ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕಳೆದುಕೊಂಡ ಅಜಿತ್ ಪವಾರ್
ಮುಂಬೈ, ನವೆಂಬರ್ 23 : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಅವರನ್ನು ತೆಗೆದುಹಾಕಲಾಗಿದೆ. ನವೆಂಬರ್ 30ರಂದು ಸರ್ಕಾರ ಬಹುಮತ ಸಾಬೀತು ಮಾಡಬೇಕು.
ಶನಿವಾರ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಅಜಿರ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಿಜೆಪಿ-ಎನ್ಸಿಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.
"ಬಿಜೆಪಿಗೆ ಬೆಂಬಲ ನೀಡುವ ಅಜಿತ್ ಪವಾರ್ ತೀರ್ಮಾನ ವೈಯಕ್ತಿಕ. ಅದು ಎನ್ಸಿಪಿ ಪಕ್ಷದ ತೀರ್ಮಾನವಲ್ಲ" ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಈ ಹೇಳಿಕೆ ಹೊರಬಂದ ಕೆಲವೇ ಕ್ಷಣಗಳಲ್ಲಿ ಅಜಿತ್ ಪವಾರ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕಳೆದುಕೊಂಡಿದ್ದಾರೆ.

54 ಶಾಸಕರ ಬೆಂಬಲ ವಿರುವ ಪತ್ರವನ್ನು ಅಜಿತ್ ಪವಾರ್ ರಾಜ್ಯಪಾಲರಿಗೆ ನೀಡಿದ್ದಾರೆ ಎಂಬ ಆರೋಪವಿದೆ. ಶಿವಸೇನೆ-ಎನ್ಸಿಪಿ ಮೈತ್ರಿ ಬಗ್ಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದ ಅಜಿತ್ ಪವಾರ್ ಬಿಜೆಪಿ ಜೊತೆ ಕೈ ಜೋಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
"ಅಜಿತ್ ಪವಾರ್ ಜಾರಿ ನಿರ್ದೇಶನಾಲಯದ ತನಿಖೆಗೆ ಹೆದರಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ" ಎಂದು ಶರದ್ ಪವಾರ್ ಆರೋಪಿಸಿದ್ದಾರೆ. ಅಜಿತ್ ಪವಾರ್ ಜೊತೆಗೆ ಎಷ್ಟು ಜನ ಶಾಸಕರಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
60 ವರ್ಷದ ಅಜಿತ್ ಪವಾರ್ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅಣ್ಣನ ಮಗ. ಶರದ್ ಪವಾರ್ ಬಳಿಕ ಎನ್ಸಿಪಿಯನ್ನು ಅಜಿತ್ ಪವಾರ್ ಮುನ್ನೆಡಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರನ್ನು ರಾಜಕೀಯವಾಗಿ ಬೆಳೆಸಲು ಆರಂಭಿಸಿದಾಗ ಅಜಿತ್ ಪವಾರ್ ಬೇರೆ ದಾರಿ ಹಿಡಿದರು. ಬಿಜೆಪಿಗೆ ಬೆಂಬಲ ನೀಡಿ ಉಪ ಮುಖ್ಯಮಂತ್ರಿಯಾದರು.












Click it and Unblock the Notifications