ಮುಂಬೈ ಪಾಲಿಕೆ ಗದ್ದುಗೆ ಹಿಡಿಯಲಿದೆಯಾ ಕಾಂಗ್ರೆಸ್-ಶಿವಸೇನೆ?
ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದು ಮೂರು ದಿನಗಳಾಗಿವೆ. ಆದರೆ ಇನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಳುವವರು ಯಾರು ಎಂಬುದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಮುಂಬೈ, ಫೆಬ್ರವರಿ 28: ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದು ಮೂರು ದಿನಗಳಾಗಿವೆ. ಆದರೆ ಇನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಳುವವರು ಯಾರು ಎಂಬುದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಕ್ರಮವಾಗಿ 84 ಮತ್ತು 82 ಸೀಟುಗಳನ್ನು ಗೆದ್ದುಕೊಂಡಿರುವ ಶಿವಸೇನೆ ಮತ್ತು ಬಿಜೆಪಿ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದ್ದು, ಅವುಗಳ ಮಧ್ಯೆ ಮೈತ್ರಿ ಸಾಧ್ಯವಾಗಿಲ್ಲ. ಇನ್ನೊಂದೆಡೆ ಕಾಂಗ್ರೆಸ್ ನತ್ತ ಶಿವಸೇನೆ ಕಣ್ಣು ಹಾಯಿಸಿದ್ದು ಸಹಜವಾಗಿಯೇ ಬಿಜೆಪಿ ಮತ್ತು ಆರ್.ಎಸ್.ಎಸ್ ಕೆಂಗಣ್ಣಿಗೆ ಗುರಿಯಾಗಿದೆ.[ಮುಂಬೈ ಚುನಾವಣೆ: ಸೋತಿದ್ದ ಅತುಲ್ ಶಾ ಅದೃಷ್ಟ ಲಾಟರಿಯಲ್ಲಿ ಗೆದ್ದಾಗ..]

ಬಿಎಂಸಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಆಳ್ವಿಕೆ ನಡೆಸಬೇಕು ಎಂಬುದು ಆರ್.ಎಸ್.ಎಸ್ ಬಯಕೆಯಾಗಿದೆ. ಹೀಗಿದ್ದೂ ಶಿವಸೇನೆ 31 ಸ್ಥಾನಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಜತೆ ಸೇರಿಕೊಳ್ಳುವ ಸಾಧ್ಯತೆಗಳು ಜಾಸ್ತಿ ಎಂದು ಆರ್.ಎಸ್.ಎಸ್ ಅಂದಾಜಿಸಿದೆ. ಕಾಂಗ್ರೆಸ್ ಮತ್ತು ಶಿವಸೇನೆ ಒಟ್ಟಾದರೆ 115 ಸ್ಥಾನಗಳಾಗುತ್ತವೆ. ಬಹುಮತಕ್ಕೆ 114 ಸ್ಥಾನಗಳು ಅಗತ್ಯವಾಗಿದ್ದು ಕಾಂಗ್ರೆಸ್-ಶಿವಸೇನೆ ಆರಾಮವಾಗಿ ಅಧಿಕಾರ ನಡೆಸಬಹುದು.
ಇನ್ನು ಬಿಜೆಪಿ ಜತೆ ಸೇರಿಕೊಂಡರೆ ಮೇಯರ್ ಹುದ್ದೆ ಯಾರಿಗೆ ಎಂಬುದು ಕಗ್ಗಂಟಾಗಿದೆ. ಶಿವಸೇನೆ ಮೇಯರ್ ನಮ್ಮ ಪಕ್ಷದಿಂದಲೇ ಇರಲಿದ್ದಾರೆ ಎನ್ನುತ್ತಿದೆ. ಆರ್.ಎಸ್.ಎಸ್ ಮೇಯರ್ ಹುದ್ದೆ ಬದಲಾವಣೆಯಾಗುತ್ತಿರಬೇಕು ಎಂದಿದೆ. ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದರಿಂದ ಶಿವಸೇನೆ ಮೊದಲ ಎರಡೂವರೆ ವರ್ಷ ಅವಧಿಗೆ ಮೇಯರ್ ಹುದ್ದೆ ಪಡೆಯಬಹುದು. ಎರಡನೇ ಅವಧಿಗೆ ಬಿಜೆಪಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇದೆಲ್ಲಾ ಬಿಜೆಪಿ ಮತ್ತು ಶಿವಸೇನೆ ಒಟ್ಟಾದರೆ ಮಾತ್ರ.[ಮುಂಬೈ ಮೇಯರ್ ಗಾದಿಗೆ ಬಿಜೆಪಿ-ಶಿವಸೇನೆ ಮಧ್ಯೆ ಬಿಗ್ ಫೈಟ್]
ಈಗಾಗಲೇ ಶಿವಸೇನೆ ಕಾಂಗ್ರೆಸ್ ಜತೆ ಮಾತುಕತೆಯಲ್ಲಿದೆ. ಈಗಾಗಲೇ ಉದ್ಧವ್ ಠಾಕ್ರೆ ತಮ್ಮ ಪ್ರತಿನಿಧಿಗಳನ್ನು ಕಾಂಗ್ರೆಸ್ ಬಳಿ ಕಳುಹಿಸಿ ಉಪಮೇಯರ್ ಹುದ್ದೆ ಕೊಡುವ ಆಫರ್ ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದು ಅಲ್ಲಿ ಉದ್ಧವ್ ನೀಡಿದ ಆಫರ್ ಚರ್ಚೆಗೆ ಬಂದಿದೆ.
ಮೇಯರ್ ಚುನಾವಣೆ ಮಾರ್ಚ್ 9ರಂದು ನಡೆಯಲಿದ್ದು ಅಲ್ಲಿವರೆಗೆ ಪಕ್ಷಗಳಿಗೆ ತಮ್ಮ ತಮ್ಮಲ್ಲೇ ಚರ್ಚೆಗಳನ್ನು ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ.












Click it and Unblock the Notifications