ಬ್ಲ್ಯಾಕ್ ಫಂಗಸ್ ಸೋಂಕಿಗೆ ಪುಣೆಯಲ್ಲಿ 27 ಮಂದಿ ಬಲಿ, 564 ಮಂದಿ ಆಸ್ಪತ್ರೆಗೆ ದಾಖಲು
ಮುಂಬೈ, ಮೇ 25: ಪುಣೆಯಲ್ಲಿ ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್ ಫಂಗಸ್) ಸೋಂಕಿನಿಂದಾಗಿ ಈವರೆಗೆ 27 ಮಂದಿ ಸಾವನ್ನಪ್ಪಿದ್ದು ಒಟ್ಟು 564 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಎಂದೂ ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್ ಗಂಭೀರ ಸೋಂಕಾಗಿದ್ದು ಇದು ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಹಲವಾರು ಕೋವಿಡ್ ಸೋಂಕಿತರಲ್ಲಿ ಕಂಡುಬಂದಿದೆ.
ಬ್ಲ್ಯಾಕ್ ಫಂಗಸ್ನ ಶಂಕಿತ ಪ್ರಕರಣಗಳನ್ನು ಗುರುತಿಸುವ ಸಲುವಾಗಿ, ಪುಣೆ ಜಿಲ್ಲಾಡಳಿತವು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ನಿಂದ ಗುಣಮುಖರಾದವರ ಪರೀಕ್ಷೆ ನಡೆಸುತ್ತಿದ್ದಾರೆ. ಅವರು ಸರಿಯಾದ ಚಿಕಿತ್ಸೆ ಪಡೆದಿದ್ದಾರೆಯೇ ಎಂದು ಖಾತರಿಪಡಿಸುವ ಕಾರ್ಯವನ್ನೂ ಕೂಡಾ ಮಾಡುತ್ತಿದೆ.
ಜಿಲ್ಲಾಡಳಿತ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಜ್ಯದ ಸಾಸೂನ್ ಜನರಲ್ ಆಸ್ಪತ್ರೆ ಸೇರಿದಂತೆ ಇಲ್ಲಿಯ 43 ಆಸ್ಪತ್ರೆಗಳಿಂದ 591 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಸಿಂಹ ದೇಶ್ಮುಖ್, "591 ಪ್ರಕರಣಗಳಲ್ಲಿ, ಪುಣೆ ಜಿಲ್ಲೆಯದ್ದು 499 ಸೋಂಕು ಪ್ರಕರಣಗಳು, ಉಳಿದವು ಇತರ ಜಿಲ್ಲೆಗದ್ದಾಗಿದ್ದು, ರೋಗಿಗಳು ಚಿಕಿತ್ಸೆ ಪಡೆಯಲು ಇಲ್ಲಿಗೆ ಆಗಮಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ರೋಗಿಗಳಲ್ಲಿ 564 ರೋಗಿಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಚೇತರಿಸಿಕೊಂಡಿದ್ದಾರೆ" ಎಂದು ಕೂಡಾ ಮಾಹಿತಿ ನೀಡಿರುವ ವಿಜಯಸಿಂಹ ದೇಶ್ಮುಖ್, "ಇದಲ್ಲದೆ, ಜಿಲ್ಲೆಯಲ್ಲಿ ಈವರೆಗೆ ಕನಿಷ್ಠ 27 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ಕನಿಷ್ಠ 198 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ದೀನನಾಥ್ ಮಂಗೇಶ್ಕರ್ ಆಸ್ಪತ್ರೆ, ರೂಬಿ ಹಾಲ್ ಕ್ಲಿನಿಕ್, ಯಶ್ವಂತರಾವ್ ಚವಾನ್ ಸ್ಮಾರಕ ಆಸ್ಪತ್ರೆ ಮತ್ತು ನೋಬಲ್ ಆಸ್ಪತ್ರೆಯಲ್ಲಿ ಕ್ರಮವಾಗಿ 71, 42, 40, ಮತ್ತು 36 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದೆ" ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಹಂಚಿಕೊಂಡ ಮಾಹಿತಿಯ ಪ್ರಕಾರ, ಕನಿಷ್ಠ 195 ರೋಗಿಗಳು 18 ರಿಂದ 45 ವರ್ಷದೊಳಗಿನವರಾಗಿದ್ದಾರೆ. 247 ಮಂದಿ 45 ರಿಂದ 60 ವರ್ಷದೊಳಗಿನವರಾಗಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ಬ್ಲ್ಯಾಕ್ ಫಂಗಸ್ ಸೋಂಕಿತರು ಕೂಡಾ ಜಿಲ್ಲೆಯಲ್ಲಿದ್ದಾರೆ.
351 ಪ್ರಕರಣಗಳಲ್ಲಿ, ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಸ್ಟೀರಾಯ್ಡ್ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, 383 ರೋಗಿಗಳು ಮಧುಮೇಹ, 105 ರೋಗಿಗಳು ರೋಗನಿರೋಧಕ ಸಮಸ್ಯೆಯಿಂದ, 69 ರೋಗಿಗಳು ಇತರೆ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ.
302 ಪ್ರಕರಣಗಳಲ್ಲಿ, ರೋಗಿಗಳಿಗೆ ಬ್ಲ್ಯಾಕ್ ಫಂಗಸ್ ಸೋಂಕು ಆರಂಭಕ್ಕೂ ಮುನ್ನ ಆಕ್ಸಿಜನ್ ವ್ಯವಸ್ಥೆಯಡಿ ಇದ್ದರು ಎನ್ನಲಾಗಿದೆ.
"ನಾವು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ ಕೋವಿಡ್ನಿಂದ ಚೇತರಿಸಿಕೊಂಡವರನ್ನು ಪರೀಕ್ಷಿಸಲು ಆರಂಭಿಸಿದ್ದೇವೆ. ಸಮಯಕ್ಕೆ ಸರಿಯಾಗಿ ಸೋಂಕು ಪತ್ತೆಯಾದರೆ, ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬಹುದು ಎಂಬುದು ಇದರ ಹಿಂದಿನ ಉದ್ದೇಶ" ಎಂದು ದೇಶ್ಮುಖ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications