ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ: ಅಣ್ಣಾ ಹಜಾರೆ
ಮುಂಬೈ, ಜುಲೈ 09: ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ವಿಶೇಷ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದು ಆತಂಕ ಸೃಷ್ಟಿಸಿದೆ.
ಕಾಂಗ್ರೆಸ್ ಮುಖಂಡ ಪವನ್ ರಾಜೆ ನಿಂಬಾಳ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮುಂಬೈಯ ವಿಶೇಷ ನ್ಯಾಯಾಲಯದೆದುರು ಸಾಕ್ಷಿಯಾಗಿ ಹಾಜರಾದ ಅಣ್ಣಾ ಹಜಾರೆ, ವಿಚಾರಣೆಯ ಸಂದರ್ಭದಲ್ಲಿ ತಮಗೂ ಕೊಲೆ ಬೆದರಿಕೆ ಬಂದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಾವು ಪೊಲೀಸರಿಗೆ ದೂರನ್ನೂ ನೀಡಿರುವುದಾಗಿ ಅವರು ಹೇಳಿದ್ದಾರೆ.
2006 ರಲ್ಲಿ ಕಾಂಗ್ರೆಸ್ ಮುಖಂಡ ಪವನ್ ರಾಜೆ ನಿಂಬಾಳ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಎನ್ ಸಿಪಿ ನಾಯಕ ಪದಮ್ಸಿನ್ಹ ಪಾಟಿಲ್ ಮುಖ್ಯ ಆರೋಪಿಯಾಗಿದ್ದಾರೆ. ಅವರು ಓಸ್ಮಾಬಾದ್ ಮೂಲದ ಸಕ್ಕರೆ ಕಾರ್ಖಾನೆಯೊಂದರಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದರು. ಅವರ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಅಣ್ಣಾ ಹಜಾರೆ ಅವರು ಮಾತನಾಡಿದ್ದೇ ಅವರ ಮೇಲೆ ಗುರಿಯಿಟ್ಟಿರುವುದಕ್ಕೆ ಕಾರಣ ಎಂದು ಸ್ವತಃ ಅಣ್ಣಾ ಹಜಾರೆ ಹೇಳಿಕೊಂಡಿದ್ದಾರೆ.

ತಮ್ಮ ಮೇಲೆ ಕೊಲೆ ಬೆದರಿಕೆಯಿದೆ, ಕೆಲವರು ತಮ್ಮನ್ನು ಕೊಲ್ಲಲು ಕಾಂಟ್ರಾಕ್ಟ್ ಪಡೆದಿದ್ದಾರೆ ಎಂದು ಆರೋಪಿಸಿರುವ ಹಜಾರೆ, ಈ ಕುರಿತು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಅವರಿಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ದೂರಿದ್ದಾರೆ.












Click it and Unblock the Notifications