#ಮಿಟೂ : ವಿನ್ತಾ ನಂದಾ ವಿರುದ್ಧ ಅಲೋಕ್ ನಾಥ್ ಮಾನನಷ್ಟ ಮೊಕದ್ದಮೆ
ಮುಂಬೈ, ಅಕ್ಟೋಬರ್ 13 : ಕಳೆದ ಹತ್ತು ಹನ್ನೆರಡು ದಿನಗಳಿಂದ ಸುನಾಮಿಯಂತೆ ಅಪ್ಪಳಿಸುತ್ತಿದ್ದ #MeToo ಅಭಿಯಾನ, ಆರೋಪಕ್ಕೊಳದಾದವರು ಮಾನನಷ್ಟ ಮೊಕದ್ದಮೆ ಹಾಕುವುದರೊಂದಿಗೆ ಕಾನೂನು ಹೋರಾಟಕ್ಕೆ ತೆರೆದುಕೊಂಡಿದೆ.
ಹಿಂದಿ ಚಿತ್ರರಂಗದಲ್ಲಿ 'ಸಂಸ್ಕಾರಿ' ಎಂದೇ ಖ್ಯಾತರಾಗಿರುವ, ಸೌಮ್ಯ ಪಾತ್ರಗಳನ್ನೇ ಮಾಡಿ ಜನಮಾನಸದಲ್ಲಿ ನೆಲೆಸಿರುವ 72ರ ಹರೆಯದ ಹಿರಿಯ ನಟ ಅಲೋಕ್ ನಾಥ್ ಅವರು, ತಮ್ಮ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿರುವ ಬರಹಗಾರ್ತಿ ವಿನ್ತಾ ನಂದಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ವಿನ್ತಾ ನಂದಾ ಅವರು, ತಮ್ಮ ಮೇಲೆ ಇಪ್ಪತ್ತು ವರ್ಷಗಳ ಹಿಂದೆ ಅಲೋಕ್ ನಾಥ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ನಂತರ, ಅವರ ಮೇಲೆ ಅತ್ಯಾಚಾರವಾಗಿರಬಹುದು, ಆದರೆ ಅತ್ಯಾಚಾರ ಮಾಡಿದ್ದು ನಾನಲ್ಲ ಎಂದು ಅಲೋಕ್ ನಾಥ್ ಅವರು ತಿರುಗೇಟು ನೀಡಿದ್ದರು.
ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ
ವಿನ್ತಾ ನಂದಾ ಅವರ ಅತ್ಯಾಪ್ತ ಸ್ನೇಹಿತೆಯಾಗಿರುವ ಮತ್ತು ಅಲೋಕ್ ನಾಥ್ ಅವರ ಹೆಂಡತಿಯಾಗಿರುವ ಆಶು ಸಿಂಗ್ ಅವರು, ನಾನು ಅತ್ಯಾಚಾರ ನಡೆದಿರುವ ಬಗ್ಗೆ ಏನನ್ನೂ ಹೇಳುವುದಿಲ್ಲ ಅಥವಾ ಏನನ್ನೂ ಮಾಡಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
ತನಿಖೆಗೆ ಆದೇಶಿಸಲು ಅಲೋಕ್ ಪತ್ನಿ ಮನವಿ
ಇದೀಗ, ಆಶು ಸಿಂಗ್ ಅವರು, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 155 ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 (ಮಾನನಷ್ಟ), 500 (ಮಾನನಷ್ಟ ಆರೋಪಕ್ಕೆ ಶಿಕ್ಷೆ), 34 (ಇತರರಿಂದಲೂ ದುರುದ್ದೇಶಪೂರಿತ ಆರೋಪ) ಮತ್ತು 114ರ ಅಡಿಯಲ್ಲಿ, ವಿನ್ತಾ ನಂದಾ ವಿರುದ್ಧ ನೀಡಲಾಗಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಅಂಬೋಲಿ ಪೊಲೀಸರಿಗೆ ಆದೇಶ ನೀಡಬೇಕೆಂದು ಮುಂಬೈನ ಅಂಧೇರಿ ಕೋರ್ಟಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕವಾಗಿ ಖ್ಯಾತ ನಟರಾಗಿರುವ ತಮ್ಮ ಗಂಡನ ಗೌರವಕ್ಕೆ ಚ್ಯುತಿ ಬಂದಿದೆ ಎಂದು ಆಶು ಸಿಂಗ್ ಅವರು ಮಾನನಷ್ಟ ಮೊಕದ್ದಮೆ ಹೂಡುವುದರೊಂದಿಗೆ ಮೀಟೂ ಅಭಿಯಾನ ಕಾನೂನು ಹೋರಾಟಕ್ಕೆ ಸಿದ್ಧವಾಗಬೇಕಾಗಿದೆ.
