ಬೆಂಗಳೂರಿನಲ್ಲಿ ವಿಶ್ವದ ಅತೀ ದೊಡ್ಡ ಚೆಜ್ ಲೀಗ್ ಆಯೋಜನೆಗೆ ಒಪ್ಪಿಗೆ: ಜಿ.ಪರಮೇಶ್ವರ್ ಗುಡ್ನ್ಯೂಸ್
ಬೆಂಗಳೂರು: ವಿಶ್ವದ ಅತೀ ದೊಡ್ಡ ಚೆಲ್ ಲೀಗ್ನ ನಾಲ್ಕನೇ ಆವೃತ್ತಿಯನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಆದ ಕಂದಾಯ ಮತ್ತು ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು. ಈ ಮೂಲಕ ವಿಶ್ವದಲ್ಲೇ ಐಟಿ ಕೇಂದ್ರವಾಗಿ ಗುರುತಿಸಿಕೊಂಡ ಬೆಂಗಳೂರು ಮತ್ತೊಂದು ಮಹತ್ವದ ದಿನಕ್ಕೆ ಸಾಕ್ಷಿಯಾಗುವ ದಿನ ಸನ್ನಿಹಿತವಾಗಲಿದೆ.
ಇಂದು ಶುಕ್ರವಾರ (ಜುಲೈ 3) ಡಿಸಿಎಂ ಡಾ. ಜಿ. ಪರಮೇಶ್ವರ್ ಅವರನ್ನು ಸದಾಶಿವನಗರದ ಗೃಹ ಕಚೇರಿಯಲ್ಲಿ ಗ್ಲೋಬಲ್ ಚೆಸ್ ಲೀಗ್ ನಿಯೋಗವು ಭೇಟಿ ಮಾಡಿತು. ನಿಯೋಗದ ಸದಸ್ಯರು ಮಹತ್ವ ವಿಷಯಗಳನ್ನು ಕ್ರೀಡಾ ಸಚಿವರೊಂದಿಗೆ ಚರ್ಚಿಸಿದರು. ಇದೇ ವೇಳೆ ವಿಶ್ವದ ಅತಿದೊಡ್ಡ ಚೆಸ್ ಲೀಗ್ ಆಗಿರುವ ಗ್ಲೋಬಲ್ ಚೆಸ್ ಲೀಗ್ನ 4ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ನಡೆಸಲು ಆಯೋಗವು ಉತ್ಸುಕತೆ ತೋರಿತು. ಅವರ ಮಾತಿಗೆ ಪ್ರತಿಕ್ರಿಯಿಸಿ ಸಚಿವರು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಚೆಸ್ ಆವೃತ್ತಿ ಆಯೋಜನೆಗೆ ಎಲ್ಲ ವಿಧವಾದ ಬೆಂಬಲ, ಸಹಕಾರ ನೀಡುವುದಾಗಿ ತಿಳಿಸಿದರು.

ವಿಶ್ವಮಟ್ಟದ ಕ್ರೀಡಾಕೂಟಗಳಿಗೆ ಬೆಂಗಳೂರು ಆತಿಥ್ಯ ವಹಿಸುವ ಮೂಲಕ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಹೊಸ ಉತ್ತೇಜನ ಸಿಗಲಿದೆ. ಇಂತಹ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಸರ್ಕಾರ ಅಗತ್ಯ ಸಹಕಾರ ಒದಗಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಗ್ಲೋಬಲ್ ಚೆಸ್ ಲೀಗ್ನ ಸಿಇಒ ಗೌರವ್ ರಕ್ಷಿತ್, ಅಂತರರಾಷ್ಟ್ರೀಯ ಚೆಸ್ ಆಟಗಾರ ಪ್ರಚುರ ಪಿ.ಪಿ. ಹಾಗೂ ಸದಸ್ಯರೊಂದಿಗೆ ಸಚಿವರು ಸುದೀರ್ಘ ಮಾತುಕತೆ ನಡೆಸಿದರು.
