ಲೋಕಸಭೆ ಚುನಾವಣೆ: ಮೋದಿಗಾಗಿ ಬಿಜೆಪಿ- ಶಿವಸೇನೆ ಒಟ್ಟಿಗೆ ಸ್ಪರ್ಧೆ
ಮುಂಬೈ, ಅಕ್ಟೋಬರ್ 24: ಲೋಕಸಭೆ ಚುನಾವಣೆ 2019ರನ್ನು ಬಿಜೆಪಿ ಹಾಗೂ ಶಿವಸೇನಾ ಒಟ್ಟಿಗೆ ಎದುರಿಸಲಿವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ. ಮೋದಿ ನಾಯಕತ್ವಕ್ಕಾಗಿ ನಾವು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಇದು ರಾಜ್ಯ, ರಾಷ್ಟ್ರಕ್ಕೆ ಹಿತ ಎಂದಿದ್ದಾರೆ.
ಮುಂಬೈ ಮಂಥನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಂದ್ರ, ರಾಜಕೀಯ ಅರ್ಥವಾಗುವವರಿಗೆ ನನ್ನ ಮಾತು ಅರ್ಥವಾಗುತ್ತದೆ. ಯಾರು ಕೂಡಾ ತನ್ನ ಮನೆಗೆ ಬೆಂಕಿ ಹಚ್ಚಿ ಖುಷಿ ಪಡುವುದಿಲ್ಲ ಎಂದಿದ್ದಾರೆ.
ದೇಶದ ಭವಿಷ್ಯವನ್ನು ಮಹಾರಾಷ್ಟ್ರ ಸೇರಿದಂತೆ ಭಾರತದ ಎಲ್ಲಾ ಜನತೆ ನಿರ್ಧರಿಸಲಿದ್ದಾರೆ. ಎನ್ಡಿಎಗೆ ಹೆಚ್ಚಿನ ಪ್ರಮಾಣದಲ್ಲಿ ಸೀಟು ಗೆಲ್ಲಿಸಿಕೊಡುವುದು ನಮ್ಮ ಗುರಿ ಎಂದರು.
ನಾವು ಬಿಜೆಪಿ-ಶಿವಸೇನೆ ಮೈತ್ರಿಯ ವಿರೋಧಿಗಳಲ್ಲ. ಅಥವಾ ನಮ್ಮ ಮೈತ್ರಿ ಮುರಿದುಹೋಗುತ್ತದೆ ಎಂದೂ ತಿಳಿದಿಲ್ಲ. ನಾವು ಈ ಮೈತ್ರಿಯನ್ನು ಮತ್ತೆ ಒಂದುಗೂಡಿಸಲು ಸಿದ್ಧರಿದ್ದೇವೆ, ಅದಕ್ಕಾಗಿ ಶಿವಸೇನೆಯೊಂದಿಗೆ ಮಾತುಕತೆ ನಡೆಸಲು ನಾವು ಉತ್ಸುಕರಾಗಿದ್ದೇವೆ" ಎಂದು ಫಡ್ನವಿಸ್ ಹೇಳಿದರು.