ರಘು ದೀಕ್ಷಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಗಾಯಕ ನೀಡಿದ ಸ್ಪಷ್ಟನೆಗಳೇನು?
ಅಪ್ಪನೆಂದರೆ ಹೀಗಿರಬೇಕು ಎಂಬಂತಿದ್ದ ಅಲೋಕ್
ಮೈನೆ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೈ ಕೌನ್ ಮುಂತಾದ ಚಲನಚಿತ್ರಗಳಲ್ಲಿ, ಬುನಿಯಾದ್ ನಂಥ ಧಾರಾವಾಹಿಗಳಲ್ಲಿ ಮನೋಜ್ಞ ಪಾತ್ರ ವಹಿಸಿ, ಮಮತಾಮಯಿ ಅಪ್ಪನೆಂದರೆ ಹೀಗಿರಬೇಕು ಎಂದುಕೊಳ್ಳುವಂತೆ ಪರಿಣಾಮಕಾರಿಯಾಗಿ ಪಾತ್ರ ನಿರ್ವಹಿಸಿದ್ದ ಅಲೋಕ್ ನಾಥ್ ಅವರ ವಿರುದ್ಧ ವಿನ್ತಾ ನಂದಾ ಅವರು ಮಾತ್ರವಲ್ಲ, ನಟಿ ಸಂಧ್ಯಾ ಮೃದುಲ್ ಮತ್ತು ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಖ್ಯಾತ ನಟಿ ಕೂಡ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಧೈರ್ಯವಾಗಿ ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ದಪ್ಪ, ಕೊಳಕ ಮಹಿಳೆಯರಿಂದ ಲೈಂಗಿಕ ದೌರ್ಜನ್ಯದ ಆರೋಪ : ಅಭಿಜಿತ್
ಅತ್ಯಾಚಾರವೆಸಗಲು ಬಂದರು, ನಗ್ನರಾದರು
ನಟಿ ಸಂಧ್ಯಾ ಮೃದುಲ್ ಅವರು, ಕೊಡೈಕೆನಾಲ್ ನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ತಮ್ಮ ತಂದೆಯ ಪಾತ್ರ ವಹಿಸುತ್ತಿದ್ದ ಅಲೋಕ್ ಕುಮಾರ್ ಅವರು ಕುಡಿದ ಮತ್ತಿನಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದರು ಮತ್ತು ನಂತರ ತಮ್ಮ ಬಗ್ಗೆಯೇ ಕೆಟ್ಟದಾಗಿ ಮಾತಾಡಿದ್ದರು ಎಂದು ಆರೋಪ ಹೊರಿಸಿದ್ದಾರೆ. ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ನಟಿ, ಹಮ್ ಸಾಥ್ ಸಾಥ್ ಹೈ ಚಿತ್ರೀಕರಣ ಸಂದರ್ಭದಲ್ಲಿ ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿ ಅಲೋಕ್ ನಾಥ್ ಅವರು ತಮ್ಮ ಎದುರೇ ನಗ್ನರಾಗಿದ್ದರಲ್ಲದೆ, ತಮ್ಮ ಮೈಯನ್ನು ಮುಟ್ಟಲು ಬಂದರು ಎಂದು ಗುರುತರ ಆರೋಪ ಹೊರಿಸಿದ್ದಾರೆ.
ಹೈಪ್ರೊಫೈಲ್ ಕಾಮುಕರಿಗೆ ಹೆಡೆಮುರಿಕಟ್ಟಲು ಸಜ್ಜಾಗಿದೆ ಸಮಿತಿ
ಇದನ್ನು ನ್ಯಾಯಾಲಯ ಹೇಗೆ ನಿಭಾಯಿಸುತ್ತದೆ?
