ಎತ್ತಿನಹೊಳೆ ಯೋಜನೆ : ಮಂಗಳೂರಲ್ಲಿ ಗುರುವಾರ ಬೃಹತ್ ಪ್ರತಿಭಟನೆ
ಮಂಗಳೂರು, ಅಕ್ಟೋಬರ್ 14 : ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಕ್ಟೋಬರ್ 15ರಂದು ಪಂಪ್ ವೆಲ್ ವೃತ್ತವನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ.
'ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಅಕ್ಟೋಬರ್ 15ರ ಗುರುವಾರ ವಿವಿಧ ಸಂಘಟನೆಗಳ ಜೊತೆ ಪಂಪ್ ವೆಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲಿದ್ದೇವೆ' ಎಂದು ಏತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿಯ ದಿನೇಶ್ ಹೊಳ್ಳ ಅವರು ಹೇಳಿದ್ದಾರೆ. [ಚಿತ್ರಗಳು : ನೇತ್ರಾವತಿ ಉಳಿಸಲು ಬೃಹತ್ ಪ್ರತಿಭಟನೆ]

ರಸ್ತೆ ತಡೆ ಬಗ್ಗೆ ಈಗಾಗಲೇ ಜಿಲೆಯ ಜನರಿಗೆ ಮಾಹಿತಿ ನೀಡಲಾಗಿದೆ. ವಿವಿಧ ಸ್ಥಳಗಳಲ್ಲಿ ಬ್ಯಾನರ್ ಕಟ್ಟಿ, ಭಿತ್ತಿಪತ್ರಗಳನ್ನು ಹಂಚಿ ಜನರಿಗೆ ಈ ಬಂದ್ ಬಗ್ಗೆ ಮಾಹಿತಿ ತಲುಪಿಸಲಾಗಿದೆ. ವಿವಿಧ ಸಂಘಟನೆಗಳು ಇದಕ್ಕೆ ಬೆಂಬಲ ನೀಡಿದ್ದು, ಉಪ್ಪಿನಂಗಡಿಯಲ್ಲಿ ನಡೆದಂತೆ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. [ಎತ್ತಿನ ಹೊಳೆ ಯೋಜನೆ : ಜನಪ್ರತಿನಿಧಿಗಳಿಗೆ 10 ಪ್ರಶ್ನೆಗಳು]
ಹೇಗಿರಲಿದೆ ಪ್ರತಿಭಟನೆ? : 'ಪಂಪ್ ವೆಲ್ ವೃತ್ತದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ರಸ್ತೆಯಲ್ಲಿಯೇ ವೇದಿಕೆ ನಿರ್ಮಿಸಲಾಗುತ್ತದೆ. ಹೋರಾಟಗಾರರು ಈ ವೇದಿಕೆ ಮುಖಾಂತರವೇ ಭಾಷಣ ಮಾಡಲಿದ್ದಾರೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಈ ಪ್ರತಿಭಟನೆ ನಡೆಯಲಿದೆ' ಎಂದು ದಿನೇಶ್ ಹೊಳ್ಳ ಹೇಳಿದ್ದಾರೆ. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]
ಹಿಂದಿನ ಚರ್ಚೆ ಬೇಡ : 'ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಹಿಂದೆ ನಡೆದಿರುವ ಚರ್ಚೆಗಳು ಈಗ ಅಗತ್ಯವಿಲ್ಲ. ಮುಂದಿನ ಹೋರಾಟದ ಬಗ್ಗೆ ಮಾತ್ರ ಈಗ ಚರ್ಚೆ ಮಾಡುತ್ತೇವೆ. ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಅನೇಕರು ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಉಳಿದ ರಾಜಕೀಯ ನಾಯಕರು ಹೋರಾಟಕ್ಕೆ ಬೆಂಬಲ ಕೊಟ್ಟರೆ ಹೆಚ್ಚು ಪರಿಣಾಮ ಬೀರುತ್ತದೆ' ಎಂದು ದಿನಕರ್ ಶೆಟ್ಟಿ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.












Click it and Unblock the Notifications