ತೆಗೆದುಕೊಂಡ ಘಟನೆಯನ್ನು ಇಲ್ಲಿ ಸ್ಮರಿಸಬಹುದು.