ಯಾವ ಮಹಿಳೆ ತಾನೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಅಥವಾ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಲಾಗಿದೆ ಎಂದು ಇಪ್ಪತ್ತು ವರ್ಷಗಳ ನಂತರ ದೂರು ಸಲ್ಲಿಸುತ್ತಾರೆ? ಈ ಆರೋಪದ ಸತ್ಯಾಸತ್ಯತೆ ಏನೇ ಇರಲಿ, ಈ ವಿವಾದ ಕೋರ್ಟ್ ಮೆಟ್ಟಿಲೇರಿದ ಮೇಲೆ ಆರೋಪವನ್ನು ಸಾಬೀತು ಮಾಡಲೇಬೇಕಾಗುತ್ತದೆ. ಆದರೆ, ಇಪ್ಪತ್ತು ವರ್ಷದ ಹಿಂದೆ ನಡೆದ ಘಟನೆಯನ್ನು ಈಗ ಸಾಬೀತು ಮಾಡಲು ಹೇಗೆ ಸಾಧ್ಯ? ಹೇಳಿಕೆ ನೀಡಿದ್ದೊಂದನ್ನು ಬಿಟ್ಟರೆ ಆರೋಪ ಸಾಬೀತುಪಡಿಸಲು ಸಾಕ್ಷ್ಯವೇನೂ ಉಳಿದುಕೊಂಡಿಲ್ಲ. ಹೇಳಿಕೆಯೊಂದರ ಆಧಾರದ ಮೇಲೆ ಆರೋಪ ಸಾಬೀತುಪಡಿಸಲು ಸಾಧ್ಯವೆ? ಈ ವಿಚಿತ್ರವಾದ ಮತ್ತು ಸಂದಿಗ್ಧ ಸ್ಥಿತಿಯನ್ನು ನ್ಯಾಯಾಲಯ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ತನುಶ್ರೀ ದತ್ತಾರಿಂದ ಆರಂಭವಾದ ಮೀಟೂ
ಖ್ಯಾತ ಹಿಂದಿ ಚಿತ್ರನಟ ನಾನಾ ಪಾಟೇಕರ್ ವಿರುದ್ಧ ಒಂದಾನೊಂದು ಕಾಲದ ಸುಂದರಿ, ನಟಿ ತನುಶ್ರೀ ದತ್ತಾ ಅವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸುತ್ತಿದ್ದಂತೆ, ತುಂಬಿದ ಅಣೆಕಟ್ಟೆಯ ದ್ವಾರಗಳು ತೆರೆದಂತೆ ಪ್ರವಾಹೋಪಾದಿಯಲ್ಲಿ ಇತರ ನಟಿಯರು, ಪತ್ರಕರ್ತೆಯರು ಕೂಡ ತಮ್ಮ ವಿರುದ್ಧ ನಡೆದ ದೌರ್ಜನ್ಯದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದು ದೇಶದಲ್ಲಿ ಆಂದೋಲನವಾಗಿ ಪರಿವರ್ತಿತವಾಗಿದೆ. ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ನ್ಯಾಯಾಧೀಶರುಗಳ ಸಮಿತಿಯೊಂದನ್ನು ಅಧ್ಯಯನಕ್ಕಾಗಿ ರಚಿಸಿದೆ.
ಇನ್ನೂ ಹಲವರ ವಿರುದ್ಧ ಮೀಟೂ ದಾಳಿ
ಕ್ವೀನ್ ಚಿತ್ರದ ನಿರ್ದೇಶನದಿಂದ ಖ್ಯಾತಿಯ ಉತ್ತುಂಗವೇರಿದ ಬಾಲಿವುಡ್ ನಿರ್ದೇಶಕ ವಿಕಾಸ್ ಬಾಹ್ಲ್, ಹೀರೋ, ಕರ್ಮಾದಂಥ ಸೂಪರ್ ಹಿಟ್ ನೀಡಿದ ಖ್ಯಾತ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್, ಏಷ್ಯನ್ ಏಜ್ ಪತ್ರಿಕೆಯ ಮಾಜಿ ಸಂಪಾದಕ ಮತ್ತು ಕೇಂದ್ರ ಸಚಿವ ಎಂಜೆ ಅಕ್ಬರ್, ಹಲವಾರು ಸೂಪರ್ ಫ್ಲಾಪ್ ಚಿತ್ರ ನಿರ್ದೇಶಿಸಿರುವ ಸಾಜಿದ್ ಖಾನ್, ಖ್ಯಾತ ಸಾಹಿತಿ ಸುಹೇಲ್ ಸೇಠ್ ಮುಂತಾದವರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ವಿರುದ್ಧವೂ ಮೀಟೂ ಆರೋಪ ಕೇಳಿ ಬಂದಿದೆ. ಆದರೆ, ಅದಕ್ಕೆ ಅವರು ಕ್ಷಮೆಯನ್ನೂ ಕೇಳಿದ್ದಾರೆ. ಈ ಮೀಟು ಅಭಿಯಾನ ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ. ಇದಕ್ಕೆ ಹಲವಾರು ಖ್ಯಾತನಾಮರು ಬೆಂಬಲ ವ್ಯಕ್ತಪಡಿಸಿದ್ದಾರೆ, ಆರೋಪಿಗಳ ಚಿತ್ರದಿಂದ ಕೆಲವರು ಹೊರಗೂ ಬಂದಿದ್ದಾರೆ.