ದೇಶದಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ಆಗುವ ಕಾಲ ದೂರವಿಲ್ಲ: ರಾಹುಲ್
ಮುಂಬೈ, ಜೂನ್ 12 : "ಬಿಜೆಪಿಯವರು ಈಚೆಗೆ ಕರ್ನಾಟಕದಲ್ಲಿ ಸೋತಿದ್ದಾರೆ ಮತ್ತು ಗುಜರಾತ್ ನಲ್ಲಿ ಹೇಗೋ ಕಷ್ಟಪಟ್ಟು ಗೆದ್ದರು. ಇನ್ನು ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಆಗುತ್ತಾರೆ. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲಿವೆ".
- ಹೀಗೆ ಮುಂಬೈನಲ್ಲಿ ಮಂಗಳವಾರ ಆತ್ಮವಿಶ್ವಾಸದಿಂದ ಮಾತನಾಡಿದವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.
ನಾವು ವಾಜಪೇಯಿ ಜೀ ವಿರುದ್ಧ ಕೂಡ ಸ್ಪರ್ಧಿಸಿದ್ದೆವು. ಆದರೆ ಅವರಿಗೆ ಅನಾರೋಗ್ಯ ಅಂತಾದಾಗ ಆದ್ಯತೆ ಮೇಲೆ ನೋಡಿಕೊಂಡು ಬರಲು ಆಸ್ಪತ್ರೆಗೆ ಹೋದೆ. ಏಕೆಂದರೆ ನಾನೊಬ್ಬ ಕಾಂಗ್ರೆಸ್ ನ ಸೈನಿಕ. ವಾಜಪೇಯಿ ಅವರು ನಮ್ಮ ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಮತ್ತು ಮಾಜಿ ಪ್ರಧಾನಿಯಾಗಿ ಅವರನ್ನು ಗೌರವಿಸುತ್ತೇವೆ. ಇದು ನಮ್ಮ ಸಂಸ್ಕೃತಿ ಎಂದು ಅವರು ಹೇಳಿದರು.

ಎಲ್.ಕೆ.ಅಡ್ವಾಣಿ ಅವರು ಪ್ರಧಾನಿ ನರೇಂದ್ರ ಮೋದಿಯ ಗುರು. ಆದರೆ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ: ಪ್ರಧಾನಿ ಮೋದಿ ತಮ್ಮ ಗುರುವಿಗೆ ಗೌರವ ನೀಡಲ್ಲ. ಅಡ್ವಾಣಿ ಅವರ ಇಂದಿನ ಸ್ಥಿತಿಗೆ ನನಗೆ ಮರುಕವಿದೆ. ಕಾಂಗ್ರೆಸ್ ಪಕ್ಷವೇ ಅಡ್ವಾಣಿ ಅವರಿಗೆ ಪ್ರಧಾನಿಗಿಂತ ಹೆಚ್ಚಿನ ಗೌರವ ನೀಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ ವಿರುದ್ಧವಾಗಿ ಹಿರಿಯ ರಾಜಕಾರಣಿಯೊಬ್ಬರು ಹೋರಾಟ ಮಾಡುತ್ತಿದ್ದಾರೆ. ಅವರೇ ಹೇಳಿದ್ದರು: ಐವತ್ತು ವರ್ಷಗಳ ನಂತರ ಅವರಿಗೆ ಗೊತ್ತಾಗಿದ್ದು ಏನೆಂದರೆ, ಈ ದೇಶವನ್ನು ಯಾರಾದರೂ ಸುರಕ್ಷಿತವಾಗಿ ಇರಿಸಿಕೊಳ್ಳಲು ಸಾಧ್ಯವಾದರೆ ಅದು ಕಾಂಗ್ರೆಸ್. ಬಿಜೆಪಿ ಮತ್ತು ಆರೆಸ್ಸೆಸ್ ನ ಸಿದ್ಧಾಂತಗಳನ್ನು ಸೋಲಿಸಲು ಸಾಧ್ಯವಿದ್ದರೆ ಅದು ಕಾಂಗ್ರೆಸ್ಸಿಗೆ ಮಾತ್ರ ಎಂದು ರಾಹುಲ್ ಹೇಳಿದರು.
ಹೇಗೆ ಕಾಂಗ್ರೆಸ್ ಪಕ್ಷವು ಸಮಾಜದ ಎಲ್ಲ ವರ್ಗದವರನ್ನು ಒಟ್ಟು ಮಾಡಿಕೊಂಡು ಮುನ್ನಡೆಸುತ್ತಿದೆಯೋ ಅದೇ ರೀತಿ ಮುಂಬೈ ನಗರ ಕೂಡ ಎಲ್ಲ ರೀತಿಯ ಜನರನ್ನು ಒಳಗೊಂಡಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.












Click it and Unblock the Notifications