ರವಿಶಾಸ್ತ್ರಿ ಅಂಡ್ ಟೀಂನಿಂದ ಸ್ಪಾಟ್ ಫಿಕ್ಸಿಂಗ್ ತನಿಖೆ

ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಸಮಿತಿ ರಚಿಸಿರುವ ಬಿಸಿಸಿಐ, ಇಂದು ನಡೆದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ ಎಂದು ಮಧ್ಯಂತರ ಅಧ್ಯಕ್ಷ, ಐಪಿಎಲ್ ಚೇರ್ಮನ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸಿಬಿಐನ ಮಾಜಿ ನಿರ್ದೇಶಕ ಆರ್ ಕೆ ರಾಘವನ್, ಜೆಎನ್ ಪಟೇಲ್ ಹಾಗೂ ಮಾಜಿ ಕ್ರಿಕೆಟರ್ ರವಿ ಶಾಸ್ತ್ರಿ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾ ತಂಡದ ಸದಸ್ಯರಾಗಿರುತ್ತಾರೆ. ಬಿಸಿಸಿಐ ಪರ ವಕೀಲರು ಈ ಮೂವರು ಸದಸ್ಯರ ಸಮಿತಿ ವಿವರವನ್ನು ಸುಪ್ರೀಂಕೋರ್ಟಿಗೆ ಮಂಗಳವಾರದಂದು ಸಲ್ಲಿಸಿ ಅನುಮತಿ ಪಡೆಯಲಿದ್ದಾರೆ.
ಐಪಿಎಲ್ ನ ಕಳ್ಳಾಟದ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಈ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಈ ನಡುವೆ ಪದಚ್ಯುತ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಮೇಲ್ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ. ಹೀಗಾಗಿ ಜಸ್ಟೀಸ್ ಮುದ್ಗಲ್ ವರದಿಯಂತೆ ಶ್ರೀನಿವಾಸನ್ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು, ಟೀಂ ಇಂಡಿಯಾದ ಆಟಗಾರರು ಈಗ ತನಿಖೆ ಎದುರಿಸುವುದು ಅನಿವಾರ್ಯವಾಗಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೆ ಹಾಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ತಾತ್ಕಾಲಿಕವಾಗಿ ಸುನೀಲ್ ಗವಾಸ್ಕರ್ ಅಥವಾ ಹಿರಿಯ ಕ್ರಿಕೆಟಿಗರು ಒಬ್ಬರನ್ನು ಆ ಸ್ಥಾನಕ್ಕೆ ನೇಮಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ ಸುನಿಲ್ ಗವಾಸ್ಕರ್ ಅವರು ಐಪಿಎಲ್ ಹಾಗೂ ಬಿಸಿಸಿಐ ಸಾರಥ್ಯ ವಹಿಸಿಕೊಂಡಿದ್ದರು.
ಇದಕ್ಕೂ ಮುನ್ನ ಬಾಲಿವುಡ್ ನಟ, ಬುಕ್ಕಿಗಳ ನಂಟು ಹೊಂದಿರುವ ವಿಂದೂ ದಾರಾಸಿಂಗ್ ಮೂಲಕ ನಾನು ಐಪಿಎಲ್ ಬೆಟ್ಟಿಂಗ್ ನಡೆಸಿರುವುದು ನಿಜ ಎಂದು ಹಗರಣದಲ್ಲಿ ಬಂಧಿತನಾಗಿ ಪೊಲೀಸರ ವಶದಲ್ಲಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ ಮೇಯಪ್ಪನ್ ತಪ್ಪೊಪ್ಪಿಕೊಂಡಿದ್ದರು. ಮೇಯಪ್ಪನ್ ಹೆಸರು ಕೂಡಾ ಮುದ್ಗಲ್ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.











Click it and Unblock the Notifications