Breaking: ವಾಮಾಚಾರಕ್ಕೆ ಮಗಳನ್ನೇ ಬಲಿ ಕೊಟ್ಟ ತಂದೆ-ತಾಯಿ
ಮುಂಬೈ, ಆಗಸ್ಟ್ 07: ಮಗಳ ಮೈಮೇಲೆ ದುಷ್ಟಶಕ್ತಿಗಳಿವೆ ಎಂದು ಐದು ವರ್ಷದ ಬಾಲಕಿಯ ದೇಹದಿಂದ ದುಷ್ಟಶಕ್ತಿಗಳನ್ನು ಓಡಿಸಲು ವಾಮಾಚಾರ ಮಾಡುತ್ತಿದ್ದ ತಂದೆ-ತಾಯಿ ಆಕೆಯನ್ನು ಥಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ.
ಶನಿವಾರ ಮಧ್ಯರಾತ್ರಿ ಈ ದುರ್ಘಟನೆ ನಡೆದಿದ್ದು, ಪೊಲೀಸರು ಐದು ವರ್ಷದ ಬಾಲಕಿಯ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಬಂಧಿಸಿದ್ದಾರೆ.
ಮಧುರೈನಲ್ಲಿ ಮೊದಲ ಟ್ರಾನ್ಸ್ಜೆಂಡರ್ ಪ್ರಕಟಣೆ ಮತ್ತು ಚಲನಚಿತ್ರ ಕಂಪನಿ ಪ್ರಾರಂಭ
ಯೂಟ್ಯೂಬ್ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಸಿದ್ಧಾರ್ಥ್ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ, 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅಂದಿನಿಂದ, ಆರೋಪಿ ತಂದೆ ತನ್ನ ಕಿರಿಯ ಮಗಳ ವರ್ತನೆಯಲ್ಲಿ ಹಲವು ಬದಲಾವಣೆಗಳಾಗಿವೆ ಎಂದು ಅನುಮಾನಿಸಿದ್ದರು. ಬಾಲಕಿ ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ನಂಬಿ, ಅವುಗಳನ್ನು ಓಡಿಸಲು 'ಬ್ಲಾಕ್ ಮ್ಯಾಜಿಕ್' ಮಾಡಲು ನಿರ್ಧರಿಸಿದ್ದಾನೆ ಎಂದು ಅಧಿಕಾರಿ ಹೇಳಿದರು.
ಬಾಲಕಿಯ ಪೋಷಕರು ಮತ್ತು ಚಿಕ್ಕಮ್ಮ ರಾತ್ರಿಯಲ್ಲಿ ವಾಮಾಚಾರದ ಆಚರಣೆಗಳನ್ನು ಮಾಡಿದ್ದಾರೆ. ಅದರ ವಿಡಿಯೋವನ್ನು ಸಹ ಚಿತ್ರೀಕರಿಸಿದ್ದಾರೆ. ಪೊಲೀಸರು ಆರೋಪಿಗಳ ಫೋನ್ನಿಂದ ವಿಡಿಯೋ ವಶಪಡಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ, ಆರೋಪಿಗಳು ಅಳುತ್ತಿದ್ದ ಹುಡುಗಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದರು.
ಈ ವೇಳೆ ಮೂವರು ಆರೋಪಿಗಳು ಮಗುವಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ, ನಂತರ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಬಳಿಕ ಆರೋಪಿಗಳು ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಂದ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಆರೋಪಿಗಳು ಓಡಿ ಹೋಗಿದ್ದಾರೆ.
ಆಸ್ಪತ್ರೆಯ ಭದ್ರತಾ ಸಿಬ್ಬಂದಿಗೆ ಅವರ ವರ್ತನೆ ಅನುಮಾನಾಸ್ಪದವಾಗಿ ಕಂಡು ಬಂದು ಅವರ ಕಾರಿನ ಚಿತ್ರವನ್ನು ತನ್ನ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಆಸ್ಪತ್ರೆಯ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಫೋಟೋದಲ್ಲಿನ ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ, ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಮನೆಗೆ ತಲುಪಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.