ಕರಾವಳಿಯಲ್ಲಿ ಬಿಜೆಪಿ ಸಂಸದರಿಂದ ಕೇರಳ ಮಾದರಿ ಪಾದಯಾತ್ರೆ
ಮಂಗಳೂರು, ಫೆಬ್ರವರಿ 15: ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿವೆ. ಆಭ್ಯರ್ಥಿಗಳ ಆಯ್ಕೆ, ಸೋಲು ಗೆಲುವಿನ ಲೆಕ್ಕಾಚಾರ ತಾರಕಕ್ಕೇರಿದೆ. ಈ ನಡುವೆ ಕರಾವಳಿಯಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ಕೈಯಲ್ಲಿದ್ದರೆ ಸುಳ್ಯ ಕ್ಷೇತ್ರ ಮಾತ್ರ ಬಿಜೆಪಿ ವಶದಲ್ಲಿದೆ. ಅಲ್ಲೂ 2013ರಲ್ಲಿ ಬಿಜೆಪಿ ಪ್ರಯಾಸದ ಜಯ ದಾಖಲಿಸಿತ್ತು. ಇನ್ನು ಉಡುಪಿ ಜಿಲ್ಲೆಯ ಚಿತ್ರಣ ಕೂಡ ಇದೇ ಆಗಿದೆ. ಇಲ್ಲಿಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರ ಕಾಂಗ್ರೆಸ್ ವಶದಲ್ಲಿದ್ದರೆ, ಕುಂದಾಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆದ್ದಿದ್ದರು (ಅವರೀಗ ಬಿಜೆಪಿಗೆ ಬಂದಿದ್ದಾರೆ). ಕಾರ್ಕಳ ಮಾತ್ರ ಬಿಜೆಪಿಯ ಹಿಡಿತದಲ್ಲಿದೆ.
ನವಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹಣೆ
ಆದರೆ ಈ ಬಾರಿಯ ಚಿತ್ರಣವನ್ನು ಬದಲಾಯಿಸಲು ಬಿಜೆಪಿ ನಾಯಕರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಅದಕ್ಕಾಗಿ ಕರಾವಳಿಯಲ್ಲಿ ತನ್ನ ಕಾರ್ಯಕರ್ತರನ್ನು ಚುರುಕುಗೊಳಿಸಲು ಬಿಜೆಪಿ ಮುಂದಾಗಿದೆ. ಮಾರ್ಚ್ ಮೊದಲ ವಾರದಲ್ಲಿ 4 ಮಂದಿ ಸಂಸದರ ನೇತೃತ್ವದಲ್ಲಿ ಕರಾವಳಿಯಲ್ಲಿ ಪಾದಯಾತ್ರೆ ಸಡೆಸಲು ಯೋಜನೆ ರೂಪಿಸಿದೆ.
ಹಿಂದು ಕಾರ್ಯಕರ್ತರ ಹತ್ಯೆ ಖಂಡಿಸಿ ಕೇರಳದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯ ಮಾದರಿಯಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಸಂಸದರ ಪಾದಯಾತ್ರೆ ಹಮ್ಮಿ ಕೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ.
ಇದಲ್ಲದೆ ಮಾರ್ಚ್ 6 ರಂದು ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಬೃಹತ್ ಸಮಾವೇಶದಲ್ಲಿ ಉತ್ತರ ಪ್ರದೆಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಕೊಡಗಿನ ಕುಶಾಲನಗರದಿಂದ ಸಂಸದ ಪ್ರತಾಪ್ ಸಿಂಹ, ಚಿಕ್ಕಮಗಳೂರಿನಿಂದ ಸಂಸದೆ ಶೋಭಾ ಕರಂದ್ಲಾಜೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಏಕಕಾಲಕ್ಕೆ ಮಾರ್ಚ್ 3 ರಂದು ಪಾದಯಾತ್ರೆ ಆರಂಭಿಸಲಿದ್ದಾರೆ. ಈ ಪಾದಯಾತ್ರೆ ಮಾರ್ಚ್ 6 ರಂದು ಮಂಗಳೂರಿನ ಸುರತ್ಕಲ್ ನಲ್ಲಿ ಸಂಪನ್ನಗೊಳ್ಳಲಿದೆ. ಈ ಪಾದಯಾತ್ರೆಯ ಸಮಾರೋಪದ ಭಾಗವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಕಮಲ ಮುಖಂಡರು ಮುಂದಾಗಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳ ಅಂತಿಮ ರೂಪುರೇಷೆ , ಫೆಬ್ರವರಿ 19 ರಿಂದ 3 ದಿನಗಳ ಕಾಲ ಕರಾವಳಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರವಾಸ ಸಂದರ್ಭದಲ್ಲಿ ಸಿದ್ಧಗೊಳ್ಳಲಿದೆ.
ಕರಾವಳಿ ಜಿಲ್ಲೆಗಳ ಪ್ರವಾಸ ಸಂದರ್ಭದಲ್ಲಿ ಅಮಿತ್ ಶಾ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಹೊನ್ನಾವರದ ಪರೇಶ್ ಮೆಸ್ತಾ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.