ಶಿಶಿಲ ಗ್ರಾಮಕ್ಕೆ ತಾನೇ ತೂಗು ಸೇತುವೆಯಾದ ಬಾಲಕೃಷ್ಣನ ಕಥೆ
ಮಂಗಳೂರು, ಅಕ್ಟೋಬರ್ 06: ಮಳೆಗಾಲದಲ್ಲಿ ಆ ಗ್ರಾಮ ಅಕ್ಷರಶಃ ದ್ವೀಪವಾಗುತ್ತದೆ. ಊರ ಮಧ್ಯೆ ಹರಿಯೋ ಚಿಕ್ಕ ನದಿ ಉಕ್ಕಿ ಹರಿಯುವ ಕಾರಣ ಇಲ್ಲಿ ಜನ ಹೊರ ಪ್ರಪಂಚದ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ.
ಹಲವಾರು ವರ್ಷಗಳಿಂದ ಸೇತುವೆಗಾಗಿ ಜನಪ್ರತಿನಿಧಿಗಳ ಬಳಿ ಮನವಿ ಕೊಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಇದರಿಂದ ಬೇಸತ್ತ ಗ್ರಾಮದ ಯುವಕನೋರ್ವ ಟೊಂಕ ಕಟ್ಟಿ ತನ್ನ ಪ್ರಯತ್ನದಿಂದ ಇದೀಗ ಆ ನದಿಗೆ ತಾತ್ಕಲಿಕ ಸೇತುವೆ ನಿರ್ಮಿಸಿದ್ದಾನೆ.
ದಕ್ಷಿಣಕನ್ನಡ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮ ಪೊಲಿಪು ಎಂಬ ಪುಟ್ಟ ಕುಗ್ರಾಮ .ದಟ್ಟ ಅರಣ್ಯಗಳ ಮಧ್ಯದಲ್ಲಿರುವ ಈ ಶಿಶಿಲ ಗ್ರಾಮದ ಮೂಲಕ ಕಪಿಲ ನದಿ ಹರಿದು ಹೋಗುತ್ತದೆ.

ಶಿಶಿಲ ಗ್ರಾಮದ ಜನತೆಗೆ ಸಮಸ್ಯೆಯಗಳ ಆಗರ
ಶಿಶಿಲ ಗ್ರಾಮ ಭೌಗೋಳಿಕವಾಗಿ ಪ್ರಾಕೃತಿಕ ಸೊಬಗಿನಿಂದ ಕೂಡಿದ್ದರೂ ಇಲ್ಲಿಯ ಜನ ಮಾತ್ರ ಸಮಸ್ಯೆಗಳ ಆಗರದ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲ ಆರಂಭವಾಯಿತೆಂದರೆ ಇಲ್ಲಿಯ ಕಪಿಲಾ ನದಿ ಮೈ ತುಂಬಿ ಹರಿಯ ತೊಡಗುವುದರಿಂದ ಇಲ್ಲಿಯ ಜನ ಹೊಳೆ ದಾಟಲು ಹರ ಸಾಹಸ ಪಡುತ್ತಾರೆ.

ಹೊಳೆಯನ್ನೇ ರಸ್ತೆಯನ್ನಾಗಿ ಬಳಸುವ ಗ್ರಾಮಸ್ಥರು
ಬೇಸಿಗೆ ಕಾಲದಲ್ಲಿ ಈ ಹೊಳೆಯಲ್ಲಿ ನೀರಿನ ಹರಿವು ಕುಸಿಯುವ ಕಾರಣ ಹೊಳೆಯನ್ನೇ ರಸ್ತೆಯನ್ನಾಗಿ ಬಳಸುತ್ತಿರುವ ಈ ಗ್ರಾಮದ ಜನರಿಗೆ ಮಳೆಗಾಲ ಮಾತ್ರ ನರಕ ಸದೃಶ. ಭಾರೀ ಮಳೆ ಸುರಿಯವ ಪ್ರದೇಶವಾಗಿರುವ ಕಾರಣ ಮಳೆಗಾಲದಲ್ಲಿ ತುಂಬಿ ಹರಿಯುವ ಈ ಹೊಳೆಯನ್ನು ದಾಟಲಾಗದೆ, ತಮ್ಮ ನಿತ್ಯ ಅಗತ್ಯಗಳಿಗೆ ಸ್ಪಂದಿಸಲಾಗದೆ ಕೈ ಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಈ ಗ್ರಾಮಸ್ಥರದ್ದು.