ಡಿಸಿಎಂ ಭೇಟಿಯಾದ ಡಿಜಿಟಲ್ ಎಕಾನಮಿ ಮಿಷನ್ ನಿಯೋಗ
ಗ್ಲೋಬಲ್ ಚೆಸ್ ಲೀಗ್ ನಿಯೋಗದ ಬೆನ್ನಲ್ಲೇ ಸದಾಶಿವನಗರದ ಗೃಹ ಕಚೇರಿಯಲ್ಲಿ ಪರಮೇಶ್ವರ್ ಅವರನ್ನು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ನಿಯೋಗವು ಭೇಟಿ ಮಾಡಿತು. ಕರ್ನಾಟಕ ರಾಜ್ಯವನ್ನು ಡಿಜಿಟಲ್ ಪರಿವರ್ತನೆಯ ಕ್ಷೇತ್ರದಲ್ಲಿ ಇನ್ನಷ್ಟು ಮುಂಚೂಣಿಯಲ್ಲಿರಿಸುವ ದೂರದೃಷ್ಟಿ, ಭವಿಷ್ಯದ ಕಾರ್ಯ ಯೋಜನೆಗಳು ಹಾಗೂ ರಾಜ್ಯದ ಬ್ರ್ಯಾಂಡಿಂಗ್ ಕಾರ್ಯತಂತ್ರದ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಇನ್ನೂ ತುಮಕೂರಿನ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬಹುದಾದ ವಿವಿಧ ಉಪಕ್ರಮಗಳ ಬಗ್ಗೆಯೂ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಹೂಡಿಕೆ, ಅಭಿವೃದ್ಧಿಗೆ ಹೊಸ ಅವಕಾಶ
ಕರ್ನಾಟಕದ ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ನಾವೀನ್ಯತೆ, ಹೂಡಿಕೆ ಮತ್ತು ಸಮಗ್ರ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಜೊತೆಗೆ ನಮ್ಮ ಸರ್ಕಾರ ನಿರಂತರ ಸಹಕಾರ ನೀಡಲಿದೆ ಎಂದು ಡಾ.ಜಿ.ಪರಮೇಶ್ವರ್ ಭರವಸೆ ಕೊಟ್ಟರು.
ಎಚ್ಚರಿಕೆಯಿಂದ ನೀರು ಬಳಸಿ: ಪರಮೇಶ್ವರ್ ಸೂಚನೆ
ಇತ್ತೀಚೆಗೆ ಬೆಳಗಾವಿ ವಿಭಾಗದ ಹವಾಮಾನ ಪರಿಸ್ಥಿತಿ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿ.ಪರಮೇಶ್ವರ್ ಅವರು ಅಗತ್ಯ ಎಚ್ಚರಿಕೆಗಳನ್ನು ನೀಡಿದ್ದಾರೆ. ಮತದಾರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಅನೇಕರಿಗೆ ಖಾಯಂ ನಿವಾಸಿ ದೃಢಿಕರಣಪತ್ರದ (ಪಿಆರ್ಸಿ) ಅಗತ್ಯವಿದೆ. ಅದನ್ನು ತಹಸೀಲ್ದಾರ್ ಮತ್ತು ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳು ನೀಡಬೇಕು. ಯಾವ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಬಾರದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಭಾರತವು 1901ರ ನಂತರ 2026ರಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಲಿದೆ. ಜೂನ್ ತಿಂಗಳಲ್ಲಿ ಮಳೆ ಕುಸಿದಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಉತ್ತಮ ಮಳೆ ಆಗಿತ್ತು. ಪ್ರಸ್ತುತ ಜುಲೈ ತಿಂಗಳಲ್ಲೂ ಮುಂಗಾರು ಕೊರತೆ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ನಮ್ಮ ಜಲಾಶಯಗಳಲ್ಲಿ ನೀರು ಡೆಡ್ ಸ್ಟೋರೇಜ್ ಮಟ್ಟ ಮುಟ್ಟಿದೆ. ಇರುವ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ಹೇಳಿದರು.













Click it and Unblock the Notifications