ಯಾಕೂಬ್ ಪರ ಟ್ವೀಟ್, ಸಲ್ಲೂ ವಿರುದ್ಧ ಬಿಜೆಪಿ ಪ್ರತಿಭಟನೆ
ಮುಂಬೈ, ಜುಲೈ 27: ಮುಂಬೈ ಸರಣಿ ಸ್ಪೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್ ಪರ ಟ್ವೀಟ್ ಮಾಡಿ, ಕ್ಷಮೆಯಾಚಿಸಿದ ಸಲ್ಮಾನ್ ಖಾನ್ ಅವರ ವಿರುದ್ಧ ಬಿಜೆಪಿ ಕಿಡಿಕಾರಿದೆ. ಈಗ ಸಲ್ಮಾನ್ ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸಿನ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಕಡಂಉ ಬಂದಿದೆ.
ಟೈಗರ್ ಮೆಮನ್ ಮಾಡಿದ ತಪ್ಪಿಗೆ ಆತನ ಸಹೋದರ ಯಾಕೂಬ್ ನನ್ನು ಗಲ್ಲಿಗೇರಿಸುವುದು ಸರಿಯಲ್ಲ ಎಂದಿರುವ ಸಲ್ಮಾನ್ ಖಾನ್ ಪಾಕ್ ಪ್ರಧಾನಿ ನವಾಜ್ ಶರೀಫ್ ಜೊತೆ ಟೈಗರ್ ಮೆಮನ್ ನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿದ್ದಾರಂತೆ ಎಂಬ ಸುದ್ದಿಯೂ ಹಬ್ಬಿತ್ತು. ನಾನು ಯಾಕೂಬ್ ಅಮಾಯಕ ಎಂದು ಹೇಳಿಲ್ಲ. ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆಯಾಗಲಿ ಎಂದು ಸಲ್ಮಾನ್ ಸಮರ್ಥನೆ ನೀಡಿದ್ದರು. [ಜನರ ಆಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿದ ಸಲ್ಮಾನ್]
1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಪರವಾಗಿ ಮಾಡಿದ್ದ ಟ್ವಿಟ್ಗಳನ್ನು ಸಲ್ಮಾನ್ ಖಾನ್ ವಾಪಸ್ ಪಡೆದು ಕ್ಷಮೆಯಾಚಿಸುವ ಹೊತ್ತಿಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಉರ್ದು ಆವೃತ್ತಿ ವೆಬ್ ಸೈಟ್ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರಿಗೆ ಇದರಿಂದ ತೀವ್ರ ಮುಜುಗರವಾಯಿತು.. ಸದ್ಯಕ್ಕೆ ಸಲ್ಮಾನ್ ಅವರು ಕ್ಷಮೆಯಾಚಿಸಿದರೂ 'ಭಜರಂಗಿ ಭಾಯಿಜಾನ್' ವಿರುದ್ಧ ಬಿಜೆಪಿ ಕೋಪ ಇನ್ನೂ ತಣ್ಣಗಾಗಿಲ್ಲ...

ಸಲ್ಮಾನ್ ಖಾನ್ ಅಧಿಕೃತ ಖಾತೆ ಜನಪ್ರಿಯತೆ
ಸಲ್ಮಾನ್ ಖಾನ್ ಅವರ ಟ್ವಿಟ್ಟರ್ ಖಾತೆ ಎಂದು ಅಧಿಕೃತ ಮುದ್ರೆ ಸಿಕ್ಕಿದ್ದು 1.31 ಕೋಟಿ ಗೂ ಅಧಿಕ ಹಿಂಬಾಲಕರಿದ್ದಾರೆ. ಸಲ್ಮಾನ್ ಖಾನ್ ಅವರ ಟ್ವೀಟ್ 4 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದ್ದು, ಹೆಚ್ಚಿನ ಪರಿಣಾಮ ಬೀರಿದೆ.

ಮುಂಬೈ ಬಿಜೆಪಿಯಿಂದ ಅಧಿಕೃತ ದೂರು ಸಲ್ಲಿಕೆ
ಯಕೂಬ್ ಮೆಮನ್ ಪರ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. 2002 ಹಿಟ್ ಅಂಡ್ ರನ್ ಕೇಸಿನಲ್ಲಿ ಸಲ್ಮಾನ್ ಪಡೆದುಕೊಂಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಮುಂಬೈ ಬಿಜೆಪಿ ಅಧ್ಯಕ್ಷ ಆಶೀಶ್ ಶೆಲಾರ್ ಅವರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
|
ನಾನು ಯಾವ ಜಾತಿ -ಧರ್ಮದ ಪರ ನಿಲ್ಲುವವನಲ್ಲ
ನಾನು ಯಾವ ಜಾತಿ -ಧರ್ಮದ ಪರ ನಿಲ್ಲುವವನಲ್ಲ, ಈ ಬಗ್ಗೆ ಪ್ರಶ್ನಿಸುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದ ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ಸೆಕ್ರೆಟರಿ ಎಚ್ಚರ ತಪ್ಪಿದ್ದೇ ಕಾರಣವೇ?
2003ರಿಂದ ಇಲ್ಲಿ ತನಕ ಸಲ್ಮಾನ್ ವೃತ್ತಿ ಬದುಕಿನಲ್ಲಿ ಏರಿಳಿತಗಳಲ್ಲಿ ಸಹಭಾಗಿಯಾಗಿರುವ ಆಪ್ತ ಸೆಕ್ರೆಟರಿ ರೇಷ್ಮಾ ಅವರು ಸಾಮಾನ್ಯವಾಗಿ ಸಲ್ಮಾನ್ ಅವರ ಟ್ವೀಟ್ ನಿಂದ ಹಿಡಿದು ಡ್ರೆಸ್, ಶೂಟಿಂಗ್ ವೇಳಾಪಟ್ಟಿ, ವಿರಾಮ, ದೈನಂದಿನ ಆಗು ಹೋಗುಗಳನ್ನು ನೋಡಿಕೊಳ್ಳುತ್ತಾರೆ. ಸ್ಟಾರ್ ನಟ, ನಟಿಯರ ಸಾಮಾಜಿಕ ಜಾಲ ತಾಣ ನಿರ್ವಹಣೆಯನ್ನು ಅವರ ಆಪ್ತರೇ ನಿರ್ವಹಿಸುವುದು ಗುಟ್ಟಾದ ವಿಷಯವೇನಲ್ಲ. ರೇಷ್ಮಾ ಅವರು ಈಗ ಸಲ್ಲೂ ಟ್ವೀಟ್ ಖಾತೆ ನಿರ್ವಹಣೆ ಮಾಡುತ್ತಿಲ್ಲದ ಕಾರಣ ಈ ಅನರ್ಥ ಸಂಭವಿಸಿರಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ
ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗಲ್ಲಿಗೇರಿಸಲು ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜುಲೈ 30ರಂದು ಬೆಳಗ್ಗೆ 3 ಗಂಟೆಗೆ ಯಾಕೂಬ್ಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.












Click it and Unblock the Notifications