ಪೋಷಕರ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಮನೆಗೆ ನುಗ್ಗಿ ಹೊತ್ತೊಯ್ದ ಚಿರತೆ
ಚಂದ್ರಾಪುರ್ (ಮಹಾರಾಷ್ಟ್ರ), ಜೂನ್ 2: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಭಾನುವಾರ ಚಿರತೆಯೊಂದಕ್ಕೆ ಒಂಬತ್ತು ತಿಂಗಳ ಮಗು ಬಲಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯ ಅರ್ಧ ಕಿಲೋ ಮೀಟರ್ ದೂರದಲ್ಲಿ ಮಗುವಿನ ದೇಹ ಪತ್ತೆ ಆಗಿದೆ.
"ಗಂಡು ಮಗುವೊಂದು ತನ್ನ ಪೋಷಕರ ಪಕ್ಕದಲ್ಲಿ ಮಲಗಿತ್ತು. ಕಾಡಿಗೆ ಸಮೀಪ ಇದ್ದ ಮನೆಯೊಳಗಿ ನುಗ್ಗಿ, ಮಗುವನ್ನು ಹೊತ್ತೊಯ್ದಿದೆ. ಇದು ಯಾರ ಗಮನಕ್ಕೂ ಬಂದಿಲ್ಲ" ಎಂದು ವಲಯದ ಅರಣ್ಯಾಧಿಕಾರಿ ಅರುಣ್ ಗೊಂಡ್ ಅವರು ಮಾಹಿತಿ ನೀಡಿದ್ದಾರೆ.
ಆಹಾರ ಹುಡುಕಿ ಬಂದು ವಿದ್ಯುತ್ ಕಂಬ ಏರಿದ ಚಿರತೆ ಅಲ್ಲೇ ಸಾವು
ಯಾವಾಗ ಮಗು ನಾಪತ್ತೆ ಆಗಿದೆ ಎಂದು ಗೊತ್ತಾಯಿತೋ ಆಗ ಪೋಷಕರು ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಮಗುವಿನ ಶವವು ಪತ್ತೆ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯುವ ಸಲುವಾಗಿ ಅರಣ್ಯಾಧಿಕಾರಿಗಳು ಬೋನು ಹಾಗೂ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಈ ಘಟನೆಯ ಬಳಿಕ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯ ಮಾಡಲಾಗಿದೆ.