ಪುಟ್ಟ ಸೇತುವೆ ನಿರ್ಮಿಸಿಕೊಡದ ಸರ್ಕಾರ
ಈ ಹೊಳೆಗೆ ಪುಟ್ಟದೊಂದು ಸೇತುವೆ ನಿರ್ಮಿಸಿಕೊಡುವಂತೆ ಕಳೆದ ಹಲವು ವರ್ಷಗಳಿಂದ ಈ ಭಾಗದ ಜನ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ನೀಡಿದ ಮನವಿಗಳಿಗೆ ಲೆಕ್ಕವಿಲ್ಲ.ಮತ ಪಡೆದು ಹೋದ ಜನಪ್ರತಿನಿಧಿಗಳು ಮಾತ್ರ ಮತ್ತೆ ಊರಿನ ಕಡೆ ತಲೆ ಹಾಕಲೇ ಇಲ್ಲ. ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಸೆಡ್ಡು ಹೊಡೆದ ಗ್ರಾಮದ ಯುವಕ ನೋರ್ವ ತನ್ನ ಸ್ವಂತ ಹಣದಲ್ಲೇ ತನ್ನದೇ ತಂತ್ರಜ್ಞಾನ ಅಳವಡಿಸಿ ಹೊಳೆಗೆ ತಾತ್ಕಾಲಿಕ ತೂಗು ಸೇತುವೆ ಕಟ್ಟಿದ್ದಾನೆ.ಪುಟ್ಟ ಅಂಗಡಿ ನಡೆಸುತ್ತಿರುವ ಬಾಲಕೃಷ್ಣ ರ ಛಲದ ಪರಿಣಾಮ ಜನ ಆತ ನಿರ್ಮಿಸಿದ ತಾತ್ಕಾಲಿಕ ತೂಗು ಸೇತುವೆಯನ್ನೆ ಅವಲಂಭಿಸಿದ್ದಾರೆ.

ಸ್ವಂತ ಕರ್ಚಿನಲ್ಲೇ ಸೇತುವೆ ನಿರ್ಮಾಣ
ಸುಮಾರು 35 ಮೀಟರ್ ಅಗಲವಾಗಿ ಹರಿಯುವ ಈ ಕಪಿಲ ಹೊಳೆಗೆ ಹಗ್ಗದ ಮೂಲಕ ಬಾಲಕೃಷ್ಣ ತಾತ್ಕಲಿಕ ತೂಗು ಸೇತುವೆ ನಿರ್ಮಿಸಿದ್ದಾರೆ. 20 ಅಡಿ ಎತ್ತರದಲ್ಲಿ ತೂಗು ಸೇತುವೆ ಇದ್ದು ಮಕ್ಕಳು,ಹಿರಿಯರು ಇದೇ ಸೇತುವೆಯನ್ನು ಬಳಸುತ್ತಿದ್ದಾರೆ. ಸುಮಾರು 30ಸಾವಿರ ರೂಪಾಯಿ ವೆಚ್ಚದಲ್ಲಿ ಬಾಲಕೃಷ್ಣ ಈ ಸೇತುವೆಯನ್ನು ನಿರ್ಮಿಸಿದ್ದಾರೆ.
ಈ ಹಿಂದೆ ಊರಿನ ಜನ ತಾತ್ಕಲಿಕವಾಗಿ ತಾತ್ಕಲಿಕ ಸೇತುವೆಯೊಂದನ್ನು ನಿರ್ಮಿಸಿದ್ದರು . ಆದರೆ ಮಳೆ ಹೆಚ್ಚಾಗುತ್ತಿದ್ದಂತೆ ನದಿ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗುತ್ತಿತ್ತು.ಸೇತುವೆಯ ಜೊತೆಗೆ ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗಿ ಹಲವರು ಪವಾಡ ಸದೃಶವಾಗಿ ಬದುಕುಳಿದ ನಿದರ್ಶನಗಳು ಇಲ್ಲಿವೆ. ಆದರೆ ಇದೀಗ ಬಾಲಕೃಷ್ಣ ನಿರ್ಮಿಸಿದ ತೂಗು ಸೇತುವೆ ಇಲ್ಲಿಯ ಜನರಿಗೆ ವರದಾನವಾಗಿ ಪರಿಣಮಿಸಿದೆ. ಮನವಿಗಳಿಗೆ ಸ್ಪಂದಿಸಿದೇ ಜನರ ಮನವಿಗಳನ್ನು ಕಸದ ರಾಶಿಗೆಸೆದ ಜನಪ್ರತಿನಿಧಿಗಳಿಗೆ ಬಾಲಕೃಷ್ಣ ಕೊಟ್ಟ ಉತ್ತರಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications