ಸಿಖ್ ವಿರೋಧಿ ಪೋಸ್ಟ್: ಪ್ರಕರಣ ರದ್ದು ಕೋರಿ ಕಂಗನಾ ಹೈಕೋರ್ಟ್ ಮೊರೆ
ಮುಂಬೈ, ಡಿಸೆಂಬರ್ 10: ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಬಾಲಿವುಡ್ ನಟಿ ಕಂಗನಾ ರಣಾವತ್, ಈಗ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಂಗನಾ ಇನ್ಸ್ಟಾಗ್ರಾಂನಲ್ಲಿ ಸಿಖ್ ಸಮುದಾಯವನ್ನು ಖಲಿಸ್ತಾನಿಗಳಿಗೆ ಹೋಲಿಕೆ ಮಾಡಿ ಮಾಡಿರುವ ಪೋಸ್ಟ್ಗೆ ವಿರುದ್ದವಾಗಿ ಮುಂಬೈ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಈ ಎಫ್ಐಆರ್ ರದ್ದು ಮಾಡುವಂತೆ ಕೋರಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನು ವಕೀಲ ರಿಜ್ವಾನ್ ಸಿದ್ಧಿಕಿಯು ಕಂಗನಾ ಪರವಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಈ ಅರ್ಜಿಯಲ್ಲಿ ಕಂಗನಾ ರಣಾವತ್, "ನನ್ನ ಅಡಿಯಲ್ಲಿ ಸೆಕ್ಷನ್ 295A ಅಥವಾ ಬೇರೆ ಯಾವುದೇ ಪ್ರಕರಣಗಳು ವರದಿ ಮಾಡಬಾರದಿತ್ತು. ನವೆಂಬರ್ 21 ರಂದು ನಾನು ಮಾಡಿದ ಪೋಸ್ಟ್ ವಿರುದ್ಧವಾಗಿ ಪ್ರಕರಣ ದಾಖಲು ಮಾಡಿರುವುದು ಅವಮಾನಕರ ಹಾಗೂ ಅನುಚಿತವಾಗಿದೆ," ಎಂದು ಉಲ್ಲೇಖಿಸಿದ್ದಾರೆ.
"ಈ ಪೋಸ್ಟ್ ಕೃಷಿ ಕಾನೂನನ್ನು ರದ್ದು ಮಾಡಿದ ನಂತರವೂ ನಿಷೇಧಿತ ಸಂಘಟನೆಯ ಕಾರ್ಯ ನಿರ್ವಹಣೆ ಮಾಡುತ್ತಿರುವುದಕ್ಕೆ ವಿರುದ್ಧವಾಗಿ ಮಾಡಲಾಗಿದೆ. ಹಾಗೆಯೇ ಸಂವಿಧಾನಲ್ಲಿ ನಮಗೆ ನೀಡಿದ ವಾಕ್ ಸ್ವಾತಂತ್ರ್ಯದ ಹಕ್ಕಿಗೆ ಅನುಗಣವಾಗಿ ನಾನು ಪೋಸ್ಟ್ ಮಾಡಿದ್ದೇನೆ. ಈ ಹಿನ್ನೆಲೆಯಿಂದಾಗಿ ಈ ಎಫ್ಐಆರ್ ಅನ್ನು ರದ್ದು ಮಾಡಬೇಕು," ಎಂದು ಕೂಡಾ ಕಂಗನಾ ಪ್ರತಿಪಾದಿಸಿದ್ದಾರೆ.

"ನಾನು ನನ್ನ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯ ಪ್ರಕಾರವಾಗಿ ಪೋಸ್ಟ್ ಮಾಡಿದ್ದಕ್ಕಾಗಿ ನನ್ನ ವಿರುದ್ಧ ದುರುದ್ದೇಶಪೂರ್ವವಾಗಿ ಪ್ರಕರಣವನ್ನು ದಾಖಲು ಮಾಡಲಾಗಿದೆ," ಎಂದು ಮುಂಬೈ ಪೊಲೀಸರ ಎಫ್ಐಆರ್ ಕುರಿತಾಗಿ ಕಂಗನಾ ಆರೋಪ ಮಾಡಿದ್ದಾರೆ. "ಅಪರಾಧ ಮಾಡುವ ಉದ್ದೇಶದಿಂದಾಗಿ ಯಾವುದೇ ಕೆಲಸ ಮಾಡುವುದು ಅಪರಾಧವಾಗುತ್ತದೆ. ಇದು ಬಹು ಮುಖ್ಯ, ಆದರೆ ನನ್ನ ಪ್ರಕರಣದಲ್ಲಿ ಅಪರಾಧ ಮಾಡುವ ಉದ್ದೇಶ ಎಲ್ಲೂ ಇಲ್ಲ," ಎಂದಿದ್ದಾರೆ ಕಂಗನಾ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಮಾಡಿದ ಪೋಸ್ಟ್ ವಿರುದ್ಧವಾಗಿ ಮುಂಬೈ ಪೊಲೀಸರು ಭಾರತೀಯ ದಂಡಾ ಸಂಹಿತೆಯ ಸೆಕ್ಷನ್ 295A ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಮುಂಬೈನ ವಕೀಲರಾದ ಅಮರ್ಜೀತ್ ಸಿಂಗ್ ಕುಶ್ವಂತ್ಸಿಂಗ್ ಸಂಧು, ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ಜಸ್ಪಾಲ್ ಸಿಂಗ್ ಸಿದ್ಧು ಕಂಗನಾ ರಣಾವತ್ ವಿರುದ್ಧ ನೀಡಿರುವ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಎಫ್ಐಆರ್ ಅನ್ನು ದಾಖಲು ಮಾಡಿದ್ದಾರೆ. ಈಗ "ತನ್ನ ಹಕ್ಕನ್ನು ರಕ್ಷಿಸಿ, ನನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಮಾಡಿ," ಎಂದು ಕೋರಿ ಕಂಗನಾ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆಯು ಮುಂದಿನ ವಾರ ನಡೆಯುವ ಸಾಧ್ಯತೆ ಇದೆ.
ನಿರಂತರ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕಂಗನಾ
ಬಾಲಿವುಡ್ ಕ್ವೀನ್ ಎಂದು ಕರೆಸಿಕೊಂಡಿರುವ, ಇತ್ತೀಚೆಗೆ ಪದ್ಮಶ್ರೀ ಪುರಸ್ಕಾರವನ್ನು ತನ್ನ ಮುಡಿಗೇರಿಸಿಕೊಂಡ ಕಂಗನಾ ರಣಾವತ್ ನಿರಂತರವಾಗಿ ತನ್ನ ವಿವಾದಾತ್ಮಕ ಹೇಳಿಕೆಯ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್ ಮಾಡಿದ ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿದೆ. "ಖಲೀಸ್ತಾನಿಗಳು ಇಂದು ಸರ್ಕಾರದ ಕೈಗಳನ್ನು ತಿರುವುವ ಕೆಲಸವನ್ನು ಮಾಡುತ್ತಿರಬಹುದು. ಆದರೆ ಆ ಒಬ್ಬ ಮಹಿಳೆಯನ್ನು ಯಾರೊಬ್ಬರೂ ಮರೆಯುವಂತಿಲ್ಲ. ಅದೊಬ್ಬ ಮಹಿಳಾ ಪ್ರಧಾನಮಂತ್ರಿಯು ಅಂಥವರನ್ನು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ಸರಿಯಾಗಿ ತುಳಿದಿದ್ದಾರೆ. ಅವರನ್ನು ಸೊಳ್ಳೆಗಳಂತೆ ತುಳಿದು ಹಾಕುವುದಕ್ಕೆ ತಮ್ಮ ಜೀವವನ್ನೂ ಪಣಕ್ಕಿಟ್ಟಿದ್ದರು. ಆದರೆ ದೇಶವು ಇಬ್ಭಾಗವಾಗುವುದಕ್ಕೆ ಬಿಡಲಿಲ್ಲ. ಖಲೀಸ್ತಾನಿಗಳು ಇಂದಿಗೂ ಆಕೆಯ ಹೆಸರನ್ನು ಕೇಳಿದರೆ ಸಾಕು ಬೆವರುತ್ತಾರೆ, ಅವರಿಗೆ ಅಂಥ ಗುರು ಬೇಕು," ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವಾದಾದ್ಮಕ ಹೇಳಿಕೆಯನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. "ಭಾರತಕ್ಕೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ 1947 ಅಲ್ಲ. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ," ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಇನ್ನು ಮಹಾತ್ಮ ಗಾಂಧಿಯನ್ನು ಗುರಿಯಾಗಿಸಿಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications